Saturday, 30 September 2023

ಪ್ರೇಮ ಎಂದರೆ ಸಿಗದಿರುವ ಕವಿತೆಯ ಸಾಲು

ಅವರಿಬ್ಬರೂ ಅಮರ ಪ್ರೇಮಿಗಳು ಒಂದಾಗದೆ ಉಳಿದುಬಿಟ್ಟರು, ಪ್ರೇಮಿಸಿದ ಅವರಿಬ್ಬರನ್ನೂ ಶಾಶ್ವತ ವಿರಹ ಕಾಡಿತು, ಮತ್ತೆಂದೂ ಅವರು ಒಂದಾಗಲೇ ಇಲ್ಲ, ಈ ಸಾಲುಗಳನ್ನೆಲ್ಲಾ ಕೇಳಿದಾಗ ಎದೆಯೊಳಗೊಂದು ಸಂಕಟದ ಸೆಳಕು ಮೂಡಿಬಿಡುತ್ತದೆ. ಯಾರಿಗಾಗಿಯೊ ಕಣ್ ತುಂಬಿ ಮಿಡಿಯುತ್ತದೆ. ದೇವರಂತಹ ದೇವರೂ ತಥಾಸ್ತು ಅಂದಿದ್ದರೆ ಪ್ರೇಮ ಫಲಿಸುತ್ತಿತ್ತೇನೊ ಅನ್ನಿಸುತ್ತದೆ. ಆದರೆ, ಪ್ರೇಮ ಎಂದರೆ ಉತ್ಕಟ ಭಾವತೀವ್ರತೆಯಿಂದ ಬಯಸಿದ್ದನ್ನು ಪಡೆಯುವುದಾ? ನನ್ನದು ಅನ್ನುವ ಭಾವದಿಂದ ಅದು ನನ್ನದೇ ಆಗಿ ಉಳಿಯಲಿ ಅನ್ನುವುದಾ? ಇಬ್ಬರೂ ಜೊತೆಯಾಗಿ ಸುಖಾಂತ್ಯ ಕಾಣುವ ಸಂಭ್ರಮವಾ? ಒಂದಾಗದೆ ಉಳಿದು ಹೋಗುವ ಹೂ ಗುಲಾಬಿಯಂತಹ ಚೆಂದ ಚೆಂದದ ಪ್ರೇಮಿಗಳದ್ದು ವಿಫಲ ಪ್ರೇಮವಾ?

ಪ್ರೇಮ ದಕ್ಕಿಸಿಕೊಳ್ಳುವುದಲ್ಲ, ಒದಗಿ ಬರುವುದು. ಒದಗದೆ ಉಳಿದಾಗ ಧಾರಾಳವಾಗಿ ತೊರೆದು ಬರುವುದು. ಪ್ರೇಮ ಎಂದರೆ ಸಿಗದಿರುವ ಕವಿತೆಯ ಸಾಲನ್ನು ಸುಮಧುರವಾಗಿ ಗುನುಗುನಿಸಿ ಎದ್ದು ಬರುವುದು. ಪ್ರೇಮ ಎಂದರೆ ಫಲಿಸದಾಗಲೂ ಅದಕ್ಕೆ ಹೂಮಳೆಯ ಅಕ್ಷತೆ ಹಾಕಿ ಹರಸಿ ಬರುವುದು.

ಪ್ರೇಮವೆಲ್ಲವೂ ಫಲಿಸುವುದಿಲ್ಲ, ಅದೆಷ್ಟೋ ಎದೆಕಾವ್ಯದ ಹಾಡು ಪಯಣದ ನಡುವೆಯೆ ಮರೆಯಾಗುತ್ತದೆ. ಮನೆಯಂಗಳದ ಹೂವೊಂದನ್ನ ಯಾರೊ ಯಾವುದೊ ಹೊತ್ತಲ್ಲಿ ಕೊಯ್ದು ಹೋದಂತೆ, ಜೊತೆ ನಡೆದವರು ಹೇಳದೆ ಕೇಳದೆ ಪಥ ಬದಲಾಯಿಸಿದ ಹಾಗೆ ಖಾಲಿತನವನ್ನು ಬಿಟ್ಟು ತೆರಳುತ್ತಾರೆ. ಪ್ರೇಮಲೋಕದಲ್ಲಿ ಸೂತಕ ಆವರಿಸುತ್ತದೆ. 

ಆಗ ಎದ್ದು ಬರಬೇಕು, ಅಮೃತದಂತಹ ಪ್ರೇಮವೇ ಮೈತುಂಬಾ ನಂಜಾಗಿ ಹಿಂಡಿ ಹಿಪ್ಪೆ ಮಾಡುವ ಹೊತ್ತಿಗೆ, ಎದೆಯಲ್ಲೊಂದು ಶೋಕ ಪುಷ್ಪವಿಟ್ಟು ವಿವೇಕದ ಮಾತನ್ನಾಲಿಸಿ ಎದ್ದು ಬರಬೇಕು. ಮುಖದಲ್ಲೊಂದು ಹುಸಿ ನಗೆಯೇ ಸರಿ ಆದರೆ ಎದೆಯೊಳಗೊಂದು ಭರವಸೆಯ ದೀಪ ಹಚ್ಚಿ ದಾರಿ ಸವೆಸಬೇಕು. 

ತ್ಯಾಗ ಪ್ರೀತಿಯ ಅತ್ಯುನ್ನತ ಪೂಜೆ! ಕಟುವಾಗಿ ಮಾತನಾಡುವುದಲ್ಲ, ದೂರುವುದಲ್ಲ, ನೋವಿನ ಮೊನಚು ಮಾತನ್ನೆಸೆಯುವುದಲ್ಲ, ಹೆದರಿಸುವುದಲ್ಲ, ಬೆದರಿಸುವುದಲ್ಲ, ಎಳೆದಾಡುವುದು, ಅವಮಾನಿಸುವುದು, ಘನತೆರಹಿತವಾಗಿ ವರ್ತಿಸುವುದೂ ಅಲ್ಲ. ತ್ಯಾಗ ಮಾಡಿ ಎದ್ದು ಬರುವುದು.

ಬದುಕಿನಲಿ ಸಂಧಿಸುವುದು ಎಷ್ಟು ಸತ್ಯವೊ ಅಗಲಿ ದೂರವಾಗುವುದು ಅಷ್ಟೇ ಸತ್ಯ ಅದನ್ನು ಒಪ್ಪಿಕೊಳ್ಳದೆ ಬೇರೆ ನಿರ್ವಾಹವಿಲ್ಲ. ದಕ್ಕದ ಪ್ರೇಮವನ್ನು ತ್ಯಾಗ ಮಾಡುವ ಗುಣ ದೊಡ್ಡದು. ಪ್ರೀತಿಸಿದವರು ನಮ್ಮವರಾಗಲಿಲ್ಲ ಎನ್ನುವ ದುಃಖಕ್ಕಿಂತ ನಾವು ಪ್ರೀತಿಸಿದವರ ಬಾಳು ಬಂಗಾರವಾಗಲಿ ಎಂದು ಆಶಿಸುವುದು ಪ್ರಬುದ್ಧತೆ ಅಲ್ಲವಾ? ಅದಲ್ಲವೆ ನಮ್ಮ ಪ್ರೀತಿಯ ರೀತಿ?

ಬದುಕು ಬಂಗಾರವಾಗುವುದು ಬಲಾಢ್ಯತೆಯಲ್ಲಿ ಅಲ್ಲ ಗಟ್ಟಿತನದಲ್ಲಿ, ಗೆಲ್ಲುವುದರಲ್ಲಿ ಅಲ್ಲ ಸೋತು ಗೆಲ್ಲುವುದರಲ್ಲಿ. ಕೆ ಎಸ್ ನರಸಿಂಹಸ್ವಾಮಿ ಅವರ ದಕ್ಕದ ನೀಲಾಳಿಗಾಗಿ ಅವಳ ಪ್ರಿಯತಮ ಹೇಳುವುದನ್ನು ಅದೆಷ್ಟು ಚೆನ್ನಾಗಿ ನಿರೂಪಿಸಿದ್ದಾರೆ ಗೊತ್ತಾ, "ನೀಲಾಳಿಗೆ ನನ್ನ ಕನಸೂ ಸಹ ಬೀಳುವುದು ಬೇಡ, ಹಾಲುಂಡು ಹೂ ಮುಡಿದು, ಸುಖವಾಗಿರಲಿ"
ಇದಾಗ ಬೇಕು ನಮ್ಮ ಪ್ರೀತಿಯ ನೀತಿ.

ಮಿಂಚೊ, ಗುಡುಗೊ, ಕತ್ತಲೊ, ಮಳೆಯೊ, ಬಿರುಗಾಳಿಯೊ, ಅಲೆಯೊ, ಹೆದ್ದೆರೆಗಳೊ ನಮ್ಮ ಬದುಕಿನ ನಾವೆ ಮಾತ್ರ ದಿಕ್ಕೆಡದೆ ಶಾಂತವಾಗಿ ದಡ ಸೇರಲಿ‌‌.

#ನಕ್ಷತ್ರಮೌನಿ

Sunday, 17 September 2023

ಹೇಳದೆ ಹೋಗಿ ಬಿಡುವ ನೋವು ಸದಾ ಕಾಲಕ್ಕೂ ಉಳಿದು ಬಿಡುವ ಈತಿಬಾಧೆ.

ಯಾರೂ ಬೇಕಾಗಿಲ್ಲ ಎನ್ನುವ ನಿರ್ಲಿಪ್ತ, ನಿಶಾಂತ ಆಪ್ಯಾಯಮಾನ ನಸುಗತ್ತಲ ಬದುಕಿಗೆ ಕಿಟಕಿಯೊಳಗೆ ಇಣುಕುವ ಬೆಳ್ಳನೆ ಬೆಳಕಿನ ಹಾಗೆ ಅದ್ಯಾರೊ ಅದೆಲ್ಲಿಂದಲೋ ಗೊತ್ತು ಗುರಿಯಿಲ್ಲದೆ ಬಂದು ಬಿಡುತ್ತಾರೆ. ಯಾಕೆ ಬಂದರೊ, ಇವರೇಕೆ ಹೀಗೆ ಹಿಂದೆ ಬೀಳುತ್ತಿದ್ದಾರೆ, ಇವರಿಗೆ ಈ ಲೋಕದಲ್ಲಿ ಬೇರೆ ಯಾರೂ ಇಲ್ಲವಾ ಎಂದೆಲ್ಲಾ ಯೋಚಿಸುವಷ್ಟರಲ್ಲಿ ಅವರ ಕಾಳಜಿ, ಮಾತು, ನಗು ಇಷ್ಟವಾಗತೊಡಗುತ್ತದೆ. ಹೊರಗೆ ನೋಡಿದರೆ ಎಂದಿನ ತೋಟದಲಿ ಹೊಸ ಬಣ್ಣದ ಹೂವು, ಅದೇ ಮರದಲ್ಲಿ ಹಾಡುವ ಅದೇ ಹಕ್ಕಿಯ ದನಿಯಲ್ಲಿ ಹೊಸ ಸಂಗೀತ, ಟೇಬಲಿನಲ್ಲಿನ ಪುಸ್ತಕದಲ್ಲಿ ಪೆನ್ನು ಅರಿವಿಲ್ಲದೆ ಅವರ ಹೆಸರು ಬರೆಯತೊಡಗಿದೆ! 

ಬೆಳಗಿನಿಂದ ರಾತ್ರಿಯವರೆಗೆ ಮೊಬೈಲಿನ ತುಂಬಾ ಅವರದೇ‌ ಆದ ಧಾಟಿಯಲ್ಲಿ ಮೆಸೆಜುಗಳ ಮಾತುಕತೆ. ಆ ಧಾಟಿಗೆ, ಅದನ್ನು ಓದುವ ಓಘಕ್ಕೆ ಮನಸ್ಸು ಒಗ್ಗಿಕೊಳ್ಳತೊಡಗುತ್ತದೆ. ಓದುವಾಗೆಲ್ಲಾ ಅವರದೇ ದನಿ ಮತ್ತು ಶೈಲಿಯಲ್ಲೇ ಓದ ತೊಡಗುತ್ತದೆ ಮನಸ್ಸು! ಆಹಾ!! ಇದೇನು, ಹೀಗೇಕೆ ಎಂದೆಲ್ಲಾ ತಿಳಿಯುವಷ್ಟರಲ್ಲಿ ಅವರ ಭೇಟಿ ಸುಖಾಸುಮ್ಮನೆ ಖುಷಿ ಕೊಡತೊಗುತ್ತದೆ. ಒಂದು ಲಾಂಗ್ ರೈಡ್, ಅದ್ಯಾವುದೋ ದೇವಸ್ಥಾನದ ಕಟ್ಟೆ, ಇನ್ನೆಲ್ಲಿಯದೊ ಸಂಜೆ ಕರಗುವ ಬೆಟ್ಟ, ಬೆಳದಿಂಗಳ ಹಾಲು ಬೆಳಕಿನ ಹೊಳೆ ಎಲ್ಲವೂ ಇವರಿಂದಲೇ ಇಷ್ಟು ಸೊಗಸೊ ಅಥವಾ ಸೊಗಸಿರುವ ಜಾಗೆಗಳಿಗೆ ನಾವು ಜೊತೆಯಾಗಿ ಬಂದೆವೊ ತಿಳಿಯದಾಗುತ್ತದೆ.

