Wednesday, 31 January 2018

ಸರಳ ಬದುಕು ನೆಮ್ಮದಿಯ ಸಿದ್ಧ ಸೂತ್ರ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-15

ಈ ಶತಮಾನದ ಆರಂಭದಲ್ಲೇ ಟೆನ್ಷನ್ 🤦🏼‍♂, ಬ್ಯುಸಿ 🏃🏻‍♀ ಒತ್ತಡ🙆🏼‍♂ ಎಂಬ ಪದಗಳು ಬಹುವಾಗಿ ಚಾಲ್ತಿಗೆ ಬಂದವು. ತಂತ್ರಜ್ಞಾನದ 🖥ವೇಗವಾದ ಬಳಕೆ ಮತ್ತು ಅಭಿವ್ರದ್ಧಿ ಇದಕ್ಕೆ ಕಾರಣ ಎನ್ನುವುದು ನಮ್ಮೆಲ್ಲರಿಗೂ ತಿಳಿದ ವಿಚಾರ. ಕಾಲದೊಂದಿಗೆ ⏱ಓಟಕ್ಕೆ🏃🏻‍♀ ಇಳಿದ ನಮಗೆ ಬದುಕು ಒಂದು ಆಸ್ವಾದಿಸುವ ಕ್ರಿಯೆಯಾಗದೆ ಮುಗಿಸಿ ಬಿಡುವ ಪ್ರಕ್ರಿಯೆ ಆಗಿರುವುದು ದುರಂತ.

ನಾವಿಂದು ಬದುಕನ್ನು ಸುಖಿಸುವ (Enjoy) ಪರಿಕಲ್ಪನೆಯಲ್ಲಿದ್ದೇವೆಯೆ ಹೊರತು ಆಸ್ವಾದಿಸುವ (Relish) ಪರಿಕಲ್ಪನೆಯಲ್ಲಿಲ್ಲ. ಹಾಗಾಗಿ ಸುಖಿಸುವುದು (Enjoy) ಎಂದರೆ ಮಾಲ್ ಗೆ🏢 ಹೋಗಿ ಖರೀದಿ 🛒ಮಾಡುವುದು, ಅತಿ ದುಬಾರಿ ಚಿನ್ನಾಭರಣ💍👚👗 ಬಟ್ಟೆಗಳ ಖರೀದಿ, ಪಬ್ 🍻, ಮೂವಿ ಮುಂತಾದೆಡೆಗೆ ಹೋಗಿ ಮಜ ಮಾಡುವುದು ಎಂದು ಭಾವಿಸಿದ್ದೇವೆ.
ಈಗ Enjoy ಮಾಡದೆ ಇನ್ನು ಯಾವಾಗ ಮುದುಕರಾದ ಮೇಲೆ ಮಾಡುವುದೇ ಎನ್ನುವ ಸಿದ್ಧಾಂತವನ್ನೂ ಪ್ರತಿಪಾದಿಸುತ್ತೇವೆ. Enjoy ಮಾಡುವುದರಿಂದ ಏನು ಸಿಗುತ್ತದೆ ಎಂದು ಕೇಳಿದರೆ ನೆಮ್ಮದಿ ಎಂದು ಉತ್ತರಿಸುತ್ತೇವೆ.

ಸುಖಿಸುವುದರಿಂದ ಅರ್ಥಾತ್ Enjoy ಮಾಡುವುದರಿಂದ ಮನಸ್ಸನ್ನು ಖುಷಿ ಪಡಿಸಬಹುದು ಆದರೆ ಅದು ನೆಮ್ಮದಿ ನೀಡುವುದಿಲ್ಲ. ದುಂದುವೆಚ್ಚ 💰,ದುಬಾರಿ ಕಾರು🚖,ದೊಡ್ಡ ಮನೆಗಳು🏤 ಎಲ್ಲವನ್ನೂ(Enjoy)  ಸುಖಿಸಬಹುದು ಆದರೆ ಅವು ನೆಮ್ಮದಿ ಕೊಡಬೇಕೆಂದೇನಿಲ್ಲ. ಒಂದು ವೇಳೆ ಹಾಗಾಗಿದ್ದರೆ ದೊಡ್ಡ ಬಂಗಲೆ, ದುಬಾರಿಕಾರು, ಬ್ಯಾಂಕು ಠೇವಣಿ (ಬ್ಯಾಲೆನ್ಸ್) ಇದ್ದವರೆಲ್ಲಾ ನೆಮ್ಮದಿಯಿಂದ ಇರುತ್ತಿದ್ದರು!

ಹಾಗಾಗಿ ನೆಮ್ಮದಿಯನ್ನು ಹುಡುಕಬೇಕಾದರೆ ಸರಳ ಬದುಕಿನ ಕಡೆಗೆ ನೋಡಬೇಕು. ಇರುವುದರಲ್ಲೇ ತೃಪ್ತಿ ಪಡುವ, ಸರಳವಾಗಿ ಬದುಕುವವರು ಮಾತ್ರ ನೆಮ್ಮದಿ ಕಾಣಬಲ್ಲರು. ಬುದ್ಧ ಇದನ್ನೇ *ಆಸೆಯೇ ದುಃಖಕ್ಕೆ ಮೂಲ* ಎಂದು ಹೇಳಿದ. ಆಸೆ ಅತಿ ಲೋಭವನ್ನು ತರುತ್ತದೆ. ಅಲ್ಲಿ ಸುಖಿಸುವ (Enjoy) ಕಲ್ಪನೆ ಮೂಡುತ್ತದೆ. ಅದು ನೆಮ್ಮದಿ ಕೊಡಲಾರದು.

ಸರಳ ಬದುಕು ಮಿತ ಬಳಕೆಯ ತತ್ವದಲ್ಲಿ ಚಿಗುರೊಡೆಯುತ್ತದೆ. ಇರುವ ವಸ್ತುಗಳ ಸಂಪೂರ್ಣ ಬಳಕೆ, ಉಪಯೋಗಿತ ವಸ್ತುಗಳ ಪುನರ್ಬಳಕೆ, ಪ್ರಕೃತಿಯೊಂದಿಗಿನ ಹೊಂದಾಣಿಕೆ, ನೈಸರ್ಗಿಕವಲ್ಲದ ವಸ್ತುಗಳ ತಿರಸ್ಕಾರ ಮುಂತಾದವು ಸರಳ ಬದುಕಿನ ಸೂತ್ರಗಳು. ಹಾಗೆಂದು ತೀರಾ ಋಷಿ ಮುನಿಗಳಂತೇನು ಬದುಕಬೇಕೆಂದೇನಿಲ್ಲ. ಬದಲಾಗಿ ದೇಶೀಯವಾದ ಜೀವನ ಸರಳ ಬದುಕನ್ನು ಕಟ್ಟಿಕೊಡುತ್ತದೆ. ನಾಗರೀಕತೆಯಲ್ಲಿ ದೇಶೀಯತೆ, ಗ್ರಾಮ್ಯ ಸೊಗಡನ್ನು ಉಳಿಸಿದರೆ ಸರಳ ಬದುಕು ಮೈಗೂಡುತ್ತವೆ.

