ಗೆಳತಿ, ಬಂದಿದೆಯಂತೆ
ಹೊಸ ವರುಷ
2018ರ ಹೊಸ ಇಸವಿ,
ಈ ಸಂಭ್ರಮಕ್ಕೆ
ಇಂದಾದರೂ ಕೊಡುವೆಯ
ನಿನ್ನ ತುಟಿಯ ಈ ಸವಿ!!
Sunday, 31 December 2017
ಹೊಸ ವರುಷ- ಹೊಸ ಇಸವಿ
Tuesday, 26 December 2017
ನನ್ನ-ಅವಳ ಮಾತು
ಅವಳಂದಳು: ನಾ ಸತ್ತರೆ ನನ್ನ ನೆನಪಲ್ಲಿ ಏನು ಕಟ್ಟುವೆ?
ನಾನಂದೆ: ಪ್ರಿಯೇ, ನಿನಗಾಗಿ ತಾಜಮಹಲ್ ಕಟ್ಟುವುದಿಲ್ಲ, ಪ್ರೇಮಸೌಧ ಕಟ್ಟುವುದಿಲ್ಲ, ಕವಿತೆಗಳ ಸಾಲನ್ನೂ ಕಟ್ಟುವುದಿಲ್ಲ.
ಅವಳಂದಳು: ಹಾಗಿದ್ದರೆ ನನ್ನ ನೆನಪಲ್ಲಿ ಏನು ಕಟ್ಟುವೆ?
ನಾನಂದೆ: ಪ್ರಿಯೆ, ನಿನ್ನ ನೆನಪಲ್ಲಿ ಇನ್ನೊಬ್ಬಳಿಗೆ ತಾಳಿ ಕಟ್ಟುವೆ.
ಯೋಗೀಶ್ ಮಲ್ಲಿಗೆಮಾಡು
Thursday, 21 December 2017
ಕೊಳಲ ಹಾಡಿನ ರಾತ್ರಿ
ಕೊಳಲ ನುಡಿಸಿದ ಕೃಷ್ಣ ರಾಧೆಗೆ
ಹರಿವ ಯಮುನೆಯ ದಡದಲಿ,
ಬೆಳಗು ಇನ್ನೂ ಹೊರಳುತಿತ್ತು
ರಮ್ಯ ರಾತ್ರಿಯ ಬುಡದಲಿ.
ರಾತ್ರಿ ಕಳೆಯುವ ಕೊನೆಯ ಜಾವದಿ
ಚಂದ್ರ ತಾರೆಯು ಮಿನುಗಿದೆ,
ಬಾನಬಯಲಿನ ಹೊಸ್ತಿಲಂಚಲಿ
ದೀಪ ಬೆಳಗಿದ ಹಾಗಿದೆ.
ಗಾನ ಹೊಮ್ಮಿತು ಕೊಳಲ ಉಸಿರಲಿ
ರಾಧೆ ನಾಚಲು ಚೆಲುವಲಿ,
ನೂರು ಬೆಳಕಿನ ತಾರೆ ಬೆಳಗಿತು
ನೀಲ ಬಯಲಿನ ನಭದಲಿ.
ಬಿರಿದ ಸಂಪಿಗೆ, ತೆರೆದ ಜಾಜಿಯ
ಕಂಪು ಹಬ್ಬಿತು ಗಾಳಿಗೆ,
ಮುರಳಿಗೋಪನ ಗಾನ ಮಾತ್ರವೆ
ಸಾಕು ರಾಧೆಯ ಪಾಲಿಗೆ.
ಜೀವದೊಳಗಿನ ಉಸಿರ ಶ್ವಾಸವು
ಬರಿಯ ಗಾಳಿಯೇ ಆಯಿತು,
ತುಂಡು ಬಿದಿರೊಳು ಹೊಮ್ಮಿದುಸಿರು
ರಾಗವಾಗಿ ತೇಲಿತು.
ಕೃಷ್ಣ ನುಡಿಸಿದ, ರಾಧೆ ನುಲಿದಳು
ರಾತ್ರಿ ಕರಗಿತು ಹೀಗೆಯೆ,
ದಡದ ಆ ಕಡೆ ಮನೆಯ ಒಳಗಿನ
ದೀಪ ಬಳುಕುವ ಹಾಗೆಯೆ.