ದಿನ ಶುರುವಾಗುವುದು ಅದೇ ಮೆಸೆಜಿನಿಂದ, ಒಂದು ಇಮೋಜಿಗೆ ಇಡೀ ದಿನದ ಉಲ್ಲಾಸ ಮೂಡಿಸುವ ತಾಕತ್ತು ಇದೆ ಎಂದು ಅವರ ಮೆಸೆಜಿನಿಂದಲೇ ತಿಳಿದಿದ್ದು. ಕನಸುಗಳು ಯಾಕೊ ಈಗ ಅವರ ಸುತ್ತವೇ ಮೊಳೆಯ ತೊಡಗಿದೆ ಅನ್ನಿಸುತ್ತದೆ. ಬದುಕಿನ ಮುಂದಿನ ಪಯಣಕ್ಕೆ ಯಾರೊ ಜೊತೆಗಿರುವಂತೆ, ಇನ್ನೇನಿದ್ದರೂ ಅವರನ್ನು ಹೊರತುಪಡಿಸಿ ಯಾವುದನ್ನೂ ನಿರ್ಣಯಿಸಲಾರೆ ಎನ್ನುವಂತೆ. 

ಪ್ರೀತಿ ಎಂದರೆ ಹಬ್ಬ! ಪ್ರೀತಿ ಎಂದರೆ ಸಂಭ್ರಮ!! ಪ್ರೀತಿ ಎಂದರೆ ನೀನು!!! 
 ಹೀಗೆ ಕಳುಹಿಸಿದರೆ ಅಲ್ಲೆಲ್ಲೊ ಜಾತ್ರೆಯಂತಹ‌ ಸಂಭ್ರಮ! ಅವರು ಹಾಗೆ ಕಳಿಸಿದ್ದಾದರೆ ಎದೆಯೊಳಗೆ ನದಿ ಹರಿದಂತೆ. ಗುಪ್ತಗಾಮಿನಿ!!
 
ಕಿಟಕಿಯಿಂದ ಇಣುಕಿದ ಬೆಳಕಷ್ಟೇ ಅಲ್ಲ ಇದು, ಬದುಕಿನ ಪೂರ್ತಿ ಹಬ್ಬಿಕೊಂಡ ಸೂರ್ಯಪ್ರಭೆ. ಇನ್ನು ಈ ಬಾಳಲಿ ಸದಾ ಹೊಂಬೆಳಕಿನದ್ದೇ ಫಳ ಫಳಿಸುವ ಬೆಳಕಿರಲಿದೆ ಎಂದು ಮನಸ್ಸು ಒಪ್ಪ ತೊಡಗುತ್ತದೆ. ಹೌದಾ? ನಿಜವೇ? ಎನ್ನುವ ಪ್ರಶ್ನೆ ಮನಸ್ಸಲ್ಲಿ ಮೂಡಿದರೂ ಹೌದೂ ಇದಿನ್ನು ಶಾಶ್ವತ ಪ್ರೀತಿ ಎನ್ನಲು ಸಾವಿರ ಕಾರಣಗಳಿರುತ್ತದೆ. ಅವರು ಕಳುಹಿಸಿದ ಹೂನಗೆಯ ಇಮೋಜಿಯಿಂದ ಹಿಡಿದು ದೇವಸ್ಥಾನದಲ್ಲಿ ಹಣೆಗೆ ಹಚ್ಚಿದ ಪ್ರಸಾದದ ತನಕ ಸಾವಿರ ಸಾಕ್ಷಿ ಕೊಡಬಲ್ಲೆ ಎನ್ನುತ್ತದೆ ಪ್ರಶ್ನೆ ಕೇಳಿದ ಅದೇ ಮನಸ್ಸು!!

ಆದರೆ, ಆದರೆ ಈಗೇಕೊ ಮೊದಲಿನಂತಿಲ್ಲ, 
ಪ್ರೀತಿ ಎಂದರೆ ಹಬ್ಬ! ಪ್ರೀತಿ ಎಂದರೆ ಸಂಭ್ರಮ!! ಪ್ರೀತಿ ಎಂದರೆ ನೀನು!!! 
ಸಾವಿರ ಸಲಿ ಹೇಳಿದ ಇದೇ ಸಾಲುಗಳನ್ನು ಈಗ ಕಳುಹಿಸಿದರೆ ಯಾಕೊ ಮೊದಲಿನ ಭಾವತೀವ್ರತೆ ಕಾಣಿಸಿದಂತೆ ಇಲ್ಲ. ಯಾಕೆ ಹೀಗೆ? ಕೇಳಲಾಗದು, ಕೇಳಿದರೆ ತಪ್ಪಾದೀತಾ?? 
ಮೆಸೆಜು ಕಳುಹಿಸಿ ಅರ್ಧಗಂಟೆ ಮರುತ್ತರಕ್ಕೆ! ಯಾವುದೊ ಒತ್ತಡ, ಬ್ಯುಸಿ ಇದ್ದೆ ಅನ್ನುವ ಒಂದು ಢಾಳಾದ ಸಂದೇಶ. ಕೈಯಲ್ಲೆ ಮೊಬೈಲ್ ಇತ್ತಲ್ಲವೆ? 
ಯಾಕೆ ಹೀಗೆ? ಕೇಳಲಾಗದು, ಕೇಳಿದರೆ ತಪ್ಪಾದೀತಾ??

ಸಿಗಬಹುದೆ? 
"ಇಲ್ಲ, ಈ ವಾರ ಆಗುವುದಿಲ್ಲ".
 ಫೋನಿಗೆ ಸಿಗಲೊಲ್ಲರು, ಮೆಸೆಜುಗಳಲ್ಲಿ ಜೀವಂತಿಕೆ ಇಲ್ಲ, ಇರುವ ಶಬ್ಧಗಳಲ್ಲಿ ಮಾತಿಗಿಂತ ಮೌನವೇ ಹೆಚ್ಚು. 
ಎದೆಯೊಳಗೆ ಇದೇನೊ ನೋವಿನ ಸೆಳಕಿದೆ. ಹೇಳಿಕೊಂಡರೆ, "ಹಾಗೇನಿಲ್ಲ ನೀನು ಯಾಕೊ ಈಗೀಗ ಸುಮ್ಮನೆ ಒದ್ದಾಡುತ್ತೀಯಾ ಅನ್ನುವ ಹಾರಿಕೆಯ ಉತ್ತರ".

ಹಾ! ಆದೊಂದು ದಿನ ಇನ್ನು ಸಹಿಸಲಾಗದು ಎಂದು ಎದ್ದೋಡಿ ಅವರ ಮುಂದೆ ನಿಂತು ಮಾತು ಕೊಂಕಣ ಸುತ್ತದೆ ನೇರಾನೇರ ಎನ್ನುವಂತೆ ಕೇಳಿಯೇ ಕೇಳಿದಾಗ ತಪ್ಪಿತಸ್ಥ ಸ್ಥಾನದಲ್ಲಿ ಅವರಲ್ಲ ನಾವೇ ನಿಲ್ಲಬೇಕಾಯಿತು.

ನಿಮ್ಮ ಪ್ರಶ್ನೆಗಳು ಉಸಿರುಗಟ್ಟಿಸುತ್ತದೆ, ನಿಮ್ಮ ಅನುಮಾನಗಳು ಹಿಂಸೆ, ಇಲ್ಲದನ್ನು ಕಲ್ಪಿಸಿಕೊಂಡಿರಿ ಎಂದು ದಾರಿ ಹಿಡಿದು ಹೊರಟಿದ್ದರು!!

ಕೇಳಲಾಯಿತು, ಅಂಗಲಾಚಲಾಯಿತು, ಕೈಮುಗಿಯಲಾಯಿತು, ಬೇಡಲಾಯಿತು, ತಪ್ಪಿದ್ದರೆ ಕ್ಷಮಿಸು ಎನ್ನಲಾಯಿತು. ಮತ್ತೆ ಮೊದಲಿನ ಹಾಗೆ ಇರಬಹುದೆ ಕೇಳಲಾಯಿತು. ಇಲ್ಲ, ಅಲ್ಲಿ ಅವರಿರಲಿಲ್ಲ. ನಾವು ಕೇಳುವ ಅದೆಷ್ಟೋ ಮೊದಲೆ ಅವರು ಪಥ ಬದಲಿಸಿದ್ದರು. ಇವರೇಕೊ ಬದಲಾಗಿದ್ದಾರೆ ಅಂದುಕೊಳ್ಳುವಷ್ಟರಲ್ಲಿ ಅವರು ಬದಲಾಗಿ ಕಾಲಗಳೇ ಕಳೆದಿದ್ದವು. 

ಇನ್ನೀ ಬದುಕನ್ನು ಮತ್ತೆ ಮೊದಲಿನ ಹಾಗೆ ಆಗಿಸುವುದೂ ಸಾಧ್ಯವಿಲ್ಲವೇನೋ ಅನ್ನಿಸತೊಡಗುತ್ತದೆ. ಆ ದಾರಿ, ದೇವಸ್ಥಾನ, ಈ ಬೆಟ್ಟ, ಅಗೊ ಆ ಬೀದಿ, ಈ ಹಾಡಿನ ಸಾಲು ಎಲ್ಲವೂ ಅವರ ನೆನಪಿನ ಜೊತೆ ತಳಕು ಹಾಕಿಕೊಂಡಿದೆ. ಅದನ್ನೆಂತು ಬದಲಿಸುವುದು. ಉಸಿರಾಡಲು ಸಂಕಟವಾಗುವಷ್ಟು ನೋವಿಟ್ಟು ಹೋದರೆ? ಇಷ್ಟು ಪ್ರೀತಿ ಕೊಟ್ಟದಕ್ಕೆ ಇಷ್ಟು ನೋವು ಕೊಟ್ಟರೆ? ನಾವಿಲ್ಲಿ ಅನುಭವಿಸುವ ಸಂಕಟದ ಪರಿವೆಯೂ ಇಲ್ಲದಂತೆ ನಡೆದದ್ದಾದರೂ ಹೇಗೆ? ಇಷ್ಟೇನಾ ಅವರ ಪ್ರೀತಿಯ ರೀತಿ?!!

ಸೂರ್ಯಪ್ರಭೆಗೆ ಮಂಕು ಕವಿಯಿತೆ? ಬದುಕಿನ ಬೆಳಕೆಲ್ಲಾ ಕಳೆದು ಕತ್ತಲಡರಿದ ಹಾಗೆ. ಒಂಟಿ ಬದುಕಿಗೆ ಹೀಗೆ ಬಂದು ಹಾಗೆ ಹೋದವರು ಬದುಕಲ್ಲಿ ಒಂಟಿಯಾಗಿ ಬದುಕುವುದನ್ನೇ ಮರೆಸಿಬಿಟ್ಟು ಹೋದಂತೆ. ಹೊಸ ಹೂವಿನ ಬಣ್ಣ ಮಾಸಿದ ಹಾಗೆ, ಹೊಸ ಸಂಗೀತದ ಹಕ್ಕಿಯ ದನಿ ಕಟ್ಟಿದ ಹಾಗೆ, ಅವರ ಹೆಸರು ಬರೆದ ಹಾಳೆ ಅಲ್ಲೇ ಉಳಿದ ಹಾಗೆ. 
ಈಗ ಕತ್ತಲಾದ ಬದುಕಿಗೆ ಮತ್ತೆ ಅವರ ಕಿಟಕಿ ಗಾತ್ರದ ಬೆಳಕಿಗೆ ಕಾಯುವುದಷ್ಟೇ ಉಳಿದು ಹೋಯಿತು. 
ಹೋಗುವ ಮುನ್ನ ಒಮ್ಮೆಯಾದರೂ ಕಾರಣ ಹೇಳಬಹುದಿತ್ತು, ಪ್ರೀತಿಯಿಂದ ನಾನೇ ಕಳುಹಿಸುತ್ತಿದ್ದೆ. ಹೇಳದೆ ಹೋಗುವುದು ಸಂಕಟ ತರುತ್ತದೆ. ಏಕೆಂದರೆ,  ಹೇಳದೆ ಹೋಗಿ ಬಿಡುವ ನೋವು ಸದಾ ಕಾಲಕ್ಕೂ ಉಳಿದು ಬಿಡುವ ಈತಿಬಾಧೆ. 