ಇದೇ ಸರಳ ಬದುಕು ಮಾನಸಿಕ ನೆಮ್ಮದಿ 🙇🏽‍♂🙇🏻‍♀ಕೊಡುವಂತದ್ದು. ತನ್ಮೂಲಕ ದೈಹಿಕ ವ್ಯಾಧಿ ದೂರಮಾಡುತ್ತವೆ. ಇಂದು ವಿದೇಶಿಗರೂ ಈ ಸರಳ ಬದುಕನ್ನು ನೆಚ್ಚಿ ಭಾರತೀಯ ಆಧ್ಯಾತ್ಮ, ಯೋಗಗಳೆಡೆಗೆ ಒಲವು ತೋರುತ್ತಿದ್ದಾರೆ. ಆದರೆ ನಾವು ಸುಖಿಸುವ(enjoy) ಭರದಲ್ಲಿ ಅದ್ಧೂರಿ ಆಡಂಬರದ ಬದುಕಿಗೆ ಸಿಲುಕಿ ಒತ್ತಡ 🙆🏼‍♂, ಬ್ಯುಸಿ 🏃🏻‍♀ಟೆನ್ಷನ್ 🤦🏼‍♂ಎಂದು ಗೋಳಾಡುತ್ತೇವೆ, ಕಾಲದೊಂದಿಗೆ ಓಡುತ್ತೇವೆ.

ಯೋಗೀಶ್ ಮಲ್ಲಿಗೆಮಾಡು

ಗ್ರಹಣ ಮುಗಿಯಿತು, ಈಗ ನನ್ನದೊಂದಿಷ್ಟು ವಿಚಾರ ಕೇಳಿರಿ

ಸನಾತನ ಧರ್ಮವು ಅಗಾಧ ಜ್ಞಾನ ಶಾಖೆಗಳನ್ನು ಹೊಂದಿರುವುದು ನಮಗೆಲ್ಲಾ ತಿಳಿದಿರುವ ವಿಚಾರ.  ಇಂತಹ ಕ್ಲಿಷ್ಟ ವಿಚಾರಗಳನ್ನು ಅತ್ಯಂತ ಸರಳ ರೀತಿಯಲ್ಲಿ ಜನರಿಗೆ ತಿಳಿಸುವ ಸಲುವಾಗಿ ಮುನಿಗಳು ಕಥೆಗಳ ರೂಪದಲ್ಲಿ ಧಾರೆಯೆರೆದರು. ಮೂಲತಃ ಅನೇಕ ಕಥೆಗಳು ಸನಾತನ ಧರ್ಮದ ಮೂಲ ತತ್ವಗಳನ್ನು ತಿಳಿಸುವ ಸಂಕೇತಗಳಾಗಿವೆ. ಹೇಗೆ ಗಣಿತದ ಲೆಕ್ಕಗಳನ್ನು ಮಕ್ಕಳಿಗೆ ಮನೆಯಲ್ಲಿರುವ ರೊಟ್ಟಿ, ಚಾಕಲೇಟಿನೊಂದಿಗೆ ಸಮೀಕರಿಸಿ ಹೇಳುವುದಿಲ್ಲವೆ ಹಾಗೆ.

ಗ್ರಹಣದ ತತ್ವವಾದರೂ ಹೀಗೆಯೇ. ಮೂಲತಃ ಹಿಂದೂ ಸನಾತನ ಧರ್ಮದಲ್ಲಿ ಗ್ರಹಗಳನ್ನು ಲೆಕ್ಕ ಹಾಕಿದ ಮಹರ್ಷಿ ಪರಾಶರಾ ಸೂರ್ಯ, ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ, ರಾಹು ಮತ್ತು ಕೇತು ಎಂದು ಹೇಳಿದರು. ಆದರೆ ವಿಜ್ಞಾನಿಗಳು ಒಂಭತ್ತು ಗ್ರಹಗಳ ಲೆಕ್ಕ ಹಾಕುವಾಗ (ಮರ್ಕ್ಯುರಿ, ವೀನಸ್, ಅರ್ಥ್, ಮಾರ್ಸ್, ಜ್ಯುಪಿಟರ್, ಸಾಟರ್ನ್, ಯುರೇನಸ್, ನೆಪ್ಚ್ಯುನ್) ಎಂದು ಹೇಳಿದರು.

ಮರ್ಕ್ಯುರಿ- ಬುಧ
ವೀನಸ್- ಶುಕ್ರ
ಮಾರ್ಸ್- ಕುಜ/ಮಂಗಳ
ಜ್ಯುಪಿಟರ್- ಗುರು
ಸಾಟರ್ನ್- ಶನಿ
ಎಂಬುವುದು ವಿಜ್ಞಾನ ಮತ್ತು ಸನಾತನ ಧರ್ಮದಲ್ಲಿ ಸರಿಯಾಗಿ ಉಲ್ಲೇಖವಾಗಿದೆ. ಆದರೆ, ಅರ್ಥ್(ಭೂಮಿ) ಅನ್ನು ಗ್ರಹವಾಗಿ ಸನಾತನ ಧರ್ಮ ತೆಗೆದುಕೊಂಡಿಲ್ಲ. ಯಾಕೆಂದರೆ ನಾವು ಇರುವುದು ಭೂಮಿಯ ಮೇಲೆಯೇ ಆದ್ದರಿಂದ ಭೂಮಿಯಿಂದ ಮನುಷ್ಯನ ಮೇಲೆ ಪ್ರಭಾವ ಬೀರುವುದಿಲ್ಲ ಹಾಗಾಗಿ ಸನಾತನ ಧರ್ಮವು ಭೂಮಿಯನ್ನು ಗ್ರಹವೆಂದು ನವಗ್ರಹದಲ್ಲಿ ಸ್ವೀಕರಿಸಿಲ್ಲ.
ಇನ್ನು ಯುರೇನಸ್, ನೆಪ್ಚ್ಯುನ್ ಗಳು ನಮ್ಮ ಭೂವಲಯದಿಂದ ಅತ್ಯಂತ ದೂರವಿರುವುದರಿಂದ ಮತ್ತು ಅವುಗಳ ಬೆಳಕಿನ ಪ್ರತಿಫಲನ ಭೂಮಿಗೆ ತಾಕುವುದಕ್ಕಿಂತ ಅತ್ಯಂತ ದೂರವಿರುವುದರಿಂದ ಆ ಗ್ರಹಗಳ ಪ್ರಭಾವ ನಮ್ಮ ಮೇಲೆ ಆಗುವುದಿಲ್ಲವೆಂಬ ಕಾರಣಕ್ಕೆ ಅವುಗಳನ್ನು ನವಗ್ರಹದ ಪರಿಧಿಯಲ್ಲಿ ಸ್ವೀಕರಿಸಿಲ್ಲ.