ಅರಳು ಮಲ್ಲಿಗೆ ಬಿರಿದು ಒಲವಿನ
ಕಂಪು ಚೆಲ್ಲಿತು ಸುತ್ತಲು,
ವೀಣೆ ಮೀಟಿದ ಹಾಗೆ ಬೆಳಕಿನ
ತೆರೆಯ ಬಿಚ್ಚಿತು ಕತ್ತಲು.
ಯೋಗೀಶ್ ಮಲ್ಲಿಗೆಮಾಡು
Wednesday, 20 December 2017
ಹೆಸರಿಡದ ಕವಿತೆಗಳು
ನಡೆಯುತಿರಲಿ ಬದುಕು ಅದರದೇ ಪಾಡಿಗೆ,
ಹೆಜ್ಜೆ ಹಾಕೋಣ ನಾವು ನಮ್ಮದೇ ಹಾಡಿಗೆ.
******************************************
ಕನಸು ಸತ್ತರೆ ಏನಂತೆ,
ಕನಸು ಕಾಣುವ ಮನಸು ಸಾಯದಿರಲಿ.
******************************************
ಕ್ರಮಿಸಿ ಬಂದ ಪಯಣದ ನೆನಪು ಮಾಸಿಲ್ಲ
ನಡೆಯುತಿರುವ ದಾರಿಯಲಿ ಹೂವಿಲ್ಲ ಹಾಡಿಲ್ಲ
ಬರಲಿರುವ ಹಾದಿ ಕನಸಲಷ್ಟೇ ಕಾಣುವ ಕವಿತೆ.
******************************************
ಬಸ್ಸು ಕಾರಿನ ಸಿಡಿಲ ಸದ್ದು
ಸಹಜ ಸಂಜೆಯ ಕೊಂದಿತು
ಹಕ್ಕಿ ಹಾಡಿನ, ಕೆಂಪು ಬಾನಿನ
ಸೊಬಗು ನಗರದಿ ಕುಂದಿತು
******************************************
ಜೀವದೊಳಗಿನ ಶ್ವಾಸ ಬರೀ ಗಾಳಿಯಾಯಿತು
ತುಂಡು ಬಿದಿರೊಳಗಿನ ಉಸಿರು ರಾಗವಾಗಿ ತೇಲಿತು
******************************************
ಮಾಘಿ ಚಳಿಗೆ
ಮೇಘ ಚದುರಲು
ಮೌನವಾಯಿತೆ ಕೋಗಿಲೆ?
******************************************
ಉದಯ ರಾಗವೇ ಮೂಡಿ ಬಂದಿದೆ
ಸೂರ್ಯ ರಶ್ಮಿಯ ತೇರಲಿ
******************************************
ರಾತ್ರಿ ಎಂದರೆ?
ಒಡೆದರಳಲು ಕಾದ ಮುಗುಳಿನ ಅಧರದಲಿ
ಸುಗಂಧ ಬಂಧಿಯಾದ ಘಳಿಗೆ
******************************************
ಮಂಜು ಮುಸುಕಿದ ಮುಂಜಾವಿಗೆ
ಮೌನ ಮಬ್ಬಿನ ಮೆರುಗು
******************************************
ಎಲ್ಲೋ ಕತ್ತಲರಳಿ ಚಂದಿರ ನಕ್ಕ
ಮನೆಯಂಗಳ ಫಳ್ ಎಂದಿತು ಬೆಳದಿಂಗಳಲಿ
******************************************
ಬಿರಿದ ಮಲ್ಲಿಗೆಯ ಘಮ ಹರಡಿತ್ತು
ಕತ್ತಲೆಗೆ ಕತ್ತಲೆಯೇ ಮಲಗಿದ ಹೊತ್ತಲ್ಲಿ
******************************************
ಇರುಳ ತಾಯಿಯ
ಬಿಚ್ಚು ಮುಡಿಯಲ್ಲಿ
ಬಿಡಿ ಮಲ್ಲಿಗೆಯಂತಹ
ತಾರಕೆಗಳು
******************************************
ಮುಳ್ಳು ಬೇಲಿಯ ಮೇಲೆ
ಹಂಬಿ ಹಬ್ಬಿದ ಬಳ್ಳಿಲತೆಯ ತುಂಬಾ
ಬಿರಿದ ರಾತ್ರಿರಾಣಿ
ಯೋಗೀಶ್ ಮಲ್ಲಿಗೆಮಾಡು
Tuesday, 19 December 2017
ಹೃದಯದಾಹ್ವಾನ
ಬಾನ ಬಯಲಿನ ಮುರಿದ ತಾರಕೆಗಳೇ
ಬನ್ನಿ ನನ್ನೆದೆಯ ಬೆಳಗಿ!
ಎಲ್ಲೋ ಕಟ್ಟಿದ ಕರಿಮುಗಿಲುಗಳೇ
ಬನ್ನಿ ನನ್ನೆದೆಯ ತಣಿಸಿ!
ಬೆಟ್ಟದಿಂದಿಳಿಯುತಿಹ ಬಿಳಿ ನೀರ ಝರಿಗಳೇ
ಹರಿದು ಬನ್ನಿರಿ ನನ್ನೆದೆಗಡಲ ಕಡೆಗೆ!
ಹಾಸಿ ಹರವಿದ ಶ್ರುತಿಗೊಂಡ ವೀಣೆಗಳೇ
ನುಡಿದು ತಾಕಿರಿ ನನ್ನೆದೆಯ ತಡಿಗೆ!
ಬಣ್ಣದೊಳೆ ಮೈ ಅದ್ದಿ ಹಾರುತಿಹ ಚಿಟ್ಟೆಗಳೇ
ಬನ್ನಿ ನನ್ನದೆಯ ಮಕರಂದ ಹೀರುವೊಲೆ!
ಬಿರಿದ ಮಲ್ಲಿಗೆ ಅರಳ ಹೂಬಳ್ಳಿ ಲತೆಗಳೇ
ಬನ್ನಿ ಸೂಸಿರಿ ಕಂಪು ನನ್ನೆದೆಯ ತೋಟದೊಳೆ!
ಮುಂಜಾವ ಮಂಜಿನಲಿ ಹಕ್ಕಿಗೊರಲಿನ ಹಾಡುಗಳೇ
ಬನ್ನಿ ಇನಿಗೈಯ್ದು ನನ್ನೆದೆಯ ತುಂಬಿರಿ!
ತೂಗಿ ತೊನೆದಾಡುತಿಹ ಹೆಜ್ಜೇನ ಗೂಡುಗಳೆ
ಬನ್ನಿ ನನ್ನೆದೆಬನವ ಮಧುಶಾಲೆ ಮಾಡಿರಿ!
ವಿಶ್ವಚೈತನ್ಯದ ಶಾಂತಿ ಪ್ರಭೆಗಳೇ
ಬನ್ನಿ ನನ್ನೆದೆಯೊಳಗೆ ಕಿರಣವನು ಬೀರಿ!
ನೋವ ಮರೆಸಿ, ನಗುವ ತರಿಸಿ
ಒಂದಾಗಿ ಬಾಳುವ ದಾರಿ ತೋರಿ!
ಬಾನ ಬಯಲಿನ ಮುರಿದ ತಾರಕೆಗಳೇ
ಬನ್ನಿ ನನ್ನೆದೆಯ ಬೆಳಗಿ!
ಎಲ್ಲೋ ಕಟ್ಟಿದ ಕರಿಮುಗಿಲುಗಳೇ
ಬನ್ನಿ ನನ್ನೆದೆಯ ತಣಿಸಿ!
ಯೋಗೀಶ್ ಮಲ್ಲಿಗೆಮಾಡು
Sunday, 17 December 2017
ಬನಸಿರಿಯ ಸೊಬಗು
ಅಡಿಕೆ ಸಾಲಿನ ತೋಟ, ತಂಪು ಬೀಸಿದ ಹಾದಿ,
ಹೆಮ್ಮರದ ಬುಡದಲ್ಲಿ ನಾಗ ಕಲ್ಲು.
ಇಳಿಬಿದ್ದ ಹೂಬಳ್ಳಿ, ಬನಬನದಿ ಹಸಿರ ಸಿರಿ,
ಕಾಡುಚಪ್ಪರದಿ ನುಸುಳುತಿಹ ಸೂರ್ಯರಶ್ಮಿ.
ಕೆಂಪು ಹಣ್ಣಿನ ಅರಳಿ, ಅಗಲದೆಲೆಗಳ ಆಲ,
ಜಡೆಯಾಗಿ ಜಟೆಯಾಗಿ ಜೋತ ಬಿಳಲು.
ನಾಗ ಕಲ್ಲಿನ ಮುಂದೆ, ಎಣ್ಣೆ ಜಿಡ್ಡಿನ ದೀಪ,
ಬುಡದಲ್ಲಿ ಬೆಳಗುತಿದೆ ದಾಸವಾಳ.
ಉದುರಿದಾಲದ ತರಗು, ಬೀಸು ಗಾಳಿಯ ಬೆರಗು,
ಸರಸರನೆ ಸದ್ದಿಟ್ಟ ಸರ್ಪ ಸದ್ದು.
ಸಹಜ ಶಾಂತಿಯ ಸೊಬಗು, ಬನದಿ ಸುಳಿಯುತಲಿರಲು,
ಗೆಲ್ಲು ಗೆಲ್ಲಿನ ಮೇಲೆ ಹಕ್ಕಿ ಹಾಡು.
ಜೇನ ಹೀರುವ ದುಂಬಿ, ಝೇಂಕಾರವನೆ ತುಂಬಿ,
ಬನದಲ್ಲಿ ಆಗಾಗ ಮಂತ್ರ ಘೋಷ.
ಕರಿನಾಗ ಕಲ್ಲಲ್ಲಿ, ಕಲ್ಲ ದೀಪಗಳಲ್ಲಿ,
ಬನವೆಲ್ಲ ಸುರಿಸುತಿದೆ ಭಕ್ತಿವರ್ಷ.
ಹಕ್ಕಿ ಉಲಿಹವೆ ಶ್ಲೋಕ, ಬೀಸು ಗಾಳಿಯೆ ನಾದ,
ಉದುರುತಿಹ ಹೂ ಮೊಗ್ಗೆ ಪುಷ್ಪವೃಷ್ಟಿ.
ಮನುಜನಿಲ್ಲದ ಲೋಕ, ಶಾಂತಿ ಪ್ರೇಮದ ನಾಕ
ಮೌನದೊಳು ಕಾಣುವುದು ದೈವಸೃಷ್ಟಿ.
Saturday, 16 December 2017
ಚಳಿಗೊಂದು ಕವಿತೆ
ಹೊರಗೆ ಮಂಜು ಸುರಿವ ಚಳಿ
ಒಳಗೆ ಹಕ್ಕಿ ಗೂಡಿನ ಬಿಸುಪು
ಒಡೆದ ಕಿಟಕಿ ಗಾಜಿನೊಳಗೆ
ಸಣ್ಣಗೆ ಸುಳಿದ ಶೀತಗಾಳಿಗೆ
ಮೈಯೆಲ್ಲಾ ಮಾಘ ಮಾಸ!!
ಯೋಗೀಶ್ ಮಲ್ಲಿಗೆಮಾಡು
Wednesday, 13 December 2017
ನೀರೆ ನೀನು ನೀರೆ!!!
ನೀರು ಮತ್ತು ಹೆಣ್ಣು ಎರಡೂ ಜೀವಸೆಲೆ. ನೀರು ಜೀವ ನೀಡುವಂತದ್ದು ಮತ್ತು ಹೆಣ್ಣು ಜೀವನ ನೀಡುವವಳು. ನೀರಿದ್ದಲ್ಲಿ ಜೀವನ, ನೀರಿದ್ದಲ್ಲಿ ಉತ್ಸಾಹ, ನೀರಿದ್ದಲ್ಲಿ ಜೀವಂತಿಕೆ. ಹೆಣ್ಣಾದರೂ ಅಷ್ಟೇ. ಆಕೆ ಇದ್ದಲ್ಲಿ ಜೀವ ಚೈತನ್ಯ, ಮನೆ ಮನೆಯಾಗುವುದು.
ನಮ್ಮ ದೇಶದಲ್ಲಿ ಅನೇಕ ನದಿಗಳಿಗೆ ಹೆಣ್ಣಿನ ಹೆಸರನ್ನು ನೀಡಲಾಗಿದೆ. ಕಾರಣ, ನದಿಗಳು ತಾವು ಹರಿಯುವ ಉದ್ದಗಲಕ್ಕೂ ಹಸಿರನ್ನುಂಟು ಮಾಡಿ ನದಿ ಪಾತ್ರದ ಜನರ ಜೀವನವನ್ನು ಕಟ್ಟಿಕೊಟ್ಟಿದೆ. ಅಂತೆಯೇ, ಹೆಣ್ಣು ಕೂಡ ತಾನು ಇದ್ದ ಮನೆಗೂ, ತಾನು ಹೋದ ಮನೆಗೂ ಜೀವಂತಿಕೆಯನ್ನು ಹರಿಸಿ ಹೋಗುವವಳು.
ತಾಯಿಯ ಗರ್ಭದಲ್ಲಿಯೂ ಒಂಭತ್ತು ತಿಂಗಳು ಹೊರಳುವ ಜೀವವೂ ನೀರಿನಿಂದಲೇ ಆವೃತವಾಗಿರುತ್ತದೆ. ಹೊತ್ತವಳು ನೀರೆ ಮತ್ತು ಆವೃತವಾಗಿರುವುದು ನೀರೆ!! ಹಾಗಿರುವಾಗ ಹೆಣ್ಣು ಮತ್ತು ನೀರು ಎರಡೂ ನಮ್ಮ ಬದುಕಿಗೆ ಎಷ್ಟು ಅನಿವಾರ್ಯ ಮತ್ತು ಅಗತ್ಯ ಎಂಬ ಕಲ್ಪನೆ ಮೂಡುತ್ತದೆ.
ಹೆಂಡತಿಯಾಗಿ ಬರುವವಳಾದರೂ ಮೊರೆವ ಕಡಲನ್ನು ಸಂಧಿಸುವ ನದಿಯೇ ಅಲ್ಲವೆ? ಗಂಡಿನ ಒಡಲ ಬೀಜವನ್ನು ತನ್ನೊಳಗೆ ಹುದುಗಿಸಿ ಜೀವಸೆಲೆಯ ಕೊಟ್ಟು ಕ್ಷೀರಸಾಗರವುಣಿಸಿ ಪೊರೆಯುವ ನೀರೆ (ಹೆಣ್ಣೆ) ನೀನು ನಿಜಕ್ಕೂ ನೀರೆ!!
ಯೋಗೀಶ್ ಮಲ್ಲಿಗೆಮಾಡು
Saturday, 9 December 2017
ಹಕ್ಕಿಯ ಹಾಡು-- ಹಕ್ಕಿನ ಹಾಡು
ಬೇಲಿಯ ಸಾಲಲಿ ಉಲಿಯುವ ಹಕ್ಕಿ
ಸುಂದರ ಹಾಡನು ಹಾಡುತಿದೆ
ಬಯಲಲಿ ಆಡುವ ಪುಟಾಣಿ ಮಕ್ಕಳು
ನಲಿಯುತ ಕುಣಿಯುತ ಓಡುತಿಹೆ
ಬಣ್ಣದ ಗರಿಗಳ ರೆಕ್ಕೆಯು ಚೆಂದ
ಹಾರುವ ಹಕ್ಕಿಯ ಬೆಡಗಿನೊಲು
ಮಕ್ಕಳಿಗಂತು ಹಕ್ಕಿನ ರೆಕ್ಕೆ
ಬೇಕಿದೆ ಹಾರಲು ಬಾನಿನೊಳು
ಬದುಕುವ ಹಕ್ಕು, ಬೆಳೆಯುವ ಹಕ್ಕು
ಹೆಸರನು ಹೊಂದುವ ಹಕ್ಕುಗಳು
ಬೇಕಿದೆ ತಾನೆ ಪ್ರತಿ ಮಕ್ಕಳಿಗೂ
ಸಾಯದೆ ಬದುಕುವ ಉಸಿರುಗಳು
ತನ್ನದೆ ರಾಗ, ತನ್ನದೆ ಹಾಡು
ಹಕ್ಕಿಗೆ ತನ್ನದೆ ಆಲಾಪ
ತನ್ನತನವನು ನೀಡಿದ ಮಕ್ಕಳು
ಸಾಧಿಸಿತೋರ್ವರು ಬಹುರೂಪ
ಮರದಲಿ ಟೊಂಗೆಯ ಮೇಗಡೆ ಹಾಡುವ
ಹಕ್ಕಿಯ ತಿನ್ನಲು ಹೊಂಚುತಿದೆ
ಕಾಡಿನ ಬೆಕ್ಕೊ, ಹರಿಯುವ ಹಾವೊ
ಸದ್ದೇ ಮಾಡದೆ ಕಾಯುತಿದೆ
ಆಡುವ, ಬೆಳೆಯುವ ಮಕ್ಕಳಿಗಾದರು
ರಕ್ಷಣೆ ಹಕ್ಕು ಎಂಬುದಿದೆ
ದೈಹಿಕ, ಲೈಂಗಿಕ ಕಿರುಕುಳದಿಂದ
ಮಕ್ಕಳ ರಕ್ಷಣೆ ಬೇಕಿದೆ
ಹಾರುವ, ಹಾಡುವ ಹಕ್ಕಿಯು ತಾನು
ಪ್ರಕೃತಿಯಿಂದಲೆ ಕಲಿಯುತಿದೆ
ಅರಳುವ, ಬಿರಿಯುವ ಮಕ್ಕಳಿಗಂತು
ಶಾಲೆಯು ತಾನೆ ಕರೆಯುತಿದೆ
ಶಿಕ್ಷೆಯೆ ಇಲ್ಲದ ಶಿಕ್ಷಣ ನೀಡುವ
ನಗುತಲಿ ಕಲಿಯುವ ಶಾಲೆಯು ಬೇಕು
ಚಟುವಟಿಕೆಯಲಿ ತನ್ನನು ತೊಡಗಿಸಿ
ಚಿಂತನೆ ಹಚ್ಚುವ ಶಿಕ್ಷಣ ಬೇಕು
ಹೊಡೆತ ಬಡೆತದ ಶಿಕ್ಷಣದಲ್ಲಿ
ಬಿರಿಯುವ ಮೊಗ್ಗು ಬಾಡುತಿದೆ
ಹೂವಿನ ಹಾಗೆ ಅರಳುತ ಮಕ್ಕಳು
ವಿಕಸನಗೊಳ್ಳುವ ಹಕ್ಕುಯಿದೆ
ಮಕ್ಕಳ ಮಾತನು ಕೇಳಲಿ ಎಲ್ಲರು
ಮಕ್ಕಳ ವಿಚಾರ ಆಲಿಸಲಿ
ಮಕ್ಕಳ ನಿರ್ಣಯದಲ್ಲಿಯು ಕೂಡ
ಮಕ್ಕಳು ಭಾಗವಹಿಸಲಿ
ಮಯಸಿಗೆ ಮುನ್ನ ಮದುವೆಯು ಬೇಡ
ಕಲಿಯುವ ಮುನ್ನ ದುಡಿಮೆಯು ಬೇಡ
ಹಕ್ಕಿಯ ಹಾಗೆ ಹಾಡಲಿ ಮಕ್ಕಳು
ಹಕ್ಕಿಯ ಹಾಗೆ ಹಾರುತಲಿ
ಹಾರಲಿ ಹಕ್ಕಿ ರೆಕ್ಕೆಯ ಬಲದಲಿ
ನೀಲ ಬಾನಿನ ಬಯಲೊಳಗೆ
ಬೆಳೆಯಲಿ ಮಕ್ಕಳು ಹಕ್ಕಿನ ಬಲದಲಿ
ಮಕ್ಕಳ ಸ್ನೇಹಿ ಜಗದೊಳಗೆ
ಯೋಗೀಶ್ ಮಲ್ಲಿಗೆಮಾಡು