#ನಕ್ಷತ್ರಮೌನಿ

Saturday, 9 September 2023

ಕಳೆದು ಹೋದ ಬಾನಿನಲ್ಲಿ ನಕ್ಷತ್ರವಾದವರು!

ನಾನು ನನ್ನ ಹೆತ್ತವರ ಬಗ್ಗೆ ಹೇಳಿಕೊಂಡದ್ದೇ ಕಡಿಮೆ. ಹೇಳಿಕೊಳ್ಳುವುದಾದರೂ ಏನಿದೆ, ಎಲ್ಲರಿಗೂ ಅವರವರ ತಂದೆ ತಾಯಿ ಪೂಜ್ಯರೇ. ಆದರೂ ಅವರ ಒಂದಷ್ಟು ನೆನಪುಗಳು ಇಂದು ಬಟಾಬಯಲಲ್ಲಿ ಹೆಮ್ಮರವಾಗಿ ಹೂ ಬಿಟ್ಟು  ಧ್ಯಾನಸ್ಥವಾಗಿದೆ. 
ಅಮ್ಮನದ್ದು ಬೆರಗು ಕಣ್ಣು. ಅವಳ ಹಣೆಯ ಇಷ್ಟಗಲದ ಕುಂಕುಮವೇ ಸಾಕು ಅವಳ ಚೆಂದಕ್ಕೆ. ಮನೆಯ ಹಿತ್ತಲಲ್ಲಿ ಅವಳೇ ಬೆಳೆದ ಸಣ್ಣದೊಂದು ಕೈ ತೋಟವಿತ್ತು. ತೊಂಡೆ, ಬಸಳೆ, ಹರಿವೆ, ಕರಿಬೇವು ಅವಳ ಆ ಕುಪ್ಪಿ ಬಳೆಯ ನಾದಕ್ಕೆ ಚಿಗುರೊಡೆಯುತ್ತದೆಯೊ ಅನ್ನಿಸುವಂತೆ ಸೊಂಪಾಗಿ ಬೆಳೆಯುತ್ತಿತ್ತು. ದಸವಾಳವೆಂದರೆ ಅವಳಿಗದೊಂದು ಪ್ರೀತಿ. ಬಣ್ಣ ಬಣ್ಣದ ದಾಸವಳದ ಒಂದು ತುಂಡು ಕೋಲು ತಂದು ಊರಿಟ್ಟು ಬಿಡುತ್ತಿದ್ದಳು. ಆದರೆ ಅದೊಂದು ದೊಡ್ಡ ದಾಸವಾಳದ ಮರದಲ್ಲಿ ಮಾತ್ರ ಕೆಂಪು ಹೂವಿನ ಜಾತ್ರೆ ದಿನ ದಿನವೂ ಇರುತ್ತಿತ್ತು. ಅಪ್ಪನ ದೇವರ ಪೂಜೆಗೆ ಅದೇ ಮರದ ಹೂ ಯಥೇಚ್ಛ. ಅಪ್ಪನ ನಗುವಾದರೂ ದಾಸವಾಳದ ಹೂವಿನಷ್ಟು ಧಾರಾಳವಲ್ಲ. ನಕ್ಕರೆ ಮಾತ್ರ ಮರ ತುಂಬಿದ ಸಂಪಿಗೆ!
ಮುಂಜಾವಿಗೆ ಆಕೆ ಕಾಣಸಿಗುತ್ತಿದ್ದದ್ದೇ ಸ್ಟೌವ್ ಮುಂದೆ ನೀರು ದೋಸೆ ಎರೆಯುತ್ತಾ, ಅವಳ ಮರೆಗೆ ಪುಸ್ತಕ ಹಿಡಿದು ಕೂತ ನನಗೆ ಆಕೆ ದೋಸೆ ಹೋಯ್ಯವುದೇ ಬೆರಗು. ಅದನ್ನು ನೋಡುತ್ತಲೇ ಪುಸ್ತಕ ಮರೆತ್ತದಿದೆ. ಆಕೆ ಬೀಡಿ ಕಟ್ಟುತ್ತಿದ್ದರೆ ನಾನವಳ ಜಡೆ ಹೆಣೆಯುತ್ತಿದ್ದೆ.
ಬೀಡಿಯನ್ನೆಲ್ಲಾ ಚೀಲದಲ್ಲಿ ತುಂಬಿ ಕೊಟ್ಟರೆ ನನ್ನದೊಂದು ಸೈಕಲಿನಲ್ಲಿ ಅದನ್ನು ಕಂಪೆನಿಗೆ ತಲುಪಿಸುವ ಜವಾಬ್ದಾರಿ ಮಾತ್ರ ನನ್ನ ಮೇಲಿರುತ್ತಿತ್ತು. ಅಡುಗೆಮನೆಯ ಎಲ್ಲಾ ಪಾತ್ರೆಗಳಿಗೂ ಅಧಿಕೃತ ಪರಿಚಯ ಅವಳದ್ದು ಮಾತ್ರ. ಅದು ಅವಳ ಕರ್ಮ ಭೂಮಿ. ಅವಳ ಆಣತಿಯಂತೆ ಅಲ್ಲಿ ಎಲ್ಲವೂ ಕುದಿಯುವುದು, ಬೇಯುವುದು. ಕುಕ್ಕರಿಗೂ ಇಂತಿಷ್ಟೇ ಕೂಗು ಹಾಕುವ ಜವಾಬ್ದಾರಿ ಇತ್ತು. ಅದು ಮಿತಿಮೀರುವ ಮುನ್ನವೇ ಅದರ ಆಟ ನಿಲ್ಲಿಸುತ್ತಿದ್ದಳು. ಕೆಲವೊಮ್ಮೆ ಆ ಕೆಲಸ ನನಗೂ ದಯಪಾಲಿಸುತ್ತಿದ್ದಳು. ಆಗೆಲ್ಲಾ ಕಿವಿಯಾಗಿ ಕಣ್ಣಾಗಿ ಕಾಯಬೇಕಿತ್ತು. ಶಾಲೆಯ ಗಣಿತ ತಪ್ಪದ ಹಾಗೆ ಪ್ರತಿ ವಿಸಿಲ್ಲಿಗೂ ಕೈಬೆರಳ ಲೆಕ್ಕ ಹಾಕುತ್ತಾ ಅವಳ ಆದೇಶದ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ತೆಗೆದುಕೊಳ್ಳಬೇಕಿತ್ತು. ಹಾಲಿಗಾದರೂ ಇದೇ ಗತಿ. ಕುದಿ ಬಂದು ಮೇಲೇರಿ ಉಕ್ಕಿ ಚೆಲ್ಲುವ ಸ್ವಾತಂತ್ರ್ಯವನ್ನೇ ಆ ಹಾಲಿನ ಪಾತ್ರೆಗೆ ಕೊಡುತ್ತಿರಲಿಲ್ಲ. ಎಲ್ಲಿಯಾದರೂ ಮೈ ಮರೆತು ಉಕ್ಕಿ ಹೋದರಂತೂ ಒಂದು ರಾಜ್ಯವನ್ನೇ ಸೋತಂತೆ ಹಳಹಳಿಸುತ್ತಿದ್ದಳು. ನನಗೆ ಆ ಜವಾಬ್ದಾರಿಯಂತೂ ಅತಿ ಕಷ್ಟದ್ದೇ ಅಂತ ಅನ್ನಿಸುತ್ತಿತ್ತು. ಪಾತ್ರೆ ನೋಡಿದಷ್ಟೂ ಹೊತ್ತು ಅದು ಕುದಿಯುತ್ತಲೇ ಇರಲಿಲ್ಲ, ಹಾಳಾದ್ದು ಅಂತ ಕಣ್ಣು ಕದಲಿಸಿದ ಕೂಡಲೆ ಉಕ್ಕಿ ಚೆಲ್ಲಿ ಆಗಿರುತ್ತಿತ್ತು!! ಇಂತಹ ಅವಳ ಆ ಅಡುಗೆ ಮನೆಯಲ್ಲಿ ಅವಳೆದರು ದೈನ್ಯದಿಂದ ಬೇಡುತ್ತಿದ್ದದ್ದು ಮಾತ್ರ ಒಂದು ಚಮಚ ಹಾಲಿನ ಹುಡಿಗೆ ಮತ್ತು ಕಾಯಿ ಹೆರೆಯುವಾಗ ಒಂದಿಷ್ಟು ಕಾಯಿ ತುರಿಗೆ!!
ಅವಳ ಅಡುಗೆಗೆ ಇದ್ದ ಘಮವೇ ಬೇರೆ. ಸಾಲಾಗಿ ಮನೆಗಳಿದ್ದರೂ ಶಾಲೆಯಿಂದ ಮಧ್ಯಾಹ್ನದ ಊಟಕ್ಕೆ ಮನೆಗೆ ಬರುವಾಗ ದಾರಿಯಲ್ಲಿ ಒಗ್ಗರಣೆಯ ಪರಿಮಳದಲ್ಲೇ ಅದು ನಮ್ಮ ಮನೆಯದ್ದೆ ಎಂದು ಗುರುತಿಸುವುದು ನನಗಂತೂ ಸಿದ್ಧಿಸಿತ್ತು. ಅವಳು ಮಾಡುತ್ತಿದ್ದ ಮೆಣಸ್ಕಾಯಿ, ತೊಗರಿ ಗಸಿ, ತಾಳ್ಳಾ, ಬೊಂಡಾಸ್ ಸುಕ್ಕ, ಸೋರೆ ಪಾಯಸ ಅವಳಷ್ಟೇ ಮಾಡಬಹುದೇನೊ ಅನ್ನಿಸುತ್ತಿತ್ತು. 
ಕೆಲಸದಿಂದ ಅಪ್ಪ ಬಂದರೆ ಅವನಿಗೆ ಸುಸ್ತೇ ಇರಲಿಲ್ಲವೆ ಎಂದು ಈಗ ನಾನು ಕೆಲಸ ಮುಗಿಸಿ ದಣಿದು ಬರುವಾಗ ಅನ್ನಿಸುತ್ತದೆ. ಅವನ ಮುಖದಲ್ಲಿ ಅದೆಂದೂ ಕಾಣಿಸಲಿಲ್ಲ, ಅಲ್ಲಲ್ಲ ಆತನೆಂದೂ ತೋರಿಸಲಿಲ್ಲ. ಎಲ್ಲರ ಅಪ್ಪಂದಿರಂತೆ ಅವನದು ಶ್ರಮ ಜೀವನ. ದುಡಿದು ದುಡಿದೇ ಬದುಕು ಕಳೆದವನು. ಹಬ್ಬದಲ್ಲೂ, ಸಂಭ್ರಮದಲ್ಲೂ ಅವನಿಗೆ ಪಾಲೇ ಇಲ್ಲದಂತೆ ಇದ್ದು ಬಿಡುತ್ತಿದ್ದ, ಕಷ್ಟದಲ್ಲಿ ಶ್ರಮದಲ್ಲಿ ಎಲ್ಲವೂ ಅವನದಷ್ಟೇ ಎನ್ನುವಂತೆ ಹೊತ್ತುಕೊಳ್ಳುತ್ತಿದ್ದ. ಅವನಿಗಾಗಿ ಏನಿತ್ತು, ಅದೇ ನಾಲ್ಕು ಜೊತೆ ಗೀಟಿನ ಅಂಗಿ ಪ್ಯಾಂಟು ಮತ್ತು ಅವನದೇ ಒಂದು ಸೈಕಲ್ಲು. 
ಆದರೆ, ಅವನ ಜೊತೆ ರಸ್ತೆಯಲ್ಲಿ ನಡೆದು ಹೋಗುವಾಗ ಮಾತ್ರ ಅವನ ಪರಿಚಯದವರು ಒಂದು ಕೈ ಎತ್ತಿ ನಮಸ್ತೆ ಮಾಡುವಾಗ ಮಾತ್ರ ಅಪ್ಪ ತುಂಬಾ ದೊಡ್ಡ ಮನುಷ್ಯ ಇರಬೇಕು ಅನ್ನಿಸುತ್ತಿತ್ತು. ಬಾಲ್ಯವೆಂದರೆ ಹೀಗೆ ಕಟ್ಟಿಕೊಳ್ಳುವುದಲ್ಲವೆ. ಅಪ್ಪನ ಕೈ ಅಡುಗೆಯ ರುಚಿ ಸವಿಯುವುದಕ್ಕೆ ಸಿಗುತ್ತಿದ್ದದ್ದು ಮಾತ್ರ ಒಂದು ಐಟಂ ಮಾತ್ರವೇ ಆಗಿರುತ್ತಿತ್ತು. "ಗೀ ರೈಸ್" ಆತನೇ ಮಾಡಿ ಬಡಿಸುತ್ತಿದ್ದ. ಅದು ಅವನದೇ ಆದ "ಸಿಗ್ನೇಚರ್ ರೆಸಿಪಿ". 
ಅಪ್ಪ ಅಮ್ಮ ಇದ್ಧಾಗ ಬಾಂಧವ್ಯ ಚೆಂದವಿತ್ತು. ಬರುವ ಆತ್ಮೀಯರಿಗೂ ಕಡಿಮೆ ಇರಲಿಲ್ಲ. ಯಾರೇ ಬಂದರೂ ಮನೆ ತುಂಬಾ ಸಂಭ್ರಮ. ಬಗೆ ಬಗೆಯ ಮೀನು ಅಡುಗೆ ಮನೆಗೆ ಪುರುಸೋತ್ತೆ ಕೊಡದಂತೆ ಕುದಿಯುತ್ತಿತ್ತು, ಕಾವಲಿಯಲ್ಲಿ ಹುರಿಯುತ್ತಿತ್ತು! 
ಅವರಿಬ್ಬರದೂ ಒಂದು ಚೆಂದದ ಸಾಂಗತ್ಯವಿತ್ತು. ಅಮ್ಮ ಬೀಡಿ ತಿರುಗಿಸಿ ಕೊಟ್ಟರೆ ಅಪ್ಪ ಅದಕ್ಕೆ ನೂಲು ಸುತ್ತಿ ಕೊಡುತ್ತಿದ್ದ! ಅವರ ಮಾತುಕತೆ, ಗಾಸಿಪ್, ನಿರ್ಣಯಗಳೆಲ್ಲಾ ಆ ಹೊತ್ತೆ ಆಗುತ್ತಿತ್ತು. 

