ದೀಪಾವಳಿಯೊಂದು ವಿಶೇಷವಾದ ಹಬ್ಬ. ಬೇರೆಲ್ಲಾ ಹಬ್ಬಕ್ಕಿಂತ ಭಿನ್ನವಾದ ಸಾವಿರ ಅರ್ಥಗಳ ಹೊಳೆಯಿಸುವ ಬೆಳಕಿನ ಹಬ್ಬ!!
ಜಗತ್ತಿನ ಮೂಲ ತತ್ವವೇ ಶಾಖ ಅರ್ಥಾತ್ ಅಗ್ನಿ. ನಾವೆಲ್ಲರೂ ಬದುಕುತ್ತಿರುವುದಕ್ಕೆ ಮೂಲಕಾರಣ ಸೂರ್ಯ (ಅಗ್ನಿ). ಸೂರ್ಯ ಎನ್ನುವ ಕೇಂದ್ರ ಸ್ಥಾನವೇ ಇಲ್ಲದಿದ್ದರೆ? ಎಲ್ಲಿಯ ಮಳೆ? ಎಲ್ಲಿಯ ಬೆಳೆ? ಎಲ್ಲಿಯ ನೀರು? ಎಲ್ಲಿಯ ಜೀವಿಗಳು?
ಹಾಗಾಗಿ, ಅಂತಹ ಅಗ್ನಿಯನ್ನು ದೀಪಗಳ ಸಾಲಲ್ಲಿ ಪ್ರತಿಷ್ಠಾಪಿಸುವ ತನ್ಮೂಲಕ ಸಾಲು ಸಾಲು ದೀಪಗಳ ಶಾಖೋತ್ಪನ್ನದಲ್ಲಿ ಬದುಕಿನ ಅರ್ಥವನ್ನು ಅರ್ಥೈಸುವ ಈ ಹಬ್ಬದ ಹಿಂದೆ ಎಂತಹ ಉದ್ಧಾತ ಕಲ್ಪನೆ!!!
ಇನ್ನು ಮಾನವನ ಜೀವಿತದ ಮೂಲ ತತ್ವ ಉಸಿರು ಅರ್ಥಾತ್ ಗಾಳಿ. ನಾವೆಲ್ಲರೂ ಜೀವಿಸುತ್ತಿರುವುದಕ್ಕೆ ಮೂಲ ಕಾರಣ ಉಸಿರು (ಗಾಳಿ). ಉಸಿರು ಎಂಬ ಮೂಲ ತತ್ವ ಇಲ್ಲದಿದ್ದರೆ? ಎಲ್ಲಿಯ ಬದುಕು? ಎಲ್ಲಿಯ ಚೇತನ? ಎಲ್ಲವೂ ಬರೀ ಶವ.
ಅಲ್ಲಿಗೆ ನಾವು ಬದುಕುವುದಕ್ಕೆ ಶಾಖ ಬೇಕು ಮತ್ತು ಜೀವಿಸುವುದಕ್ಕೆ ಗಾಳಿ. ಎರಡೂ ಪ್ರಮುಖವಾದವು.
ದೀಪದಲ್ಲಿರುವುದು ಶಾಖ ಮತ್ತು ದೀಪ ಬೆಳಗಲು ಗಾಳಿ ಬೇಕು. ಗಾಳಿ ಅತಿಯಾದರೆ ದೀಪ ನಂದುತ್ತದೆ. ಹಾಗೆಂದು ಗಾಳಿಯೇ ಅತಿಶಾಖದಿಂದ ಕೂಡಿದರೆ ಬದುಕು ಅಸಾಧ್ಯ ಮತ್ತು ಗಾಳಿ ಅತಿ ಶೀತಲವಾದರೂ ಬದುಕು ಅಸಾಧ್ಯ. ದೀಪದಲ್ಲಿ ಸಮನಾದ ಗಾಳಿ ಇದ್ದರೆ ದೀಪ ಬೆಳಗುತ್ತದೆ, ಗಾಳಿಯಲ್ಲಿ ಮಿತವಾದ ಶಾಖವಿದ್ದರೆ ಹಿತವಾಗುತ್ತದೆ. ಅರ್ಥಾತ್ ಗಾಳಿ ಮತ್ತು ಶಾಖದ ಸಮವಾದ ಮಿಲನ ಮಾತ್ರ ಬದುಕನ್ನು ಹಸನಾಗಿಸುತ್ತದೆ. ಈ ಭೂಮಿಯಾದರೂ ಗಾಳಿ ಮತ್ತು ಶಾಖದ ಹಿತಮಿತವಾದ ವ್ಯವಸ್ಥೆಯೆ ಆಗಿದೆ.
ದೀಪಾವಳಿಯೂ ಇದೆ ತತ್ವದ ಹಬ್ಬ ಅಲ್ಲವೆ? ಸೂರ್ಯನೇ (ಅಗ್ನಿ) ಇರದ ಮಳೆಗಾಲದಿಂದ ಚಳಿಗಾಲದ ಶೀತಗಾಳಿಯ ಕಡೆಗೆ ಹೊರಳುವ ಈ ಸಂಧಿಕಾಲದಲ್ಲಿ ಹಣತೆ ಹಣತೆಗಳಲ್ಲಿ ದೀಪ ಹಚ್ಚಿ ಶಾಖ ಮತ್ತು ಗಾಳಿಯ ಮೂಲ ಕಲ್ಪನೆಯ ಜೊತೆ ಸಮೀಕರಿಸುವ ದೀಪಾವಳಿ ಹಬ್ಬ ಸನಾತನ ಧರ್ಮದ ಅಮೋಘ ಆಚರಣೆಯಲ್ಲೊಂದು.
ಸರಿ ಎನಿಸಿದರೆ ಇತರರೊಡನೆ ಹಂಚಿಕೊಳ್ಳಿ.
ರಚನೆ: ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.