ಸೂರ್ಯ ಮತ್ತು ಚಂದ್ರರು  ಭೂಮಿಯ ಮೇಲೆ ಪ್ರಭಾವ ಬೀರುವಂತೆ ಅತ್ಯಂತ ನಿಕಟವಾಗಿದ್ದು ಆ ಗ್ರಹಗಳ ಪ್ರಭಾವ ಭೂಮಿಯ ಮೇಲೆ ನೇರವಾಗಿ ಆಗುವುದರಿಂದ (ಸೂರ್ಯ ಮಳೆ, ಬೆಳೆ ತರುತ್ತಾನೆ, ಚಂದ್ರನು ಕಡಲ ಅಲೆಗಳನ್ನು ಉಕ್ಕೇರಿಸುತ್ತಾನೆ ಇತ್ಯಾದಿ) ಅವುಗಳನ್ನು ಗ್ರಹಗಳ ಪಟ್ಟಿಯಲ್ಲಿ ಉಲ್ಲೇಖಿಸಿದೆ.

ಆಶ್ಚರ್ಯಕರ ಸಂಗತಿ ಏನೆಂದರೆ, ರಾಹು ಮತ್ತು ಕೇತು ಎಂಬ ಎರಡು ಗ್ರಹಗಳನ್ನು ಸನಾತನ ಧರ್ಮದಲ್ಲಿ ಉಲ್ಲೇಖಿಸಿರುವುದು. ಮೂಲತಃ ಅಂತಹಃ ಗ್ರಹಗಳೇ ಇಲ್ಲದಿರುವಾಗ ಹಿಂದೂ ಧರ್ಮದಲ್ಲಿ ಈ ಎರಡು ಕಾಲ್ಪನಿಕ ಗ್ರಹಗಳನ್ನು ಯಾಕೆ ಉಲ್ಲೇಖಿಸಲಾಯಿತು?

ಇದಕ್ಕೆ ನಾವು ಮೊದಲು ಪುರಾಣ ಕಥೆಯನ್ನು ಕೇಳೋಣ:
ರಾಹು ಎಂಬವನು ಪ್ರಹ್ಲಾದನ ತಂಗಿಯಾದ ಸಿಮ್ಹಿಕಾ ಮತ್ತು ವಿಪ್ರಚಿತಿ ಎಂಬ ದಂಪತಿಗಳ ಮಗ. ಅಮ್ರತ ಮಥನದ ಸಂದರ್ಭ ರಾಕ್ಷಸರ ಸಹಾಯ ತೆಗೆದುಕೊಂಡರು ದೇವತೆಗಳು. ಅಮ್ರತೋದ್ಭವ ಸಂದರ್ಭ ರಾಕ್ಷಸರು ಅಮ್ರತ ಕಲಶವನ್ನು ಕಸಿದುಕೊಂಡರು. ವಿಷ್ಣು ಮೋಹಿನಿ ರೂಪಧಾರಣೆ ಮಾಡಿ ರಾಕ್ಷಸರು ಮೋಹಿಸಲು ಉಪಾಯವಾಗಿ ಅಮ್ರತವನ್ನು ಪಡೆದುಕೊಂಡು ಎಲ್ಲರಿಗೂ ನೀಡುತ್ತೇನೆ ಎಂದು ತಿಳಿಸಿದನು.  ಇದರಲ್ಲೇನೊ ಮೋಸವಿದೆ ಎಂದರಿತ ರಾಹು ವೇಷ ಮರೆಸಿ ದೇವತೆಗಳ ಸಾಲಿನಲ್ಲಿ ಸೂರ್ಯ ಚಂದ್ರರ ನಡುವೆ ಕುಳಿತನು. ಇದನ್ನರಿತ ಸೂರ್ಯ ಚಂದ್ರರು ವಿಷ್ಣುವಿಗೆ ಈ ಬಗ್ಗೆ ತಿಳಿಸಿದರು. ವಿಷ್ಣು ತನ್ನ ಸುದರ್ಶನ ಚಕ್ರದಿಂದ ರಾಹುವಿನ ತಲೆ ಕತ್ತರಿಸಿದನು. ಅಷ್ಟರಲ್ಲಾಗಲೆ ವಿಷ್ಣುವಿನ ಕಲಶದ ಒಂದು ಹನಿ ಅಮ್ರತ ಆತ ಸೇವಿಸಿದ ಕಾರಣ ರಾಹುವಿನ ತಲೆ ಮತ್ತು ದೇಹದ ಭಾಗ ಬೇರ್ಪಟ್ಟರೂ ಅವು ಜೀವಂತ ಉಳಿದವು. ತಲೆ ಭಾಗವು ರಾಹು ಎಂದು ಮೈಯ್ಯ ಭಾಗವು ಕೇತು ಎಂದು ಕರೆದರು. ಸೂರ್ಯ ಚಂದ್ರರು ಹೇಳಿಕೊಟ್ಟಿದ್ದರಿಂದ ಆ ಇಬ್ಬರನ್ನು ರಾಹು ಕೇತು ಆಕ್ರಮಿಸಲು ಹವಣಿಸುತ್ತಾರೆ ಎನ್ನುವ ಕಥೆಯಿದೆ. ಇದು ಒಂದು ಕಥೆಯಷ್ಟೇ. 

ಆದರೇ, ಈ ಕಥೆಯ ಆಳದಲ್ಲಿ ಹಲವು ಜೋತೀಷ್ಯ, ಗ್ರಹ ನಕ್ಷತ್ರಗಳ ವಿಚಾರಗಳಿವೆ. ಮೂಲತಃ ರಾಹು ಮತ್ತು ಕೇತು ಬೇರೆ ಗ್ರಹಗಳಂತೆ ಆಕಾಶದಲ್ಲಿ ಕಾಣದು ಹಾಗಾಗಿ ಇದನ್ನು ಛಾಯ (ನೆರಳು) ಗ್ರಹ ಎನ್ನಲಾಗುತ್ತದೆ. ಗ್ರಹಣವಾದರೂ ಸೂರ್ಯ, ಭೂಮಿ, ಚಂದ್ರರ ನೆರಳು ಬೆಳಕಿನ ಆಟವಷ್ಟೆ.

ರಾಹು ಮತ್ತು ಕೇತುಗಳು (Lunar north south nodes) ಚಂದ್ರನ ಉತ್ತರ ಮತ್ತು ದಕ್ಷಿಣ ಅಂಚುಗಳೆಂದು ಹೇಳಲಾಗುತ್ತದೆ. ಹಾಗಾಗಿ ಸೂರ್ಯ ಚಂದ್ರರ (intersection path)ಅಂತರ್ ವಿಭಾಗೀಯ ಹಾದಿಯಲ್ಲಿ ರಾಹು ಮತ್ತು ಕೇತುವನ್ನು ಉಲ್ಲೇಖಿಸಲಾಗುತ್ತದೆ. ಹಾಗಾಗಿ ಸೂರ್ಯ ಚಂದ್ರರ ನೆರಳು ಬೆಳಕಿನ ಆಟವೇ ಈ ಅಂಚುಗಳನ್ನು ರಾಹು ಕೇತು ಹಿಡಿಯುವುದು ಎಂದು ಹೇಳಲಾಗುತ್ತದೆ. ಹಾಗಾಗಿ ಗ್ರಹಣವು ಸೂರ್ಯ, ಭೂಮಿ, ಚಂದ್ರರ ನೆರಳು ಬೆಳಕಿನ ಆಟ ಮಾತ್ರ ಮತ್ತು ಅದನ್ನು ರಾಹು ಮತ್ತು ಕೇತು ಎಂಬ ಕಾಲ್ಪನಿಕ ಛಾಯಾ ಗ್ರಹಗಳ ಮೂಲಕ ಲೆಕ್ಕ ಹಾಕಲಾಗುತ್ತದೆ.