ಜಾತ್ರೆಯಲ್ಲಿ ಕೈ ಬಿಟ್ಟು ತಪ್ಪಿ ಹೋದ ಮಗುವಿನಂತೆ, ಅವರು ದಾರಿ ಮಧ್ಯೆ ಪಥ ಬದಲಿಸಿ ಜೊತೆ ಜೊತೆಯಾಗಿ ಹೊರಟು ಹೋದರು ಬಾರದ ಲೋಕವೊಂದಕ್ಕೆ. ಈಗ ದಾಸವಾಳದ ಮರದಲ್ಲಿ ಹೂವಿಲ್ಲ, ಸಂಪಿಗೆಯ ಮರ ಘಮ್ ಎನ್ನುವುದೂ ಇಲ್ಲ. ಅಡುಗೆ ಮನೆ ಇದೆ ಆದರೆ ಅಲ್ಲಿಯ ಪಾತ್ರೆಗಳೂ ಈಗ ಅವಳನ್ನು ಮರೆತಿದೆ, ಅವು ಯಾವುದಕ್ಕೂ ಈಗ ಆಕೆಯ ಆಣತಿ ಇಲ್ಲ. ಬೇಕಾದಾಗ ಉಕ್ಕುತ್ತವೆ, ಬೇಡವೆಂದಾಗ ಕುಕ್ಕರು ಸೀಟಿ ಹಾಕುತ್ತವೆ. ಏನ್ನಿದ್ದರೂ ಈಗ ಮನೆಗೆ ಸಂಭ್ರಮವಿಲ್ಲ. ಅಡುಗೆ ಮನೆಯಲ್ಲಿ ದಿನ ದಿನವೂ ತರತರದ ಖಾದ್ಯಗಳು ಈಗಲೂ ತಯಾರಾಗುತ್ತದೆ, ಆದರೆ ಅದ್ಯಾವುದಕ್ಕೂ ಅವಳ ಕೈ ಅಡುಗೆಯ ರುಚಿ ಹತ್ತವುದೇ ಇಲ್ಲ. ನಾನಂತೂ ಜೀರಿಗೆ, ಕೊತ್ತಂಬರಿ, ಹುಳಿ ಹೆಚ್ಚು ಕಮ್ಮಿ ಮಾಡಿ ಮಾಡಿಯೇ ಸೋತಿದ್ದೇನೆ. ಅವಳು ಮಾಡುತ್ತಿದ್ದ ಉಪ್ಪಿನಕಾಯಿಯ ರುಚಿಯೂ ನನಗೀಗ ಮರು ತಯಾರಿಸುವುದು ಸಾಧ್ಯವಿಲ್ಲ. ನಾಲಿಗೆ ಮೇಲಿನ ಅವಳ ಅಡುಗೆಯ ರುಚಿಯೂ ಈಗೀಗ ಮರೆತೇ ಹೋಗುತ್ತಿದೆ. ಮತ್ತೆ ಅವರು ಬಂದು ಎಲ್ಲವನ್ನೂ ಮತ್ತೆ ನೆನಪಿಸಿದ್ದರೆ, ಆವಿಯಾದ ನೀರೆ ಮಳೆಯಾಗಿ ಮರಳಿದ ಹಾಗೆ! 

ಅವರು ಬರುವುದಿಲ್ಲ ಎನ್ನುವುದಷ್ಟೇ ಸತ್ಯ, ಏಕೆಂದರೆ ಅವರು ಕಳೆದು ಹೋದ ಬಾನಿನಲ್ಲಿ ನಕ್ಷತ್ರವಾದವರು. 

#ನಕ್ಷತ್ರಮೌನಿ

Saturday, 24 December 2022

ರಾಮರಾಜ ಕ್ಷತ್ರಿಯ/ ಕೋಟೆ ಸಮಾಜದ ಇತಿಹಾಸ, ಇಂದಿನ ಪರಿಸ್ಥಿತಿ, ಮುಂದಿನ ನಿರೀಕ್ಷೆಗಳು

ಯೋಗೀಶ್ ಮಲ್ಲಿಗೆಮಾಡು

ಒಂದು ಕಾಲಘಟ್ಟದ, ಒಂದು ಜನ ಸಮುದಾಯ ಒಂದು ಪ್ರದೇಶದಲ್ಲಿ ಒಂದೇ ರೀತಿಯ ಆಚರಣೆ, ಪದ್ಧತಿ, ನೇಮ, ನಿಷ್ಠೆಗಳನ್ನು ಪರಿಪಾಲಿಸುತ್ತ ಬದುಕುವದನ್ನು ಆಯಾಯ ಸಮುದಾಯದ ಇತಿಹಾಸದಲ್ಲಿ ಕಂಡುಕೊಳ್ಳಲು ಸಾಧ್ಯ. ಭಾರತದಲ್ಲಿ ಇಂತಹ ಅನೇಕ ಸಮುದಾಯಗಳ ಇತಿಹಾಸವನ್ನು ಈ ನಿಟ್ಟಿನಲ್ಲಿ ಸಂಕಲಿಸಲು ಸಾಧ್ಯವಿದೆ. ಜೊತೆಗೆ, ಈ ಎಲ್ಲಾ ಸಮುದಾಯಗಳ, ಇತಿಹಾಸವೂ ಒಂದಕ್ಕೊಂದು ಬೆಸೆದುಕೊಂಡಿರುವುದನ್ನೂ ಕಾಣುತ್ತೇವೆ. ಇದಕ್ಕೆ ಬಹಳ ಪ್ರಮುಖವಾದ ಕಾರಣವೆಂದರೆ ಅದು ಈ ನೆಲದ ಜನರು ನಿರಂತರ ಚಲನಶೀಲವಾಗಿದ್ದದ್ದು. ಭಾಷೆ ಭಾಷೆಗಳ ನಡುವೆ, ಸಮುದಾಯ ಸಮುದಾಯಗಳ ನಡುವೆ, ಪ್ರದೇಶ ಪ್ರದೇಶಗಳ ನಡುವೆ ಇದ್ದ ಕೊಡುಕೊಳ್ಳುವಿಕೆ ಇಂತಹ ವಿಶಿಷ್ಟ ಬೆಸುಗೆಗೆ ಕಾರಣವಾಗಿದೆ. ಆದುದರಿಂದಲೇ, ನಮ್ಮಲ್ಲಿ ಜನಪದೀಯವಾದುದು ಅತ್ಯಂತ ಶಿಷ್ಟವೂ ಹೌದೂ ಮತ್ತು ಅತ್ಯಂತ ಶಿಷ್ಟವಾದವುಗಳು ಜನಪದೀಯವಾಗಿಯೂ ಇರುವುದನ್ನು ಕಾಣಬಹುದಾಗಿದೆ. ಇದೆ ನಿಟ್ಟಿನಲ್ಲಿ "ರಾಮರಾಜ ಕ್ಷತ್ರಿಯ" ಸಮುದಾಯದ ಇತಿಹಾಸವನ್ನು ಅವಲೋಕಿಸುವಾಗಲೂ ನಾವು ಸಮಗ್ರ ಭಾರತದ ವಿವಿಧ ಪ್ರದೇಶಗಳ ಆಚರಣೆ, ನಂಬಿಕೆ, ಪದ್ಧತಿಗಳ ಜೊತೆಗೆ ನೋಡಬೇಕಾಗುತ್ತದೆ. ಈ ಸಮುದಾಯದ ಆಚರಣೆಗಳು ಶಿಷ್ಟವೂ ಹೌದು, ಜನಪದೀಯವೂ ಹೌದು.

''ರಾಮರಾಜ ಕ್ಷತ್ರಿಯ" ಸಮುದಾಯದ ಇತಿಹಾಸದ ಜಾಡನ್ನು ಒಂದು ಪ್ರದೇಶಕ್ಕೆ ಸೀಮಿತ ಮಾಡುವುದು ಸಾಧ್ಯವಿಲ್ಲ. ಏಕೆಂದರೆ, ಕೋಟೆಯ ರಕ್ಷಣೆಯ ಹೊಣೆ ಹೊತ್ತು ಸೈನ್ಯ ಸೇವೆ ನೀಡಿದ ಈ ಸಮುದಾಯದ ಹೆಜ್ಜೆ ಗುರುತುಗಳು ಈ ಭವ್ಯಭಾರತದ ಉದ್ದಗಲಕ್ಕೂ ಹರಡಿರಬಹುದು. ಎಲ್ಲೆಲ್ಲಿ ಯುದ್ಧಗಳು ನಡೆದವೊ, ಎಲ್ಲೆಲ್ಲಿ ಕೋಟೆ ಕೊತ್ತಲಗಳು ತಲೆಯೆತ್ತಿದವೂ, ಎಲ್ಲೆಲ್ಲಿ ಶಾಂತಿ ಸ್ಥಾಪನೆಯ ಅಗತ್ಯ ಬಂದಿತೊ ಅಲ್ಲೆಲ್ಲಾ ಈ ಸಮುದಾಯವನ್ನು ಕಳುಹಿಸಿ ಸ್ಥಿತಗೊಳಿಸಿದ್ದು ನಿರಂತರವಾಗಿ ನಡೆದು ಬಂದಿರುವಂತದ್ದು. ಹಾಗಿರುವಾಗ ಈ ಸಮುದಾಯವನ್ನು ಎಲ್ಲಿಯ ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯ?

ಲಭ್ಯ ದಾಖಲೆಗಳು, ರಾಜರ ಕಾಲಘಟ್ಟಗಳ ಆಧಾರದಲ್ಲಿ ಇಂದು ಮಹಾರಾಷ್ಟ್ರವೇ ನಮ್ಮ ಮೂಲವೆಂದು ಹೇಳಿದ ಸಂಶೋಧಕರಿದ್ದಾರೆ, ತಜ್ಞರಿದ್ದಾರೆ. ಅದು ನಿಜವೂ ಹೌದು. ಏಕೆಂದರೆ, ನಮ್ಮಲ್ಲಿ ಅದಕ್ಕಿಂತಲು ಮುಂಚಿನ ಇತಿಹಾಸದ ಕುರುಹುಗಳು ಸಿಗುವುದೇ ಅನುಮಾನ. ಆದರೆ, ಕುರುಹು ಸಿಗದ ಮಾತ್ರಕ್ಕೆ ಇತಿಹಾಸ ಇರಲಿಲ್ಲವೆಂದಲ್ಲವಲ್ಲ, ಜೊತೆಗೆ ಉಹೆಯೂ ಕೂಡ ಇತಿಹಾಸವನ್ನು ಕಟ್ಟಿಕೊಡಲಾಗದು. ಆದರೆ, ಊಹೆ ಇತಿಹಾಸದ ಶೋಧಕ್ಕೆ ಪೂರಕ ಎನ್ನುವಂತೆ ನಮ್ಮ ವ್ರತ ನಿಯಮ ಅನುಷ್ಠಾನಗಳ ಆಧಾರದಲ್ಲಿ ಆನೇಕ ವಿಚಾರಗಳನ್ನು ಹೀಗಿರಬೇಕು ಎಂದು ಶೋಧಿಸುವುದಕ್ಕೆ ಶಕ್ತ.

