ವಸಂತನೇ, ನಿನ್ನಾಗಮನಕ್ಕೆ ಮರಗಳು ಚಿಗಿತು ತುಂಬಿತು,
ಗಿಡ ಮರಗಳೆಲ್ಲಾ ಹೂ ಹೂವಿನ ಗೊಂಚಲು!
ಚಳಿಯಿಂದ ಸೆಖೆಯೆಡೆಗಿನ ಕಾಲ ಪರಿಭ್ರಮಣದಲಿ,
ನೀನೊಂದು ಆಪ್ಯಾಯಮಾನ ಮಾಸ!!
ಕೋಗಿಲೆ ಹಾಡಿದ್ದು ನಿನಗಾಗಿ, ಮಾಮರ ನಿನ್ನಿಂದಲೇ ಚಿಗುರಿತು,
ನೀನಲ್ಲವೆ ಜೀವಂತಿಕೆ, ನೀನಲ್ಲವೆ ಉತ್ಸಾಹ!!!
ಕಾಲ ಮತ್ತೆ ಚಲಿಸಿದೆ ನಿನ್ನ ಅಗಲಿ ಬೇಸಗೆಯೆಡೆಗೆ,
ಹೊರಟ ವಸಂತನೇ, ಹೂ ಚಿಗುರಿಸಿದಕ್ಕೊ, ಹಕ್ಕಿ ಹಾಡಿಸಿದಕ್ಕೊ ನಿನಗಿದೊ ನನ್ನ ಧನ್ಯವಾದ...
ಮತ್ತೆ ಬಾ, ಮೌನ ಕರಗಿಸಿ ಎದೆಯ ಕೋಗಿಲೆಯ ಹಾಡಿಸಲು;
ಮತ್ತೆ ಬಾ, ಮನದ ಬಯಕೆಯ ಹೂ ಅರಳಿಸಿ ಕಂಪ ಬಿರಿಯಲು;
ಮತ್ತೆ ಬಾ, ಒಣ ಬದುಕಿನ ಭಣಗುಡುವಿಕೆ ಹೊಡೆದು ಉತ್ಸಹಾದ ಹಸಿ ಚಿಗುರಿಸಲು;
ಬರುವ ಬೇಸಗೆಯ ಧಗೆಯ ನಿನ್ನ ನೆನಪಲ್ಲಿ ಸಹಿಸಿಕೊಳ್ಳುತ್ತೇನೆ,
ಮತ್ತೆ ಕಾಯುವ ಹಾದಿ ನಿನಾಗಮನಕ್ಕೆ,
ಮರೆಯದೇ ಬಂದು ಬಿಡು ತಡಮಾಡದೆ.
ಯೋಗೀಶ್ ಮಲ್ಲಿಗೆಮಾಡು