ಆದರೆ, ಹೇಗೆ ನಿರಂತರ ಬೆಳಕು ಬೀಳುವ ಸಂದರ್ಭದಲ್ಲಿ ಯಾವುದಾದರೂ ವಸ್ತು ಬೆಳಕಿಗೆ ಅಡ್ಡಬಂದಾಗ ಕತ್ತಲು ಮೂಡಿದ ಕೂಡಲೆ ನಮ್ಮ ಕಣ್ಣು ಕತ್ತಲಿಗೆ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುವಂತೆ ಸುರ್ಯ ಚಂದ್ರರ ಸಹಜ ಬೆಳಕಿಗೆ ಅಡ್ಡ ಬರುವ ಗ್ರಹದಿಂದ ಉಂಟಾಗುವ ನೆರಳು ನಮ್ಮ ಮನೋಮಯದಲ್ಲಿ ಕೊಂಚ ಗೊಂದಲ ಉಂಟು ಮಾಡುವುದು ಸಹಜ. ಹೇಗೆ ಮೋಡವಿದ್ದಾಗ ಮನಸ್ಸಿಗೆ ಕೊಂಚ ಮಂಕು ಕವಿಯುತ್ತದೊ ಹಾಗೆ. ಹಾಗಾಗಿ ಗ್ರಹಣ ಕಾಲ ಸ್ವಲ್ಪ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಆದರೆ ಇಂದು ಟಿವಿಯಲ್ಲಿ ಕೂತ ಜೋತೀಷಿಗಳು ಹೇಳುವಷ್ಟು ಗಾಢವಾಗಿ ತೆಗೆದುಕೊಂಡು ಮಾನಸಿಕ ಹಿಂಸೆ ಅನುಭವಿಸುವುದು ಸಲ್ಲದು. ನೈಸರ್ಗಿಕವಾಗಿ ನಡೆಯುವ ಕ್ರಿಯೆಯಾದ್ದರಿಂದ ಇದರ ಬಗ್ಗೆ ಅತಿಯಾದ ಮಡಿವಂತಿಕೆ ಒಳ್ಳೆಯದಲ್ಲ.

ಅಷ್ಟಕ್ಕೂ ನಾವಿಂದು ನಿಸರ್ಗಕ್ಕೆ ವಿರುದ್ಧವಾಗಿ ವಾಯು, ಜಲ, ಭೂ ಮಾಲಿನ್ಯ, ಕಾರ್ಖಾನೆಗಳ ತ್ಯಾಜ್ಯ ಮುಂತಾದವುಗಳ ಪ್ರಭಾವವನ್ನೇ ಎದುರಿಸಿ ಬದುಕುತ್ತಿದ್ದೇವೆ. ಹಾಗಿರುವಾಗ ನಿಸರ್ಗ ಸಹಜ ಗ್ರಹಣದ ಪ್ರಭಾವ ಅಂತಹ ತೊಂದರೆಯೇನು ಮಾಡದು. ಭಯ ಬಿಡಿ

ಪರಿಕಲ್ಪನೆ: ಯೋಗೀಶ್ ಮಲ್ಲಿಗೆಮಾಡು

Tuesday, 30 January 2018

ಬಿಳಿ ಬಣ್ಣಕ್ಕೆ ಪ್ರಾಮುಖ್ಯತೆ ಕೊಡುವ ಮಾಧ್ಯಮಗಳ ನೈತಿಕತೆ ಏನು?

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-14

ನಮ್ಮ ಯೋಚನಾ ಲಹರಿಯ🧠 ಮೇಲೆ ಮಾಧ್ಯಮಗಳು 📺ಗಾಢವಾದ ಪ್ರಭಾವವನ್ನು ಬೀರುವುದನ್ನು ನಾವೆಲ್ಲರೂ ಮನಗಂಡಿದ್ದೇವೆ. ಸುಶಿಕ್ಷಿತರು 👨🏽‍🎓👩🏽‍🎓ಎಂದು ಕರೆಸಿಕೊಳ್ಳುತ್ತಿರುವ ಈ ಕಾಲಘಟ್ಟದಲ್ಲೂ ನಾವು ಅನೇಕ ಸಾರಿ ಮಾಧ್ಯಮ📺 ವಿಶ್ಲೇಷಣೆಯೊಂದಿಗೆ ತೇಲಿಹೋಗುತ್ತೇವೆ. ಅದು ರಾಜಕೀಯ, ಚಲನಚಿತ್ರ ಅಥವಾ ಸಾಮಾಜಿಕ ವಿಚಾರಗಳೇ ಇರಬಹುದು. ಒಟ್ಟಿನಲ್ಲಿ ಮಾಧ್ಯಮ 📺ತನ್ನ ನಿಲುವನ್ನು ಜನರ ಮೇಲೆ ಹೇರುವುದು ಸತ್ಯ.

ಹೀಗೆ ಒಂದು ಕಾಲಘಟ್ಟದ ಜನರ ಮನಸ್ಥಿತಿಗಳ ಮೇಲೆ ತನ್ನ ಅಗಾಧ ಪರಿಣಾಮವನ್ನು ಬೀರುವ ಮಾಧ್ಯಮಗಳು 📺 ಅತ್ಯಂತ ಜವಾಬ್ದಾರಿಯುತ, ನೈತಿಕ ತಳಹದಿಯಲ್ಲಿ ನಡೆಯಬೇಕಾಗುತ್ತದೆ. ಸಮಾಜದ🌎 ಅಂಕುಡೊಂಕುಗಳನ್ನು ಮಾಧ್ಯಮ 📺ಒಂದು ಧ್ವನಿಯಾಗಿ 🗣ಹೇಳಬೇಕಾಗುತ್ತದೆ. ವಾರ್ತೆಗಳು, ಧಾರಾವಾಹಿಗಳು, ಚಲನಚಿತ್ರಗಳು ಮುಂತಾದ ಎಲ್ಲ ವಿಧವಾದ ಮಾಧ್ಯಮಗಳು ಇದನ್ನು ಮಾಡಬೇಕಿದೆ. ಆದರೆ, ಹಾಗಾಗುತ್ತಿದೆಯೆ ಎನ್ನುವುದೇ ಪ್ರಶ್ನೆ. ಸಮಾಜದ ತಪ್ಪುಗಳಿಗೆ ಧ್ವನಿಯಾಗುವ 🗣ಮಾಧ್ಯಮಗಳೇ ತಪ್ಪು ಮಾಡಿದರೆ? ಟಿ.ಆರ್.ಪಿ ಹೆಸರಲ್ಲಿ ಶ್ವೇತ ವರ್ಣಕ್ಕೆ 👩🏻 ಪ್ರಶಾಸ್ತ್ಯ ಕೊಟ್ಟು ಜನರ ಮನೋವಲಯದಲ್ಲಿ ಕಪ್ಪು ವರ್ಣವನ್ನು 👩🏿 ಮೂಲೆಗುಂಪು ಮಾಡುತ್ತಿರುವುದು ಅಕ್ಷಮ್ಯ. 