ಮೂಲತಃ ವೈದಿಕ ವಿಧಿಗಳನ್ನು ಅನುಷ್ಠಾನ ಮಾಡುವ ಈ ಸಮುದಾಯ ತನ್ನ ಅತಿ ಪ್ರಾಚೀನ ನೆಲೆಯನ್ನು ಸರಸ್ವತಿ ನದಿಯ ತೀರದಲ್ಲೆ ಗುರುತಿಸಬೇಕು. ವೈದಿಕ ವಿಧಿಗಳನ್ನು ಅನುಷ್ಠಾನಿಸುವ ಅನೇಕ ಸಮುದಾಯಗಳ ಜೊತೆ ಒಂದು ಕೊಡುಕೊಳ್ಳುವಿಕೆ ಆ ಕಾಲಘಟ್ಟದಲ್ಲಿ ಆರಂಭವಾಗಿರಬೇಕು. ಶೈವಾರಾಧಕರು ಎನ್ನುವುದು ಇದನ್ನು ಇನ್ನಷ್ಟು ಪುಷ್ಟಿಕರಿಸುತ್ತದೆ. ವಿವಿಧ ರಾಜರುಗಳ ಕಾಲಘಟ್ಟದಲ್ಲಿ ಈ ಸಮುದಾಯ ದೇಶದ ಬೇರೆ ಬೇರೆ ಪ್ರದೇಶದ ಕಡೆಗೆ ಸೈನ್ಯಸೇವೆ ನೀಡಿರಬಹುದು, ವಿಶೇಷವೆಂದರೆ, ಆ ಸಂದರ್ಭಗಳಲ್ಲಿ ಈ ಸಮುದಾಯ 'ರಾಮರಾಜಕ್ಷತ್ರಿಯ' ಅಥವಾ 'ಕೋಟೆ' ಅನ್ನುವ ಹೆಸರನ್ನು ಹೊಂದಿರುವುದು ಸಾಧ್ಯವಿಲ್ಲ. ಜೊತೆಗೆ 'ನಾಯಕ', 'ರಾಯ'  'ರಾವ್',  'ಅಯ್ಯ' ಇಂತಹ ಉಪನಾಮಗಳು ಆಗ ಇದ್ದಿರಲೂ ಸಾಧ್ಯವಿಲ್ಲ.ಏಕೆಂದರೆ, ಇದೆಲ್ಲವೂ ವಿಜಯನಗರ, ಇಕ್ಕೇರಿ ಆಡಳಿತದ ಸಂದರ್ಭದಲ್ಲಿ ದೊರೆತಂದದ್ದು. ಹಾಗಾಗಿ ಮಹಾರಾಷ್ಟ್ರ, ಆಂಧ್ರ, ಕರ್ನಾಟಕದ ಭಾಗಗಳಿಗೆ ಬರುವ ಮುನ್ನ ಇದ್ದ ಉಪನಾಮಗಳು ಬೇರೆಯದ್ದೇ ಆಗಿದ್ದವು. 'ವರ್ಮ' ಎನ್ನುವ ಪದವೇ ಆಗ ಕ್ಷತ್ರಿಯರಲ್ಲಿ ಬಳಕೆ ಇದ್ದದ್ದು. ವರ್ಮ ಎಂದರೆ 'ಕವಚ'ಎನ್ನುವ ಅರ್ಥ ಹೊಂದಿದೆ. 'ಕ್ಷತಾತ್ ತ್ರಾಯತೆ ಇತಿ ಕ್ಷತ್ರಿಯ' ಎನ್ನುವಲ್ಲಿಗೆ ಕ್ಷತ್ರಿಯರೆಂದರೆ ಗಾಯದಿಂದ ರಕ್ಷಿಸುವವರು ಎಂದು ಅರ್ಥೈಸುತ್ತದೆ. ಆ ನೆಲೆಯಲ್ಲಿ ವರ್ಮ ಎಂದರೆ ಗಾಯ, ನೋವುಗಳನ್ನು ಕವಚದಂತೆ ತಡೆಯುವ ಕ್ಷತ್ರಿಯರು ಎಂಬುವುದು ವಿಧಿತ. ಹಾಗಾಗಿ ರಾಮರಾಜ ಕ್ಷತ್ರಿಯ/ಕೋಟೆ ಅನ್ನುವ ಪದಗಳ ಜೊತೆಗಿನ ಇತಿಹಾಸದ ಹುಡುಕಾಟ ನಮ್ಮನ್ನು ಮಹಾರಾಷ್ಟ್ರದ ಗಡಿಗಳ ಹತ್ತಿರಕ್ಕೆ ತಂದು ನಿಲ್ಲಿಸುತ್ತವೆ. 'ತಾಳಿಕೋಟೆ ಯುದ್ಧ' ಈ ನೆಲೆಯಲ್ಲಿ ಪ್ರಮುಖವಾದುದು. ನಂತರದ ಸಮಯದಲ್ಲಿ ಹುದ್ದೆಗಳೇ ಉಪನಾಮವಾದುದು (ಉದಾ: ಹವಲ್ದಾರ್, ಪಟೇಲ್) ಮತ್ತೂ ನಂತರದಲ್ಲಿ ನೆಲೆಯಾದ ಸ್ಥಳವೇ ಉಪನಾಮವಾದುದು ಕಾಣಬಹುದಾಗಿದೆ (ಉದಾ: ಬೇಕಲ್, ಮಲ್ಲಿಗೆಮಾಡು).

ಹೀಗೆ ಸಿಂಧೂ ನಾಗರೀಕತೆಯಿಂದ ಬಂಗಾಳದ ಕಡೆಗೆ ಮತ್ತು ಅಲ್ಲಿಂದ ಆಂಧ್ರ, ಮಹಾರಾಷ್ಟ್ರದ ಕಡೆಗೆ ಈ ಸಮುದಾಯವು ಬಂದಿರುವುದನ್ನು ನಾವು ಗುರುತಿಸಬಹುದು. ಶಿವನ ಜೊತೆಗೆ ಶಕ್ತಿಯ ಆರಾಧನೆಗೆ ಒಳಪಟ್ಟಿದ್ದು ಬಹುಶಃ ಶಕ್ತಿಯನ್ನು ಪ್ರಮುಖವಾಗಿ ಆರಾಧಿಸುವ ಬಂಗಾಳದ ಕಡೆಯಿಂದಲೇ ಆಗಿರಬಹುದು, ವಿಜಯ ನಗರದ ಅವರ ಆಡಳಿತದಲ್ಲಿ ಆಂಧ್ರ ಮತ್ತು ಮಹಾರಾಷ್ಟ್ರದ ಕಡೆಗಳಲ್ಲಿ ಇದ್ದ ರಾಮಕ್ಷತ್ರಿಯ, ರಾಮರಾಜ ಕ್ಷತ್ರಿಯ, ಕೋಟೆಗಾ‌ರ್, ಕೋಟೆಯಾ‌ರ್, ಸೇರ್ವೆಗಾರ್, ಶೇರಿಗಾರ್, ಚೇರಕಾರ್ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಈ ಸಮುದಾಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ. ಕಾಸರಗೋಡು, ಕಾಞಂಗಾಡು ಪ್ರದೇಶದ ಕರಾವಳಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿದೆ.

ಸೈನ್ಯ, ಆಡಳಿತ, ರಕ್ಷಣೆ ವ್ಯವಸ್ಥೆಯಲ್ಲಿ ರಾಮಕ್ಷತ್ರಿಯರನ್ನು ನೇಮಿಸಿರುವುದು ತಿಳಿದಿರುವ ವಿಚಾರ, ರಾಜ್ಯ ರಕ್ಷಣೆಯ ಜೊತೆಗೆ ಕಡಲಿನ ಮೂಲಕ ನಡೆಯಬಹುದಾದ ದಾಳಿಗಳನ್ನು ತಪ್ಪಿಸಲು ವಿಶೇಷವಾಗಿ ಕರಾವಳಿಯ ಉದ್ದಗಲಕ್ಕೂ ಅಲ್ಲಲ್ಲಿ ಕೋಟೆಗಳನ್ನು ಕಟ್ಟಿ, ಕರಾವಳಿಯನ್ನು ದಾಳಿಕೋರರಿಂದ ರಕ್ಷಿಸಲು ಇಂದಿನ 'ತಟ ರಕ್ಷಣಾ ಪಡೆ' ರೀತಿಯಲ್ಲಿ ಆಗಿನ ಕಾಲದಲ್ಲಿ ರಾಮ ಕ್ಷತ್ರಿಯರು ವಿಶೇಷ ಪರಿಣತರು ಎಂದು ಊಹಿಸಬಹುದಾಗಿದೆ. ಹೀಗೆ ಕೋಟೆಗಳ ಕಾವಲು, ಆಡಳಿತ, ನಿರ್ವಹಣೆಯ ಹೊಣೆ ಹೊತ್ತ ರಾಮಕ್ಷತ್ರಿಯರು ಈ ಪ್ರದೇಶದ ಜನರ ಆಡುಭಾಷೆಯಲ್ಲಿ 'ಕೋಟೆಯವರು' ಎಂದು ಗುರುತಿಸಲ್ಪಟ್ಟರು. ರಾಮಕ್ಷತ್ರಿಯರ ಸಮುದಾಯದ ಆಚರಣೆ, ಭಾಷಾ ಶೈಲಿ ಹೆಚ್ಚಾಗಿ ಮಲೆನಾಡು ಹಾಗೂ ಉತ್ತರ ಕರ್ನಾಟಕದ ಬಯಲು ಸೀಮೆಗೆ ಹೋಲಿಕೆ ಕಂಡುಬರುತ್ತದೆ. ಶಿವಮೊಗ್ಗದ ಭಾಗಗಳಲ್ಲಿ, ತೀರ್ಥಹಳ್ಳಿ ಮೊದಲಾದ ಕಡೆಯ ಜನಸಮುದಾಯ ಇಂದಿಗೂ ಮಾತನಾಡುವ ಭಾಷಾ ಶೈಲಿ ಈ ಸಮುದಾಯದ ಜೊತೆ ಹೋಲಿಕೆಯಾಗುತ್ತದೆ. ಹಾಗಾಗಿ, ವಿಜಯ ನಗರದ ಅಳಿಯ ರಾಮರಾಯನ ಆಳ್ವಿಕೆಯ ಪರತನಾನಂತರ ಈ ಸಮುದಾಯವು ಅವರ ಸಾಮಾಂತರಾದ ಇಕ್ಕೇರಿ ವಂಶದ ರಾಜರ ಅಧೀನಕ್ಕೆ ಬಂದು ಅವರ ಸ್ವತಂತ್ರ ಆಳ್ವಿಕೆಯ ಸಂದರ್ಭ ಒಂದು ಭಾಗ ಇಕ್ಕೇರಿಯ ಕಡೆಯಲ್ಲಿ ನೆಲೆಗೊಂಡು ನಂತರ (1586-1629) ಇಕ್ಕೇರಿಯ ಅರಸ ಹಿರಿಯ ವೆಂಕಟಪ್ಪ ನಾಯಕ ಸೈನ್ಯವನ್ನು ವಿಸ್ತರಿಸಿ ಚಂದ್ರಗಿರಿ, ಬೇಕಲ ಮುಂತಾದ ಕಡೆ, ರಾಜ್ಯವಿಸ್ತರಣೆ ಮಾಡಿ ಈ ಸಮುದಾಯವನ್ನು ಇಲ್ಲಿ ನೆಲೆಗೊಳಿಸಿದ್ದು ಇಂದಿಗೆ ಇತಿಹಾಸ.

ರಾಮರಾಜಕ್ಷತ್ರಿಯ ಕುಟಂಬಗಳು ಪಿತೃಪ್ರಧಾನ ವ್ಯವಸ್ಥೆಯಾಗಿದ್ದು, ಕುಲ, ಗೋತ್ರ ಪ್ರವರಗಳ ಚೌಕಟ್ಟಿನಲ್ಲಿ ಬೆಳೆದು ನಿಂತಿದೆ. ಗೋತ್ರಪ್ರವರ್ತಕರ ಗುರುಕುಲದಲ್ಲಿ ವಿದ್ಯಾದೀಕ್ಷತರಾದ ನಮ್ಮ ಪೂರ್ವರನ್ನು ಆನುಸರಿಸಿ ಆಯಾ ಗೋತ್ರದಲ್ಲಿ ಈ ಸಮುದಾಯದ ಕುಟುಂಬಗಳು ಮುಂದುವರೆದಿದೆ. ಕುಟಂಬ ದೇವರು ಮತ್ತೊಂದು ಪ್ರಮುಖ ವಿಷಯ, ಪ್ರತಿ ಕುಟುಂಬವು ತಮ್ಮ ಕುಟುಂಬಕ್ಕೆ ಪ್ರತ್ಯೇಕ ದೇವರುಗಳನ್ನು ಹೊಂದಿದ್ದು ತಮ್ಮ ಸೈನ್ಯ ಜಮಾವಣೆಯಾದ ಕಡೆಗೆಲ್ಲಾ ಕುಟುಂಬದ ದೇವರನ್ನು ಕೊಂಡೊಯ್ದು ನೇಮದಿಂದ ಪೂಜಿಸಿದ್ದಿದೆ.

ಶಿವ ಹಾಗೂ ಶಕ್ತಿಯ ಆರಾಧಕರಾದ ಕಾರಣ ಕುಟುಂಬ ದೇವರುಗಳು ಮೂಲತಃ ಶಿವ ಮತ್ತು ಶಕ್ತಿಯ ಹೆಸರಿನಿಂದಲೇ ಕಂಡು ಬರುತ್ತವೆ. ಕೆಲವೊಂದು ಕುಟುಂಬಗಳು ಮಾತ್ರ ವಿಷ್ಣುವಿನ ಆರಾಧನೆಯನ್ನು ಒಳಗೊಂಡಿದೆ. ಅದೂ ಕೂಡ ಜಿಜ್ಞಾಸೆಗೆ ಒಳಪಡುವಂತದ್ದಾಗಿದೆ. ಕುಲದೇವರ ಆರಾಧನೆಯನ್ನು ಕುಟುಂಬದ ಮುಖ್ಯ ವ್ಯಕ್ತಿ ಮತ್ತು ಮನೆಯಲ್ಲಿ ಆರಾಧನೆ ಮನೆಯ ಯಜಮಾನ ನಡೆಸುವುದು ಈ ಸಮುದಾಯದ ಕೌಟುಂಬಿಕ ವೈಶಿಷ್ಟ್ಯ. ಮದುವೆ ಮತ್ತು ಇತರ ಶುಭ ಸಮಾರಂಭವನ್ನು ಕುಲಪುರೋಹಿತರು ನಡೆಸಿಕೊಡುವುದು ಇರುವ ಕ್ರಮ. ಈ ನೆಲೆಯಲ್ಲಿ ಕರಾಹ್ಡ ಬ್ರಾಹ್ಮಣರು ನಮ್ಮ ಕುಲಪುರೋಹಿತರಾದದ್ದು ಈ ಸಮುದಾಯ ಮಹಾರಾಷ್ಟ್ರದ ಗಡಿಗಳಲ್ಲಿ ನೆಲೆ ನಿಂತ ಮೇಲೆಯ.

ಇಂದಿನ ಪರಿಸ್ಥಿತಿ:

ಬಹು ಮುಖ್ಯವಾದ ನಮ್ಮ ಸಮುದಾಯದ ಸಮಸ್ಯೆಯೆಂದರೆ, ಅದು, ವಿಸ್ಮೃತಿ. ನಾವು ಅನೇಕ ವಿಷಯಗಳನ್ನು ಮರೆತದ್ದು ನಮ್ಮ ದೊಡ್ಡ ಹಿನ್ನಡೆ, ಕೆಲವನ್ನು ಕಾಲ ಮರೆಸಿತು, ಕೆಲವನ್ನು ನಾವು ಸ್ವತಃ ಮರೆಯುತ್ತಾ ಹೋದವು, ಮಕ್ಕಳಿಗೆ ಕೆಲವನ್ನು ಹೇಳಿಕೊಡಲು ಮರೆತೆವು, ಹಾಗಾಗಿ ಮುಂದಿನ ಜನಾಂಗ ಕೆಲವನ್ನು ಅರಿತುಕೊಳ್ಳುವಲ್ಲಿ ಸೋತಿತು.

ನಮ್ಮ ಭಾಷೆ ಶೈಲಿ ಕಾಸರಗೋಡನಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದಂತೆ ಕೋಟೆ ಕನ್ನಡ ಮಂಗಳೂರು ಕನ್ನಡವಾಗಿ ಬದಲಾಯಿತು. ಹವ್ಯಕರು ಹವಿಗನ್ನಡವನ್ನು, ಗೌಡರು ಅರೆಭಾಷೆಯನ್ನು ಹೇಗೆ ಉಳಿಸಿದರೊ ಹಾಗೆ ನಾವು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಹೀಗಾಗಿ ಕೋಟೆ ಕನ್ನಡ ಅಳಿಯುವುದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ. 
ಎಲ್ಲಾ ಮನೆಯಲ್ಲೂ ನಮ್ಮ ಸಮುದಾಯದ ಕೆಲವು ಅತಿ ಪ್ರಮುಖ ಆಚರಣೆಗಳು ಕೈಯ್ದಾಗಿದೆ. ವಿಶೇಷವಾಗಿ ದೀಪಾವಳಿಯ ಆಚರಣೆ, ತುಳಸಿ ಹಬ್ಬದ ಆಚರಣೆ, ನಾಗರಪಂಚಮಿ, ವರ್ಷನೆಣೆ ಆಚರಣೆ ಮುಂತಾದವಲ್ಲಿ ಬಹುಮುಖ್ಯವಾದ ನಿಯಮಗಳನ್ನು ಕೈಬಿಡಲಾಗಿದೆ. ಮದುವೆಯ ಆಚರಣೆಯಲ್ಲೂ ಹೇರಳವಾಗಿ ಪ್ರಮುಖ ಆಚರಣೆಗಳನ್ನು ಕೈಬಿಡಲಾಗಿರುವುದು ವಿಷಾದನೀಯ.

ಸಂಘಟನಾತ್ಮಕವಾಗಿ ಅನೇಕ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಜಾತಿ ಸಂಘಗಳು ತಮ್ಮ ಶಕ್ತಿಮೀರಿ ಶ್ರೇಯೋಭಿವೃದ್ಧಿಗಾಗಿ ತೊಡಗಿವೆ. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾ‌ರ್ ಸೇವಾ ಸಂಘ ಬೀರಂತಬೈಲು ಕಾಸರಗೋಡು ಈ ಸಂಘ 90ನೇ ವಾರ್ಷಿಕ ಸಂಭ್ರಮದಲ್ಲಿ ಇರುವುದೇ ಇದಕ್ಕೆ ಸಾಕ್ಷಿ. ಆದರೆ, ಹೆಚ್ಚಿನ ಸಂಘಗಳು ತಮ್ಮ ವ್ಯಾಪ್ತಿಯ ಯುವ ಸಮುದಾಯವನ್ನು ಸೆಳೆಯುವಲ್ಲಿ ಹೆಣಗಾಡುತ್ತಿವೆ. ಮಂಗಳೂರಿನ ಕಡೆ ಬಂಟರ, ಬಿರುವೆರ ಯುವ ಸಂಘಗಳ ಬಲಿಷ್ಠತೆಯನ್ನು ನೋಡುವಾಗ ನಮ್ಮ ಸಮುದಾಯದಲ್ಲಿ ಯುವ ಸಂಘ ಹಿಂದೆ ಬಿದ್ದದ್ದು ಕಾಣಿಸುತ್ತದೆ. ಯುವ ಸಮುದಾಯ, ನಮ್ಮ ಸಮಾಜದ ಅಧ್ಯಯನ, ಸಂಶೋಧನೆ, ಪರಂಪರೆಯ ಅನಾವರಣ, ಪದ್ಧತಿಗಳ ಅನುಷ್ಠಾನ ಮತ್ತು ರಾಜಕೀಯವಾದ ಸಬಲತೆಯ ಕಡೆಗೆ ಒತ್ತು ಕೊಡದಿರುವುದನ್ನು ನಾವು ಕಾಣಬಹುದಾಗಿದೆ.

ನಿರೀಕ್ಷೆ:
ನಮ್ಮ ಸಮುದಾಯದ ಮುಂದೆ ಅನೇಕ ನಿರೀಕ್ಷೆಗಳು ಇವೆ. ರಾಜಕೀಯಾಗಿ ಸಾಮುದಾಯಿಕ ಹಕ್ಕೊತ್ತಾಯವನ್ನು ಮಾಡಬೇಕಾದದ್ದು ಬಹಳ ಪ್ರಮುಖವಾದುದು. ಕಡಿಮೆ ಸಂಖ್ಯೆಯಿರುವ ಸಮುದಾಯಗಳೂ ಕೂಡ  ತಮ್ಮ ಪ್ರಭಾವವನ್ನು ತೋರಿಸುತ್ತಿರುವುದನ್ನು ನೋಡುವಾಗ, ನಮ್ಮ ಸಮುದಾಯ ರಾಜಕೀಯದ ಪ್ರಭಾವಲಯದ ಪರಿಧಿಯಿಂದ ಕೊಂಚ ದೂರ ಉಳಿಯಿತುಎಂದು ಅನ್ನಿಸದಿರದು. ಈ ನಿಟ್ಟಿನಲ್ಲಿ ಪಡೆಯಬೇಕಾದ ಸೌಲಭ್ಯಗಳನ್ನು ಒಗಟ್ಟಿನಿಂದ ದಕ್ಕಿಸಿಕೊಳ್ಳುವ ಅಗತ್ಯವಿದೆ.

ಯುವ ಸಮುದಾಯವನ್ನು ಸಂಘಟನೆಯ ಕಡೆ ಕರೆತರುವ ಗುರುತರ ಜವಾಬ್ದಾರಿ ಇದೆ. ಇದು ಕೇವಲ ಭಜನಾ ಸಂಘಗಳಿಗೆ ಸೀಮಿತವಾಗದೆ ಇಂದಿನ ತುರ್ತುಗಳಾದ ವಿದ್ಯೆ, ಉದ್ಯೋಗ, ಕೌಶಲ್ಯ, ಸಾಮಾಜೀಕರಣ, ವಿವಾಹ ವೇದಿಕೆ ಮುಂತಾದವುಗಳನ್ನೂ ಒಳಗೊಂಡಿರಬೇಕು. ಯುವ ಸಮುದಾಯವು ಕೂಡ ತಮ್ಮ ಸ್ವ ಆಸಕ್ತಿಯಿಂದ ನಮ್ಮ ಸಮುದಾಯದ ನೆಲೆ, ಇತಿಹಾಸ, ಸ್ಥಿತಿಗತಿ, ಆಚರಣೆ, ಪದ್ಧತಿ, ಭಾಷಾ ವೈಶಿಷ್ಟ್ಯವೇ ಮೊದಲಾದವುಗಳ ಬಗ್ಗೆ ಸಂಶೋಧನೆ, ಅಧ್ಯಯನವನ್ನು ನಡೆಸಿ, ನಮ್ಮ ಸಮುದಾಯದ ತಜ್ಞರು, ವಿದ್ವಾಂಸರು, ಕವಿ, ಕಲಾವಿದರನ್ನು ಸಂದರ್ಶಿಸಿ ಅದರ ಹೂರಣವನ್ನು ಸಮುದಾಯದಲ್ಲಿ ದೊರಕುವಂತೆ ಮಾಡಬೇಕು.

ತಂತ್ರಜ್ಞಾನದ ಯುಗದಲ್ಲಿಯೂ ನಮ್ಮ ಸಮುದಾಯದ ಬಗ್ಗೆ ಆನ್ಲೈನ್ ಮಾಹಿತಿ ಹುಡುಕಿದರೂ ಹೆಚ್ಚೇನೂ ಮಾಹಿತಿ ಸಿಗುವುದೇ ಇಲ್ಲ. ಈ ನಿಟ್ಟಿನಲ್ಲಿ ಲೇಖನಗಳು, ಬಿಡಿ ಬರೆಹಗಳು, ಸಂವಾದಗಳು, ಸಂದರ್ಶನಗಳು ಜನಸಮುದಾಯವನ್ನು ತಲುಪುವಂತೆ ಮಾಡಬೇಕಿದೆ.

ಜೊತೆಗೆ ಈಗಾಗಲೇ ಸಮುದಾಯದಲ್ಲಿ ಗುರುತಿಸಲ್ಪಟ್ಟ ಹಿರಿಯರು ಯುವ ಸಮುದಾಯಕ್ಕೆ ಆಗಾಧ ಪ್ರೋತ್ಸಾಹ, ಜಾತಿ ಸಂಘಟನೆಗಳು ಆರ್ಥಿಕ, ಭಾವನಾತ್ಮಕ, ಮನೋಸಾಮಾಜಿಕ ನೆರವನ್ನು ಆನುಕೂಲವಿಲ್ಲದ ಮನೆಗಳನ್ನು ಗುರುತಿಸಿ ನೀಡಬೇಕು.

ಒಂದು ಪ್ರದೇಶದಲ್ಲಿ ನೆಲೆ ನಿಂತ ಒಂದು ಚೌಕಟ್ಟಿನಲ್ಲಿ ಬದುಕುವ ಜನಸಮುದಾಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯವಾಗಿ ಗಟ್ಟಿಗೊಳ್ಳಬೇಕಾದರೆ ಅದು ತನ್ನ ಪೂರ್ವ ಇತಿಹಾಸವನ್ನೂ, ಇಂದಿನ ತುರ್ತನ್ನೂ, ಮು೦ದಿನ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಸಿದ್ಧವಿರಬೇಕು. ಹೇಗೆ ಎದುರಿಸಬೇಕಾದರೆ ಅದಕ್ಕೆ ಪೂರಕವಾಗಿ  ಸಮುದಾಯ ತನ್ನ ಒಟ್ಟು ಸ್ವಬಾಂಧವರನ್ನು ಜೊತೆಯಾಗಿ ಕರೆದುಕೊಂಡು ಮುಂದೆ ಹೋಗಬೇಕಾಗುತ್ತದೆ. ತನ್ನ ಮತ್ತು ಕೇವಲ ತನ್ನದ್ದಷ್ಟೆ ನೋಡುವ ಯಾವ ಸಮುದಾಯವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ತನ್ನವರನ್ನು ಜೊತೆಗೆ ಸೇರಿಸಿ ಮುಂದುವರೆಯುವ ಮತ್ತು ತನ್ನವರಲ್ಲಿ ಯಾರೇ ಹಿಂದೆ ಬಿದ್ದರೂ ಅವರನ್ನು ಕೈಹಿಡಿದು ಮೇಲೆತ್ತುವ, ಪ್ರೋತ್ಸಾಹಿಸುವ ಸಮುದಾಯವು ಬಹಳ ಬೇಗ ಸಮಾಜದಲ್ಲಿ ಅಭಿವೃದ್ಧಿಯನ್ನು ಹೊಂದುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯವೂ ಕಾರ್ಯಪ್ರವ್ಯಕ್ರವಾಗಬೇಕಾದದ್ದು ಇಂದಿನ ತುರ್ತು.

(ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ (ರಿ) ಇದರ 90ನೇ ವಾರ್ಷಿಕ ಸಂಭ್ರಮ ಮಹಿಳಾ ಸಮಾವೇಶದಲ್ಲಿ ಮಂಡಿಸಿದ ವಿಷಯ)

Friday, 16 December 2022

ಅಬ್ಬ! ಮಲ್ಲಿಗೆ ಈ ಅಬ್ಬಲಿಗೆ

ಘಮವಿಲ್ಲದ ಅಬ್ಬಲಿಗೆಯೊಂದೂ ತನ್ನ ಬಣ್ಣದಿಂದಲೇ ಸೆಳೆಯಬೇಕಾದ್ದು ಅದರ ವಿಧಿಯೇನೊ. ಪರಿಮಳಿಸದ, ಸೇವಂತಿಯಂತೆ ಎಸಳೆಸಳಾಗಿರದ, ಕಾಕಡದಂತೆ ದಳವೊಡೆದ ಚೆಲುವಲ್ಲದ ಈ ಅಬ್ಬಲಿಗೆ ಅರೆದೆರೆದ ಹೂವಿನಂತೆ ಒಂದು ಪಾರ್ಶ್ವಕಷ್ಟೇ ಮೂರರಿಂದ ಐದು ದಳಗಳಾಗಿ ಅರಳುತ್ತದೆ. 
ಕೇಸರಿ, ಕಿತ್ತಳೆ ಮಿಶ್ರಿತ ಹಳದಿ, ನಸುನೀಲಿ, ಅಚ್ಚ ಹಳದಿ ಬಣ್ಣದ ಈ ಅಬ್ಬಲಿಗೆಯಲ್ಲಿ ಕೇಸರಿಗೆ ಬೇಡಿಕೆ ಹೆಚ್ಚು.

ಕ್ರೈಸ್ತ ಮದುಮಗಳ ತಲೆತುಂಬಾ ಜಾಲರಿಯಂತೆ ಇಳಿಬೀಳುವುದು ಇದೇ ಅಬ್ಬಲಿಗೆ. ಬಹಳ ಸುಕೋಮಲ ಹೂವಾದರಿಂದ ಸೇವಂತಿಗೆಯಂತೆ ಎಳೆದೆಳೆದು ಮೊಳ ಹಾಕುವ ಕ್ರಮವಿಲ್ಲ, ಇವಳನ್ನು ಮೊಳ ಹಾಕುವುದೇ ಬಹಳ ನಾಜೂಕಾಗಿ. ದುಬಾರಿ ಹಣಕೊಟ್ಟು ತಲೆಗೆ ಮುಡಿವ ಮಲ್ಲಿಗೆ ಘಮಘಮಘಮ ಪರಿಮಳ ಬೀರಿ ಹೆಂಗಸರ ತಲೆಯೇರಿ ಹೊದಲ್ಲಿ ತನಕ "ನಾನೇ ನಾನೇ" ಎಂದು ಸಾರುತ್ತ ಸಂಜೆಗಾಗುವಾಗ ಹೇಳ ಹೆಸರಿಲ್ಲದೆ ಹೆಂಗಸರ ತಲೆಗೆ ಬಾಳೆಯ ಸೊಟ್ಟ ನಾರನ್ನಷ್ಟೇ ಬಿಟ್ಟು ಕಣ್ಮರೆಯಾಗಿ ಹೆಂಗಸರಿಗೆ ಮಂಗ ಮಾಡುವ "ಮಲ್ಲಿಗೆ"ಯಂತಲ್ಲ ಈ ಅಬ್ಬಲಿಗೆ. ಈಕೆ ತನ್ನನ್ನು ತಾನು ಬಣ್ಣದಿಂದಲೇ ಪರಿಚಯಿಸಿ ಸಂಜೆವರೆಗೂ ಮುಡಿಶೋಭಿಸುವವಳು. 

ಸಂಜೆ ಮೇಲೆ ಬಸಲೆಯಂತೆ ಬಾಡುಬತ್ತಿಯಂತಾದರೂ ಮುಡಿದವಳ ತಲೆ ಬಿಡದೆ ತಲೆಗಾಯ್ವವಳು. ಒತ್ತಾಗಿ ಒಂದೇ ಬದಿಗೆ ಚೊಕ್ಕವಾಗಿ ಕಟ್ಟಿದರೆ ದಂಡೆಯಾಗುವವಳು, ಎರಡೂ ಬದಿಗೆ ಬಿಡಿ ಬಿಡಿಯಾಗಿ ಕಟ್ಟಿದರೆ ಕೃಷ್ಣನ ಕೊರಳ ಮಾಲೆಯಾಗುವವಳು. ಕೆಲವೊಮ್ಮೆ ಕಾಕಡದ ಮಾಲೆಯ ನಡುವೆ ಅಲ್ಲೊಂದು ಇಲ್ಲೊಂದು ಬಿಡಿ ಅಬ್ಬಲಿಗೆ ಕಾಕಡದ ಮಾಲೆಗೇ ಮೆರುಗು ತರುವುದಿದೆ. 

ಜಡೆಗೆ ಉದ್ದಕ್ಕೂ ಸುತ್ತಿದರೂ ಚೆಂದ, ಸೂಡಿಗೆ ಸುರುಳಿಯಾಗಿ ಸುತ್ತಿದರೂ ಚೆಂದ, ಪುಟ್ಟ ಹುಡುಗಿಯ ಎರಡು ಜಡೆಗಳ ನಡುವೆ ಸೇತುವೆಯಾಗಿ ಮುಡಿಸಿದರೂ ಚೆಂದ. "ಅಬ್ಬ ಮಲ್ಲಿಗೆ" ಎಂದೂ ಕರೆಯುವ ಇದು ಅಬ್ಬ! ಮಲ್ಲಿಗೆಯನ್ನೂ ಮೀರಿಸುವ ಚೆಲುವಿನ ಹೂವು ಹೌದು. ಕನಕಾಂಬರ ಎಂದೂ ಘಟ್ಟದ ಮೇಲೆ ಕರೆಯುತ್ತಾರೆ. 

ಇಷ್ಟೆಲ್ಲಾ ಇದ್ದರೂ ಈಗೀಗ ಅಬ್ಬಲಿಗೆ ಮುಡಿದ ಚಿನ್ನದಂತಹ ಜಡೆಯ ಹುಡುಗಿ ನಮ್ಮ ಕಡೆ ಕಾಣಸಿಗುವುದೇ ಅಪರೂಪದಲ್ಲಿ ಅಪರೂಪ

-ನಕ್ಷತ್ರಮೌನಿ

Thursday, 15 December 2022

ನೂರು ಎಸಳಿನ ಸೇವಂತಿಗೆ

ಆ ಹೂವಿನಂಗಡಿಯಲ್ಲಿ ಬಣ್ಣ ಬಣ್ಣದ ಸೇವಂತಿಗೆ ಇತ್ತು. ಕಾಮನಬಿಲ್ಲೇ ಹೂಮಾಲೆಯಾಯಿತೊ ಎನ್ನುವಂತೆ ಅಲ್ಲಿ ಹಲವು ಬಣ್ಣದ ಸೇವಂತಿಗೆ ಹೂಗಳನ್ನು ಒತ್ತಾಗಿ ಕಟ್ಟಿದ ಮಾಲೆಗಳೂ ಇದ್ದವು. ಹೂ ಮಾರುವ ಆ ಹೂವಾಡಿಗ ಪನ್ನೀರ ಸುರಿಸಿ ಆ ಹೂಗಳಿಗೆ ಘಮ ತುಂಬುತ್ತಿದ್ದಾನೊ ಅನ್ನುವಂತೆ ನೀರನ್ನು ಮಳೆಯಂತೆ ಚಿಮುಕಿಸುತ್ತಿದ್ದ. ಆ ನೀರಿನ ತಂಪು ಅಲ್ಲೆಲ್ಲಾ ತಂಪಾದ ಹವೆಯನ್ನು ಸೃಷ್ಟಿಸಿತ್ತು. ಆ ತಂಪು ಹವೆಗೆ ಗಾಳಿಯೂ ತಂಪಾಗಿ ಹೂವಿನ ಸೌಗಂಧವನ್ನು ಸೆಳೆದು ಆ ಅಂಗಡಿಯೇ ಪರಿಮಳದ ಮನೆಯಾಗಿತ್ತು. 

ಅಲ್ಲಿತ್ತು ಕಡುಗುಲಾಬಿ ಬಣ್ಣದ ಸೇವಂತಿಗೆಯ ಕುಚ್ಚು. ಬಿಟ್ರೋಟಿನಂತಹ ಬಣ್ಣ, ಬಿಳಿ ಸೇವಂತಿಗೆಯನ್ನೇ ನೆತ್ತರ ಕೆಂಪಿನಲಿ ಅದ್ದಿ ತೆಗೆದಿಟ್ಟಂತೆ. ಒಂದು ಅರೆ ನೀರಿನ ಪ್ಲಾಸ್ಟಿಕು ಬಾಲ್ದಿಯ ಒಳಗೆ ದಂಟು ಮುಳುಗಿಸಿ ಕಡುಗೆಂಪು ಮೃದು ಎಸಳ ಮೊಗವನ್ನು ಹೊರಚಾಚಿ ಗ್ರಾಹಕರೆಲ್ಲರೂ ತಮ್ಮೆಡೆಗೆ ಒಮ್ಮೆಯಾದರೂ ದೃಷ್ಟಿ ಹರಿಸುವಂತೆ ಆಕರ್ಷಿಸುವ ನಿರಂತರ ಪ್ರಯತ್ನದಲ್ಲಿದ್ದ ಕೆಂಪು ಗುಲಾಬಿಗಳ ಜೊತೆಗೆ ಸ್ಪರ್ಧೆಗಿಳಿದಂತಿತ್ತು ಈ ಕಡುಬಣ್ಣದ ಸೇವಂತಿಗೆಯ ವರಸೆ. ಎಸಳೆಸಳಾಗಿದ್ದ ಈ ಸೇವಂತಿಗೆಯ ನಡುನಾಭಿಗೆ ಹಳದಿಯ ಬೊಟ್ಟೊಂದನ್ನಿಟ್ಟಂತಿತ್ತು. 

ಘಮವಿಲ್ಲ, ಫಳಫಳಿಸುವ ಸೇವಂತಿಗೆಯೇ ಆದರೇನು, ಘಮವಿಲ್ಲ. ಲಲನೆಯರಿಗೆ ಘಮವಿಲ್ಲದ ಹೂವಿನ ಮೇಲೆ ಮೋಹ ಅಷ್ಟಕಷ್ಟೇ. ದಾಸವಾಳ, ಅಬ್ಬಲಿಗೆ ಮುಂತಾದವನ್ನು ನೋಡಿ ಹುಡುಗಿಯರ ಮುಡಿಯೇರುವುದೇ ಕಡಿಮೆ. ಮಲ್ಲಿಗೆ, ಸಂಪಿಗೆ, ರೋಜಾ ಇದಲ್ಲವೆ ಅವರಿಗೆ ಪ್ರೀತಿ. ಹಾಗೆ, ಘಮವಿಲ್ಲದ ಈ ಸೇವಂತಿಗೆಯೂ ಅವರ ಕೇಶ ಸಾನಿಧ್ಯದಲ್ಲಿ ವಿರಾಜಮಾನಳಾಗುವುದನ್ನೇ ಮರೆತಂತಿತ್ತು. ತಾನೇನಿದ್ದರೂ ಓಣಂ ಹಬ್ಬದ ಪೂಕಳಂಗೆ ಎಸಳೆಸಳಾಗಿ ಉದುರಿ ರಂಗೋಲಿಯಾಗಲೊ, ಬಸ್ಸು, ಆಟೋಗಳ ಅಲಂಕಾರಕ್ಕೆ ಮಾಲೆಯಾಗಲೊ, ದೀಪದ ಕಂಬಕ್ಕೆ ಲತೆಯಂತೆ ಬಳಸಿ, ದೀಪದ ಬುಡದಲ್ಲಿ ಉದುರು ಹೂವಿನ ಸಿಂಗಾರವಾಗಲೊ, ತಪ್ಪಿದರೆ ದೇವರ ಕೊರಳ ಮಾಲೆಯಾಗಿರಲು ಅಷ್ಟಕ್ಕೇ ಸೀಮಿತವಾದಂತೆ ಭಾವಿಸಿರುವಂತಿತ್ತು. ಘಮವಿಲ್ಲದ ಸೇವಂತಿಗೆಯಾದರೇನು,  ದಂಡೆಯಾಗಿಸಿ ಮುಡಿದರೆ ಹೂವಿಗಿಂತ ಮುಡಿಗೇ ಕಳೆ. 

ಈ ಹುಡುಗಿಯರಿಗಾದರೂ ಏನು ಗೊತ್ತು ನೂರು ಎಸಳ ಸೇವಂತಿಗೆಯ ಸೊಬಗು. ಮುಡಿದರೆ ತಲೆ ತುಂಬಾ ಹೂ ಜಾತ್ರೆಯಾಗುವ, ಜಡೆಗೆ ಚೆಂದಕೆ ಬಳಸಿ ಸುತ್ತಿದರೆ ಲತೆಯಪ್ಪಿದ ಕುಸುಮಕೇಶವಾಗುವ, ಒಂದೊಂದೆ ಬಿಡಿ ಹೂವನು ಜಡೆಯ ಅಡಿಯಿಂದ ಮುಡಿಗೆ ಸಾಲಾಗಿ ಇಟ್ಟರೆ ಜಡೆ ಬಿಲ್ಲೆಯಾಗುವ ಸೇವಂತಿಗೆಯ ಸೊಬಗನ್ನು ಈಗಿನ ನೀರೆಯರು ಬಲ್ಲರೆ? ಆ ನೂರು ಎಸಳ ಹೂ ಮುಡಿದರೆ ತಾವು ನಡೆದಲ್ಲಿಯವರೆಗೂ ಎಸಳುದುರಿಸಿ ತಮ್ಮ ದಾರಿಯುದ್ದಕ್ಕೂ ಹೂವಾಗಿಸುತ್ತವೆ. ಒತ್ತಾಗಿ ಕಟ್ಟಿ ದಂಡೆಯಾಗಿಸಿ ಮುಡಿದರೆ ಮುಡಿಗೆ ಹೂಬಿಲ್ಲಿನಂತೆ! 

ಆ ಅಂಗಡಿಯ ಎದುರು ನಿಂತು ಇಷ್ಟೆಲ್ಲ ಯೋಚಿಸುತ್ತಿರುವಾಗ ಹುಡುಗಿಯರ ಗುಂಪೊಂದು ಬಂದು ಕಡುಗೆಂಪು ಗುಲಾಬಿಗಳನ್ನು ಸಂಭ್ರಮದಲ್ಲಿ ಕೊಂಡು ಗುಲಾಬಿಯ ಕೆನ್ನೆಗಳನ್ನು ಸವರುತ್ತ ಮರೆಯಾದರು. ಸ್ಪರ್ಧೆಗೆ ಬಿದ್ದ ಘಮವಿಲ್ಲದ ಸೇವಂತಿಗೆ ಸೋತಿತಾ?? 

-ನಕ್ಷತ್ರಮೌನಿ

ಹೂವಿನಂಗಡಿಯ ಕಾಕಡ

ಆ ಹೂವಿನಂಗಡಿಯ ಕಟ್ಟೆಯ ಮೇಲೆ ಹರವಿದ ಬಾಳೆಯ ಎಲೆಯ ಮೇಗಡೆ ಸುರುಳಿ ಸುತ್ತಿಟ್ಟ ಕಾಕಡದ ಅಟ್ಟಿಯಿತ್ತು. ಹಸಿರೆಲೆಯ ಮೇಲೆ ಹಸಿರು ತೊಟ್ಟಿನ ಬಿಳಿ ಅರಳ ಕಾಕಡದ ಎಸಳಿನ ತುಂಬಾ ಅವನ ಬರುವಿಕೆಯ ನಿರೀಕ್ಷೆಯಿತ್ತು.  ಅಲ್ಲಿ ಸೇವಂತಿಗೆ, ಸುರಗಿ, ಗುಲಾಬಿ, ಮಲ್ಲಿಗೆ, ಅಬ್ಬಲಿಗೆಯ ಜಾತ್ರೆ ನೆರೆದಿದ್ದರೂ ಕಾಕಡ ಇಲ್ಲದೇ ಇರುತ್ತಿದ್ದರೆ ಆ ಸುಮಸದನಕೆ ಮೆರುಗೇ ಇರುತ್ತಿರಲಿಲ್ಲವೇನೊ ಅನ್ನುವಂತೆ ಕಾಕಡದ ಬೆಡಗು ಮೇಳೈಸಿತ್ತು. ಘಮಿಸುವ ಆ ತಣ್ಣನೆಯ ಪುಷ್ಪ ಸಾನ್ನಿಧ್ಯದಲ್ಲಿ ಸಾವಿರ ಹೂಕಂಪಿನ ಸೊಗಸು ಆವರಿಸಿತ್ತು. 

ಅವನು ಆ ಹೂವಿನಂಗಡಿಗೆಗೆ ಬಂದು ಅಲ್ಲಿದ್ದ ಹೂವುಗಳನ್ನು ಒಮ್ಮೆ ಕಣ್ಣಲ್ಲೇ ಪರಿಕಿಸಿದನು.  ಚೆಂಗುಲಾಬಿಯ ಎಸಳು ಥಳಥಳಿಸಿದ ನೀರಲ್ಲಿ ದಂಟು ನಿರುಕಿಸಿ ನಿಂತಿತ್ತು, ಬಾಳೆಯ ಎಲೆಯ ಒಳಗೆ ಮಲ್ಲಿಗೆಯ ಅಟ್ಟಿಯ ಕಟ್ಟಿತ್ತು, ಪರಿಮಳವಿಲ್ಲದ ಅಬ್ಬಲಿಗೆ ತನ್ನ ಬಣ್ಣದಲ್ಲೇ ಹೊಳೆದಿತ್ತು, ಸೇವಂತಿಗೆಗೆ ಮಳೆಬಿಲ್ಲಿನ ರಂಗಿತ್ತು. ನೋಡುತ್ತಿದ್ದವನ ಕಣ್ಣು ಕಾಕಡದ ಬಿಳಿ ಮೈಯ್ಯನ್ನು ಸವರಿತು. ಆಹ್! ಅವನ ಸ್ಪರ್ಶಕ್ಕೆ ಕಾಕಡದ ಜನ್ಮ ಪಾವನವಾಯ್ತು. ನಸು ನಾಚಿಗೆಯಲಿ ಕಾಕಡದ ಎಸಳ್ಗೆನ್ನೆ ಕೆಂಪಾಗ ಬೇಕಿತ್ತು ಆದರೆ, ತಾನು ನಸು ಕೆಂಪಾದರೂ "ಕಾಕಡ ಸೊರಗಿದೆ, ಬಾಡಿದ್ದಾ, ನಿನ್ನೆಯದ್ದಾ?" ಎಂದು ಆತ ಕೇಳಿದರೆ ಎಂಬಂತೆ ನಾಚಿಕೆಯ ತೋರಗೊಡದೆ  ತನ್ನ ಎಂದಿನ ಅಚ್ಚ ಬಿಳಿ ನಗುವ ನಕ್ಕಿತು ಹೂ ಕಾಕಡ. ಆ ನೂರು ಹೂ ಪರಿಮಳದ ನಡುವೆ ಕಾಕಡದ ತೆಳು ಸೌರಭ ಅಲ್ಲಿದ್ದ ಅವರಾರಿಗೂ ತಿಳಿಯಲ್ಲಿಲ್ಲವೇನೊ. 

ಅವನು ಕಾಕಡವನ್ನು ಹಾಗೆ ಸ್ಪರ್ಶಿಸುವುದಕ್ಕೂ, ಹೂವಾಡಿಗ ಆ ಕಾಕಡದ ಮಾಲೆಯನ್ನು ಕೈಯಲ್ಲಿ ಮೊಳ ಮಾಡಿ "ಕಾಕಡ ತೂಲೆ ಸರ್, ಫ್ರೆಶ್ ಉಂಡು, ನೂದೆತ್ತ ಕೊರೊಡಾ?" (ಕಾಕಡ ನೋಡಿ ಸರ್, ಫ್ರೆಶ್ ಉಂಟು, ನೂರರದ್ದು ಕೊಡುವುದಾ) ಎಂದು ಹೇಳುದಕ್ಕೂ ಸರಿ ಆಯಿತು. ಹೂವಾಡಿಗನ ಕೈಯಲ್ಲಿ  ಮೊಳ ಮೊಳದ ಮಾಲೆಯಾಗಿ ಹಸಿರ ತೊಟ್ಟ ಬಿಳಿ ಕಾಕಡ ಅವನ ಕೈಯನ್ನು ಸೇರಿತು. 

ಅವನ ಬೊಗಸೆಯಲ್ಲಿ ಕಾಕಡದ ಜನ್ಮ ಮತ್ತೊಮ್ಮೆ ಪಾವನವಾಯ್ತು! ಅವನು ಒಂದರೆ ಘಳಿಗೆ ಆ ಕಾಕಡವನ್ನೇ ದಿಟ್ಟಿಸಿದ, ಕಾಕಡದ ಮೊಗವನ್ನೇ ಬೊಗಸೆಯಲಿ ಹಿಡಿದನೊ ಎನ್ನುವ ಹಾಗೆ ಕಾಕಡದ ತೆಳು ಗಂಧದ ಉಸಿರು ಅವನ ತನಕ ತಲುಪಿತು.  ಎಲ್ಲಿಯೊ ಹುಟ್ಟಿದ ಕಾಕಾಡದ ಬಿಡಿ ಅರಳು ಇನ್ನೆಲ್ಲಿಯೊ ಒತ್ತೊತ್ತಾಗಿ ಸೇರಿ ಮಾಲೆಯಾಗಿ, ಎಲ್ಲಿಯೊ ಯಾವುದೊ ಹೂವಿನಂಗಡಿಯನು ಸೇರಿ ಹೀಗೆ ಈಗಿವನ ಕೈ ಬೊಗಸೆಯಲ್ಲಿ ಸೇರಿಕೊಳ್ಳುವುದೆಂದರೆ! ಅವನ ಕೈ ಸಾನಿಧ್ಯದಲ್ಲಿ ಹಾಗೆ ಅರೆಕ್ಷಣ ಇದ್ದುಬಿಡುವುದಕ್ಕೆಂದೆ ಅರಳಿದ್ದವೊ ಅನ್ನುವ ಹಾಗೆ, ಅದೊಂದು ಅನುಭೂತಿ. ಅವನಿಗಾದರೂ ಆ ತಿಳಿ ಹಸಿರು ಲಂಗದ ಬಿಳಿ ಕಾಕಡ ಒಂದು ಅನುಭೂತಿ. 

ನೀರು ಸಿಂಪಡಿಸುತ್ತಿದ್ದ ಆ ಮಘಮಘಿಸುವ ಸುಮತಾಣದ ತುಂಬಾ ತಂಪು ಕಂಪು. ಪಕ್ಕಕ್ಕೆ ತಿರುಗಿದ ಅವನು ಅವಳ ಕಡೆ ನಗು ಬೀರಿ ಬೊಗಸೆಯ ಕಾಕಡದ ಮೊಳವನ್ನು ದಂಡೆಯಾಗಿಸಿ ಅವಳ ಮುಡಿಯಲ್ಲಿ ಗಿಡಿದನು. ಅವನ ಕೈಯಾರೆ ಅವಳ ಮುಡಿಯೇರಿದ ಕಾಕಡ ಮತ್ತಷ್ಟು ಚೆಲುವಾಯಿತು. ಅವಳ‌ತಲೆಯೇರಿ ಅವನನ್ನೇ ದಿಟ್ಟಿಸಿತು ಕಾಕಡ, ಅವನ ಹೂ ತುಟಿಯ ನಗುವು ಕೂಡ ಕಾಕಡದ ಹಾಗೆಯೇ ಇತ್ತು ಎನ್ನುವುದು ಮಾತ್ರ ದಂಡೆಯ ಅಷ್ಟೂ ಬಿಡಿ ಕಾಕಡಗಳಿಗೂ ಅನ್ನಿಸಿತು!

-ನಕ್ಷತ್ರಮೌನಿ