ಕರ್ಷತಿ ಇತಿ ಕೃಷ್ಣಾ , ಯಾವುದು ಆಕರ್ಷಿಸುತ್ತದೊ ಅದು ಕೃಷ್ಣಾ . ಕೃಷ್ಣನ ಬಣ್ಣ ಕಪ್ಪು ಮತ್ತು ಕಪ್ಪು ಬಹಳ ಬೇಗ ಸೆಳೆಯಲ್ಪಡುತ್ತದೆ. ಕಪ್ಪು ನಿಗೂಢತೆಯ ಸಂಕೇತ ಕೃಷ್ಣನಾದರೂ ಎಷ್ಟು ತಿಳಿದರೂ ತಿಳಿಯಲಾಗದ ನಿಗೂಢನಾಗಿದ್ದಾನೆ.
ಹಾಲಿನಂತಹ ವಿಚಾರವೇ ಆದರೂ ಜ್ಞಾನದ ಕಡೆಗೋಲಿನಿಂದ ಮಥಿಸಿದಾಗ ಬರುವ ಸತ್ಯ ಎಂಬ ಬೆಣ್ಣೆಯೇ ಶ್ರೇಷ್ಠ ಎಂದು ತಿಳಿಸಿದ ನವನೀತಚೋರ.
ತಾಯಿಯಾದವಳಿಗೆ ತನ್ನ ಕಂದನ ಲೀಲಾವಿನೋದದಲ್ಲೇ ಸಕಲ ಬ್ರಹ್ಮಾಂಡ ಕಾಣಿಸುತ್ತದೆ ಎನ್ನುವುದನ್ನು ತಿಳಿಸಿಕೊಟ್ಟ ಬಾಲಕೃಷ್ಣಾ.
ಗೋಪಿಕೆಯರ ಸೀರೆ ಕದ್ದು ಕಳ್ಳನಾಗುತ್ತಾನೆ, ದ್ರೌಪದಿಗೆ ಅಕ್ಷಯ ವಸನವನಿತ್ತು ರಕ್ಷಕನಾಗುತ್ತಾನೆ, ಅರ್ಜುನನ ರಥಕ್ಕೆ ಸಾರಥಿಯಾಗುತ್ತಾನೆ, ಗೀತೆಯ ಬೋಧಿಸಿ ನಮ್ಮ ಬದುಕಿನ ರಥಕ್ಕೇ ಸಾರಥ್ಯ ನೀಡುತ್ತಾನೆ, ಕೊಳಲ ಊದಿ ಸಂಗೀತಗಾರನಾಗುತ್ತಾನೆ, ಸೆರೆಮನೆಯಲಿ ಜನಿಸಿ ಭವಸೆರೆಯ ಬಿಡಿಸುತ್ತಾನೆ.
ಆತನ ಕೊಳಲು ಮತ್ತು ಶಂಖ ಪ್ರೀತಿ ಹಾಗೂ ಯುದ್ಧದ ಸಂಕೇತ, ಎಲ್ಲಿ ಪ್ರೀತಿ ಇದೆಯೊ ಅಲ್ಲಿ ಯುದ್ಧ ಇಲ್ಲ ಮತ್ತು ಎಲ್ಲಿ ಯುದ್ಧ ಇದೆಯೊ ಅಲ್ಲಿ ಪ್ರೀತಿ ಇರಲು ಸಾಧ್ಯವಿಲ್ಲ.
ವಸುದೇವಕಿಯರ ಕುಡಿಯಾಗಿ, ನಂದ ಯಶೋಧೆಯರ ಕಂದನಾಗಿ, ಸುಧಾಮನಿಗೆ ಸಖನಾಗಿ, ರುಕ್ಮಿಣಿಗೆ ಪ್ರಿಯಕರನಾಗಿ, ಅರ್ಜುನನಿಗೆ ಮಾರ್ಗದರ್ಶಕನಾಗಿ, ದ್ರೌಪದಿಗೆ ಪ್ರೀತಿಯ ಅಣ್ಣನಾಗಿ, ಹೀಗೆ ನಮ್ಮ ಜೀವನದಲ್ಲಿ ನಾವು ನಿಭಾಯಿಸುವ ಹಲವು ಪಾತ್ರಗಳನ್ನೇ ಉತ್ತಮವಾಗಿ ನಿಭಾಯಿಸಿ ತೋರಿಸಿಕೊಟ್ಟ ಸಕಲಗುಣಸಂಪನ್ನ ಕಪಟನಾಟಕಸೂತ್ರಧಾರಿ ಶ್ರೀಕೃಷ್ಣಾ ಎಲ್ಲರನ್ನೂ ಹರಸಲಿ...
ಕೃಷ್ಣಾ ಜನ್ಮಾಷ್ಟಮಿಯ ಶುಭಾಶಯ
ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.