ನೀವು ಯಾವುದೇ ವಾಹಿನಿಗಳನ್ನು ನೋಡಿರಿ ಅಲ್ಲಿ ನಿರೂಪಣೆ ಮಾಡುವ, ಜಾಹೀರಾತು ನೀಡುವ, ವಾರ್ತೆ ಓದುವ, ನಟನೆ ಮಾಡುವ ಬಹುತೇಕರು ಬಿಳಿ ಬಣ್ಣದವರು 👩🏼‍💼. ಅರ್ಥಾತ್, ಶ್ಯಾಮಲ ವರ್ಣದ 👩🏾‍💼ವ್ಯಕ್ತಿಗಳ ಸಂಖ್ಯೆಯು ಮುಂಪರದೆಯ (ಓನ್ ಸ್ಕ್ರೀನ್) ಮೇಲೆ ಶೇಕಡವಾರು ಅತ್ಯಂತ ಕಡಿಮೆ! ಜಾಹೀರಾತುಗಳೇ ನೋಡಿರಿ- ಎಲ್ಲಾ ಲೇಪಗಳು (ಕ್ರೀಮ್) ನಿಮ್ಮ ಕಪ್ಪು ಬಣ್ಣವನ್ನು 👨🏿 ಬಿಳಿ 👨🏻ಮಾಡುವ ಕುರಿತೇ ಪ್ರಚಾರ ಮಾಡುತ್ತವೆ. ಕಪ್ಪು ಬಣ್ಣ ಆತ್ಮವಿಶ್ವಾಸ ಕುಂದಿಸುತ್ತವೆ, ಬಿಳಿ ಬಣ್ಣ ಆತ್ಮ ವಿಶ್ವಾಸ ಹೆಚ್ಚಿಸುತ್ತವೆ ಅನ್ನುವಂತಹ ಜಾಹೀರಾತುಗಳು, ಎಲ್ಲದಕ್ಕೂ ಪಾಶ್ಚಾತ್ಯ ದೇಶದ ಬಿಳಿ ಚರ್ಮದವರೆಡೆಗೆ ಕಣ್ಣುನೆಟ್ಟು ಅವರನ್ನೇ ಅನುಕರಿಸುವ ಭಾರತೀಯರಿಂದ, ಬಹುಕೋಟಿ ಆದಾಯವನ್ನು 💰 ಸುಲಭವಾಗಿಯೇ ಮಾಡಿದವು. ನಮ್ಮ ಸಂವಿಧಾನವು 📖 ಸಮಾನತೆಯನ್ನು ಹೇಳುವಾಗ ಧರ್ಮ, ಜಾತಿಗಳ ಜೊತೆಗೆ ಬಣ್ಣವನ್ನೂ ಉಲ್ಲೇಖಿಸಿದೆ. ಆದರೆ, ಜಾಹೀರಾತುಗಳು ಬಿಳಿ ಮತ್ತು ಕಪ್ಪಿನ ನಡುವಿನ ಅಸಮಾನತೆ ತೋರುತ್ತಿರುವುದು ಸಂವಿಧಾನ ಬಾಹಿರವಲ್ಲವೆ?

ಹಿರಿತೆರೆ, ಕಿರುತೆರೆಗಳ ಮುಖ್ಯ ನಟನಟಿಯರೂ ಕೂಡ ಹೆಚ್ಚಿನ ಸಂದರ್ಭದಲ್ಲಿ ಬಿಳಿ ಬಣ್ಣದವರೇ ಆಗಿದ್ದಾರೆ!🧚🏻‍♀🧚🏻‍♂ ವಾರ್ತೆಗಳನ್ನು ಓದುವವರು, ನಿರೂಪಕರು ಇವರಲ್ಲಿಯೂ ಕೂಡ ಬಿಳಿ ಬಣ್ಣದವರೇ ಅಧಿಕ   ಮಾಧ್ಯಮದ ಈ ಪ್ರಭಾವವೂ ಇಂದು ಜನರಲ್ಲಿ ಕಪ್ಪಿನ 🌚ಬಗ್ಗೆ ತಾತ್ಸಾರ ಮೂಡಲು ಕಾರಣವಾಗಿದೆ. ಸ್ತ್ರೀಯರ ಸೌಂದರ್ಯ ಮೀಮಾಂಸೆಯಲ್ಲೂ ಬಿಳಿ👸🏻 ಬಣ್ಣಕ್ಕೆ ಪ್ರಾಶಸ್ತ್ಯ, ಕಪ್ಪು 👩🏿‍💼 ಬಿಳಿಯ 👩🏼‍💼ಹೋಲಿಕೆ, ದಕ್ಷಿಣ ಭಾರತ 👩🏽‍💼ಮತ್ತು ಉತ್ತರ ಭಾರತದ 👩🏻‍💼ಬಿಳಿಗಳ ಹೋಲಿಕೆ, ಭಾರತದ 👩🏻‍💼ಮತ್ತು ವಿದೇಶದ 👩🏼‍💼ಬಿಳಿಯ ಹೋಲಿಕೆ ಹೀಗೆ ಬಿಳಿಗಳ ವಿಭಾಗೀಕರಣ ಮುಂದುವರೆಯುತ್ತಲೇ ಹೋಗುತ್ತವೆ.

ಮಾಧ್ಯಮಗಳು ತನ್ನೊಳಗೆ ಹುದುಗಿಸಿರುವ ಬೆಳ್ಳಗಿರುವುದು ಮಾತ್ರ ಟಿ.ಆರ್.ಪಿ ತಂದುಕೊಡುತ್ತದೆ ಎನ್ನುವ ಸಿದ್ಧಾಂತವನ್ನು ತ್ಯಜಿಸಿ ಕಪ್ಪಿನ ಬಗೆಗೆ ತನ್ನ ನೈತಿಕ ನಿಲುವನ್ನು ಸ್ಪಷ್ಟಪಡಿಸಬೇಕು. ಕಪ್ಪು 🌚ಮತ್ತು ಬಿಳಿ🌝 ಬಣ್ಣದ ಸಮಾನ ಸ್ವೀಕಾರದ ಎಲ್ಲಾ ಸಾಧ್ಯತೆಗಳಿಗೆ ಮಾಧ್ಯಮ ಆಲೋಚಿಸಬೇಕು. ಬಣ್ಣಗಿಂತಲೂ ಕಲೆ, ಪ್ರತಿಭೆ, ಸಾಮರ್ಥ್ಯಗಳಿಗೆ ಬೆಲೆಕೊಡಬೇಕು. ಹೀಗಾದಾಗ ಮಾತ್ರ ದೇಶದ ಉದ್ದಗಲಕ್ಕೂ ಚಾಚಿರುವ ಬಣ್ಣ ತಾರತಮ್ಯ ತೊರೆಯಲು ಸಾಧ್ಯ.

ಈ ಅಂಕಣ ಬರೆಯುವಾಗ ಕವಿ ಸಿದ್ಧಯ್ಯ ಪುರಾಣಿಕರ “ಪೂರ್ವಾಂಗನೆ ಪಶ್ಚಿಮಾಂಗನೆಗೆ” ಎಂಬ ಕವಿತೆ ನೆನಪಾಯಿತು.

ನಾ ಕರಿಯಳೆಂದು ನೀ ಜರಿಯಬೇಡ ಬಿಳಿ ಗೆಳತಿ ಗರ್ವದಿಂದ
ಕಪ್ಪಿಗಿಂತ ಬಿಳಿ ಬಣ್ಣ ಹೆಚ್ಚು ಹೇಳು ಯಾವ ಹಿರಿಮೆಯಿಂದ
ಬಿಳಿಯ ಮೋಡ ನೀಡುವುದು ಇಳೆಗೆ ಬರಿ ಬೆಡಗು ಅಂದ ಚೆಂದ
ಇಳೆಯ ಜೀವ ಮಳೆ ಬರುವುದಕ್ಕ ಕರಿ ಮೋಡ ಮಾತ್ರದಿಂದ
ಓ ಪಶ್ಚಿಮಾಂಗನೆ ನಾ ಪೂರ್ವಾಂಗನೆ

ಕಣ್ಗೆ ನೋಟ ಕರಿಯಾಲಿಯಿಂದಲೆ, ಕುರುಡು ಬರಿಯ ಬಿಳುಪು
ಬಿಳಿಯ ಕೇಶಗಳೆ ಮುಪ್ಪು, ಯವೌನದ ವಿಜಯ ಧ್ವಜವು ಕಪ್ಪು
ಕಪ್ಪು ಭೂಮಿಯಲೆ ಬೆಳೆಯ ಬೇಕು ನೀ ತೊಟ್ಟ ನೂಲ ಬಿಳುಪು
ಬಿಳಿಯ ಮಂಜಿನಲಿ ಬೆಳೆಯಬಹುದೆ? ಬೆಳೆಯುವುದು ಎಲ್ಲ ಕಪ್ಪು

ಕರಿಯಳಾದರು ಉದಯ ನಾನು, ನೀನಿರುವೆ ಅಸ್ತಮಾನ
ನೀನೆ ತಾವರೆಯು, ನಾನೆ ನೈದಿಲೆಯು, ಒಂದೆ ಜಲ ವಿಧಾನ
ನೀ ಬಿಳಿಯ ಹಾಳೆ, ನಾ ಕಪ್ಪು ಮಸಿಯು, ಆಗೋಣ ಪ್ರೇಮ ಕವನ
ದೇಹಕ್ಕೆ ಬಣ್ಣ, ದೇಶಕ್ಕೆ ಬಣ್ಣ, ಆತ್ಮಕ್ಕೆ ಯಾವ ಬಣ್ಣ?
ಓ ಪಶ್ಚಿಮಾಂಗನೆ ನಾ ಪೂರ್ವಾಂಗನೆ

ಕಪಿಲೆ ನಾನು ನನ್ನ ಕೆಚ್ಚಲ್ಲಲ್ಲಿ ಬಿಳಿ ಹಾಲಾಗಿ ಬಾರೆ
ಮೃಗವು ನೀನು ನಿನ್ನ ನಾಭಿಯಲ್ಲಿ ಕಸ್ತೂರಿಯಪ್ಪೆ ಬಾರೆ
ನೀಲ ಮೇಘ ನಾ, ನನ್ನ ಉದರದಿ ಮಿಂಚಿ ನೀನು ತೋರೆ
ನೀಲ ಭೃಂಗ ನಾ, ಶ್ವೇತ ಪದ್ಮ ನಿನ್ನೆದೆಯ ನಗುವ ಹೀರೆ

ಈ ವರ್ಣ ಮೈತ್ರಿ ಅನಿವಾರ್ಯ ಗೆಳತಿ ಸರ್ವತ್ರ ವಿಶ್ವ ಪ್ರಕೃತಿ
ತೋರುವುದು ಇದನೆ, ಸಾರುವುದು ಇದನೆ, ಇದೆ ನೋಡು ಅದರ ನೀತಿ
ಹೊತ್ತಾರೆ ಕೆಂಪು, ಮತ್ತಷ್ಟು ಹಳದಿ, ಹೊತ್ತೇರೆ ಬಿಳುಪು ಗೆಳತಿ
ನಿನ್ನಂದ ಬಿಳುಪು, ಇದೊ ನೆರಳು ಕಪ್ಪು, ಎಲ್ಲಿಹುದು ವೈರ ಗೆಳತಿ?
ಓ ಪಶ್ಚಿಮಾಂಗನೆ ನಾ ಪೂರ್ವಾಂಗನೆ

ಯೋಗೀಶ್ ಮಲ್ಲಿಗೆಮಾಡು

Monday, 29 January 2018

ಯುಸ್ ಆ್ಯಂಡ್ ತ್ರೋ ಮತ್ತು ಕಸದಿಂದ ರಸ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 13

ಅದೊಂದು ಕಾಲವಿತ್ತು ಬಾಲ್ ಪೆನ್ ಎಂಬ ಲೇಖನಿಗಳಿಗೆ ರೀಫಿಲ್ಲುಗಳು ಸಿಗುತ್ತಿದ್ದವು. ಪೆನ್ ಜೊತೆಗೊಂದು ಭಾವನಾತ್ಮಕ ಬಾಂಧವ್ಯ ಬೆಳೆದಿರುತ್ತಿತ್ತು. ಆಮೇಲೆ ವಿದೇಶಗಳಿಂದ ಊರಿಗೆ ಬರುವ ಅಣ್ಣಂದಿರು ತಂದ ಬರೆದು ಎಸೆಯುವ ಪೆನ್ನುಗಳನ್ನು ಕಂಡು ಆಶ್ಚರ್ಯಪಟ್ಟವರೆಷ್ಟೊ. ಕಾಲಕ್ರಮೇಣ ಯುಸ್ ಆ್ಯಂಡ್ ತ್ರೋ ಪೆನ್ನುಗಳು ನಮ್ಮ ದೇಶದ ಹಳ್ಳಿಗೂ ಬಂದವು. ಬರೆದೆಸೆಯುವ ಪೆನ್ನಿನ ಬಗೆಗೊಂದು ಅಚ್ಚರಿ. ಇಂದು ರೀಫಿಲ್ಲಿನ ಅಗತ್ಯವೇ ಇಲ್ಲ. ಬರೆದೆಸೆಯುವ ಪೆನ್ನುಗಳೇ ಆರಾಮಾಗಿದೆ.

ಇವತ್ತು, ಯುಸ್ ಆ್ಯಂಡ್ ತ್ರೋ ಬರೀ ಪೆನ್ನಿಗೆ ಸೀಮಿತವಲ್ಲ. ಚೈನಾ ವಸ್ತುಗಳು ಹೆಚ್ಚಾಗಿ ಯುಸ್ ಆ್ಯಂಡ್ ತ್ರೋ ಸಿದ್ಧಾಂತದಲ್ಲೇ ತಯಾರಾಗುತ್ತವೆ. ವ್ಯಾಪಾರಿಕರಣದಲ್ಲಿ ಲಾಭದಾಯಕ ಈ ಯುಸ್ ಆ್ಯಂಡ್ ತ್ರೋ. ಜನರು ಇಂದು ಈ ಪರಿಕಲ್ಪನೆಯ ವಸ್ತುಗಳನ್ನೇ ನೆಚ್ಚುತ್ತಾರೆ. ದೀರ್ಘ ಬಾಳಿಕೆಯ ಒಂದು ವಸ್ತುವಿಗಿಂತ ಕಡಿಮೆ ದರದ ಕಡಿಮೆ ಬಾಳಿಕೆಯ ವಸ್ತುವಾದರೆ ಯುಸ್ ಮಾಡಿ ಎಸೆದರೆ ನಂತರ ಹೊಸ ಮಾಡೆಲ್ ಗಳು ಸಿಗುತ್ತವೆ. ಆದರೆ ಕಳೆದ ಶತಮಾನದಲ್ಲಿ ಜನ ಹೆಚ್ಚು ಹೆಚ್ಟು ವಸ್ತುಗಳೊಂದಿಗೆ ಭಾವನಾತ್ಮಕ ನಂಟು ಬೆಸೆದುಕೊಂಡಿದ್ದರು. ಈಗಲೂ ಸಹ ನಮ್ಮ ಮನೆಯ ಹಳೆಯ ರೇಡಿಯೊ, ಟಿವಿಗಳು ನೆನಪಿನ ಪುಟದಲ್ಲಿ ದಾಖಲಿದೆ. ಅವುಗಳನ್ನು ನೆನೆದಾಗ ಯಾವುದೋ ಹಳೆಯ ನೆನಪು ಮೀಟೀದಂತೆ. ಮೊನ್ನೆ ಬದಲಾಯಿಸಿದ ಮೊಬೈಲ್ ಫೋನಿನ ಚಿತ್ರ ಕಣ್ಣಮುಂದೆ ಬರುವುದಿಲ್ಲ. ಈಗಿನ ವಸ್ತುಗಳು ಭಾವನಾತ್ಮಕವಲ್ಲ ಎನ್ನುವುದಕ್ಕೆ ಒಂದು ಉದಾಹರಣೆ ಕೊಟ್ಟೆಯಷ್ಟೆ.

ಇಂದು ವಸ್ತುಗಳಷ್ಟೇ ಯುಸ್ ಆ್ಯಂಡ್ ತ್ರೋ ಅಲ್ಲ. ಮನುಷ್ಯರೂ ಕೂಡ ಯುಸ್ ಆ್ಯಂಡ್ ತ್ರೋ ಆಗಿರುವುದು ವಿಷಾದನೀಯ. ಆದರೆ, ನಮ್ಮಮ್ಮನ ಕಾಲದ ಸಿದ್ಧಾಂತಗಳು ಯುಸ್ ಆ್ಯಂಡ್ ತ್ರೋಗಿಂತಲೂ ಭಿನ್ನವಾಗಿದ್ದವು. ಯಾವ ಹೊಸ ವಸ್ತು ಬಂದರೂ ನಮ್ಮಮ್ಮನವರು ಅದು ಉಪಯೋಗಿಸಿದ ಮೇಲೆ ಬೇರೆ ಏನಕ್ಕೆ ಬಳಸಬಹುದು ಎಂದು ಅಂದಾಜಿಸುತ್ತಿದ್ದರು. ಬಾಟಲಿಗಳು ಉಪಯೋಗಿಸಿದ ಮೇಲೆ ಎಣ್ಣೆ ಹಾಕಿಡುವ ಶೀಶೆಗಳಾಗುತ್ತಿದ್ದವು. ಹರಿದ, ಮಡಿಕೆ ಕಟ್ಟಿದ ಸೀರೆಗಳು ಕೌದಿಯಾಗುತ್ತಿದ್ದವು, ಅಪ್ಪನ ಹರಿದ ಪ್ಯಾಂಟು ಕೈ ಚೀಲವಾಗುತ್ತಿತ್ತು. ಹೀಗೆ ಕಸದಿಂದ ರಸ ಮಾಡುವ ಕಲೆ, ಯುಸ್ ಆ್ಯಂಡ್ ತ್ರೋಗಿಂತಲೂ ಭಿನ್ನವಾದ ಸಿದ್ಧಾಂತ.

ಕಾಲೊರೆಸು, ಕೈಬಟ್ಟೆ ಮುಂತಾದವುಗಳಿಗೆ ಹಳೆಯ ವಸ್ತ್ರಗಳನ್ನೇ ಉಪಯೋಗಿಸುತ್ತಿದ್ದದ್ದು ವಾಡಿಕೆ ಆದರೆ ಇಂದು ಮಾಲುಗಳಲ್ಲಿ ಅದಕ್ಕೆಂದೇ ತರಹೇವಾರಿ ಮಕಮಲ್ಲು ಬಟ್ಟೆಗಳ ಸಂಗ್ರಹವೇ ಇದೆ! ಇದನ್ನೇ ಶತಾವಧಾನಿ ಡಾ. ಆರ್ ಗಣೇಶ್ ಹೀಗೆ ಹೇಳುತ್ತಾರೆ "ಇತ್ತೀಚಿಗೆ ಪೇಟೆಬೀದಿಗಳಲ್ಲಿ ಮನೆಯ ಅಂಗಳ ಗುಡಿಸಲಿಕ್ಕೆ, ಮನೆಯ ನೆಲವನ್ನು ಒರೆಸಲಿಕ್ಕೆ ಪ್ರತ್ಯೇಕವಾಗಿ ತಯಾರಾದ ಪೊರಕೆಗಳನ್ನೂ ಒರಸುಬಟ್ಟೆಗಳನ್ನೂ ಗಮನಿಸಿದಾಗ ಬೆರಗೂ ವಿಷಾದವೂ ಉಂಟಾದವು. ಈಗಲೂ ನಮ್ಮ ಮನೆಯಲ್ಲಿ ಮನೆಯೊಳಗೆ ಬಳಸುವ ಪೊರಕೆ ಸವೆದು ಹಳತಾದಾಗ ಅದನ್ನು ಅಂಗಳ-ಬಚ್ಚಲು-ಹಿತ್ತಲುಗಳ ಕೆಲಸಕ್ಕೆ ಮೀಸಲಿಡುತ್ತೇವೆ;ಹತ್ತಿಯ ಬಟ್ಟೆಗಳು ಹಳತಾಗಿ ಹರಿದಾಗ ಮನೆಯ ನೆಲವನ್ನೊರೆಸಲು ಬಳಸುತ್ತೇವೆ. ಇಂಥ ಪರಿಪಾಟ ಇಂದಿಗೂ ಮತ್ತೆಷ್ಟೋ ಮನೆಗಳಲ್ಲಿ ಇರುವಂಥದ್ದೇ ಆಗಿದೆ. ಈ ಬಗೆಯ ವ್ಯವಸ್ಥೆಯು 'ನವಶಿಷ್ಟ'ರಿಗೂ (ಮಾಡ್) 'ಭದ್ರಲೋಕ'ದವರಿಗೂ (ಎಲೀಟ್) ಸ್ವಲ್ಪಮಟ್ಟಿಗೆ ಜುಗುಪ್ಸವಾಗಿ, ಅಸುಂದರವಾಗಿ ತೋರಬಹುದು. ಆದರೆ ಈ ತತ್ವವು ಬರಿಯ ಬಡತನ ಅಥವಾ ಮಿತವ್ಯಯದ ಪರಿಣಾಮವಲ್ಲ; ಇದರ ಹಿಂದೆ ಗಾಢವಾದ ಪ್ರಸುಪ್ತ
ಪ್ರಕೃತಿಸಂತುಲನವಿವೇಕವಿದೆ. ಊರ್ಜಾನಿರ್ವಾಹದ (ಎನರ್ಜಿಮ್ಯಾನೇಜ್ ಮೆಂಟ್) ಪ್ರಣಾಲಿಯಿದೆಯೆಂಬುದನ್ನು ಬಹುಜನ ತಿಳಿದಿಲ್ಲ."

ಹೀಗೆ ಹೇಳುವಾಗ ಅವರು ನಮ್ಮ ಹಿರಿಯರ ಮಿತ ಬಳಕೆ, ಉಪಯೋಗಿತ ವಸ್ತುಗಳ ಮರುಬಳಕೆ ಮುಂತಾದವು ಪ್ರಕೃತಿಸಂತುಲನವಿವೇಕ ಎಂದು ಹೇಳುತ್ತಾರೆ. ನಾವಿಂದು ಅದನ್ನು ಸುಸ್ಥಿರ ಅಭಿವೃದ್ಧಿ ಎಂದೆನ್ನುತ್ತೇವೆ. ನಾವು ನಮಗೆಷ್ಟು ಬೇಕೊ ಅಷ್ಟೇ ಉಪಯೋಗಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಡುವುದೇ ಸುಸ್ಥಿರ ಅಭಿವೃದ್ಧಿ . ಯುಸ್ ಆ್ಯಂಡ್ ತ್ರೋ ಕಲ್ಪನೆಯಲ್ಲಿ ಮಾಲಿನ ಕೊಳ್ಳುಬಾಕತನ ನಮ್ಮ ಬೇಕು ಬೇಡಗಳ ವಿವೇಚನೆಯ ಆಚೆಗೆ ಖರೀದಿ ಮಾಡಿಸುತ್ತವೆ. ಇದು ಸಲ್ಲದು. ನಮಗೆಷ್ಟು ಬೇಕು ಅಷ್ಟನ್ನೇ ಕೊಂಡು ಅದರ ಮರು ಬಳಕೆ, ಪುನರ್ ಬಳಕೆಗಳ ಮೂಲಕ ಕಸದಿಂದ ರಸ ಮಾಡುವ ಸಿದ್ಧಾಂತಕ್ಕೆ ಮರಳೋಣ, ಯುಸ್ ಆ್ಯಂಡ್ ತ್ರೋಗಲ್ಲ.

ಈ ಪುಟ್ಟ ಕಥೆಯೊಂದು ನೆನಪಾಯಿತು:
ಶಿಷ್ಯ ಗುರುವಿನ ಬಳಿಬಂದು ತನ್ನ ಪಂಚೆ ಹಳೆಯದಾಗಿರುವುದಾಗಿ ಹೊಸ ಪಂಚೆಗಾಗಿ ಬೇಡಿಕೆಯಿಟ್ಟನು. ಗುರು ಹೊಸ ಪಂಚೆ ಕೊಡಿಸಿದರು. ಅದಾದಮೇಲೆ ಗುರು ಶಿಷ್ಯನ ಕೋಣೆಗೆ ಬಂದು ಹಳೆಯ ಪಂಚೆ ಏನು ಮಾಡಿದೆ ಎಂದು ಕೇಳಿದರು. ಶಿಷ್ಯ ತನ್ನ ಕಿಟಕಿಯ ಪರದೆಯು ಹರಿದು ಹೋಗಿದ್ದರಿಂದ ಹಳೆಯ ಪಂಚೆಯನ್ನು ಕಿಟಕಿ ಪರದೆ ಮಾಡಿದೆನೆಂದು ಹೇಳಿದನು. ಗುರು ಹರಿದ ಪರದೆ ಏನು ಮಾಡಿದೆ ಎಂದು ಕೇಳಲು ತಾನು ಅದನ್ನು ಕಾಲೊರೆಸಾಗಿ ಉಪಯೋಗಿಸುತ್ತಿರುವುದಾಗಿ ಹೇಳಿದನು ಶಿಷ್ಯ. ಹಾಗಿದ್ದರೆ ಮೊದಲಿನ ಕಾಲೊರೆಸು ಎಲ್ಲಿದೆ ಎಂದು ಗುರು ಕೇಳಲು ಶಿಷ್ಯನು ಕಾಲೊರೆಸು ಹಾಳಗಿದ್ದರಿಂದ ಅದನ್ನು ಕೈ ಬಟ್ಟೆ ಮಾಡಿರುವುದಾಗಿ ತಿಳಿಸಿದನು. ಗುರು ಅಲ್ಲಿಗೆ ಸುಮ್ಮನಾಗದೆ ಮೊದಲಿದ್ದ ಕೈ ಬಟ್ಟೆ ಎಲ್ಲಿ ಎಂದು ಕೇಳಲು ಶಿಷ್ಯ ಅವುಗಳನ್ನು ಹೊಸೆದು ದೀಪದ ಬತ್ತಿ ಮಾಡಿರುವುದಾಗಿ ಹೇಳಿದನು.

ಹೀಗೆ ವಸ್ತು ಮತ್ತು ಮಾನವರಲ್ಲಿ ಮರುಬಳಕೆಗೆ ಮಹತ್ವಕೊಡೋಣ, ಯುಸ್ ಆ್ಯಂಡ್ ತ್ರೋಗಲ್ಲ.

ಯೋಗೀಶ್ ಮಲ್ಲಿಗೆಮಾಡು

Sunday, 28 January 2018

ಮಾಘಿಯ ಚಳಿಗೆ ಕಟಕಟಿಸಿತು ಹಲ್ಲು

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-12

ಶಿಶಿರ ಋತುವಿನ ಮಾಘ ಮಾಸ ಎಂಬುವುದೇ ಒಂದು ಸೊಗಸಾದ ಮಾಸ. ಚಳಿಗಾಲವೇ ⛄ ಮೈತೆಳೆದು ಬರುವ ಈ ಮಾಸದಲ್ಲಿ ