Thursday, 21 December 2017

ಕೊಳಲ ಹಾಡಿನ ರಾತ್ರಿ

ಕೊಳಲ ನುಡಿಸಿದ ಕೃಷ್ಣ ರಾಧೆಗೆ
ಹರಿವ ಯಮುನೆಯ ದಡದಲಿ,
ಬೆಳಗು ಇನ್ನೂ ಹೊರಳುತಿತ್ತು
ರಮ್ಯ ರಾತ್ರಿಯ ಬುಡದಲಿ.

ರಾತ್ರಿ ಕಳೆಯುವ ಕೊನೆಯ ಜಾವದಿ
ಚಂದ್ರ ತಾರೆಯು ಮಿನುಗಿದೆ,
ಬಾನಬಯಲಿನ ಹೊಸ್ತಿಲಂಚಲಿ
ದೀಪ ಬೆಳಗಿದ ಹಾಗಿದೆ.

ಗಾನ ಹೊಮ್ಮಿತು ಕೊಳಲ ಉಸಿರಲಿ
ರಾಧೆ ನಾಚಲು ಚೆಲುವಲಿ,
ನೂರು ಬೆಳಕಿನ ತಾರೆ ಬೆಳಗಿತು
ನೀಲ ಬಯಲಿನ ನಭದಲಿ.

ಬಿರಿದ ಸಂಪಿಗೆ, ತೆರೆದ ಜಾಜಿಯ
ಕಂಪು ಹಬ್ಬಿತು ಗಾಳಿಗೆ,
ಮುರಳಿಗೋಪನ ಗಾನ ಮಾತ್ರವೆ
ಸಾಕು ರಾಧೆಯ ಪಾಲಿಗೆ.

ಜೀವದೊಳಗಿನ ಉಸಿರ ಶ್ವಾಸವು
ಬರಿಯ ಗಾಳಿಯೇ ಆಯಿತು,
ತುಂಡು ಬಿದಿರೊಳು ಹೊಮ್ಮಿದುಸಿರು
ರಾಗವಾಗಿ ತೇಲಿತು.

ಕೃಷ್ಣ ನುಡಿಸಿದ, ರಾಧೆ ನುಲಿದಳು
ರಾತ್ರಿ ಕರಗಿತು ಹೀಗೆಯೆ,
ದಡದ ಆ ಕಡೆ ಮನೆಯ ಒಳಗಿನ
ದೀಪ ಬಳುಕುವ ಹಾಗೆಯೆ.

ಅರಳು ಮಲ್ಲಿಗೆ ಬಿರಿದು ಒಲವಿನ
ಕಂಪು ಚೆಲ್ಲಿತು ಸುತ್ತಲು,
ವೀಣೆ ಮೀಟಿದ ಹಾಗೆ ಬೆಳಕಿನ
ತೆರೆಯ ಬಿಚ್ಚಿತು ಕತ್ತಲು.

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.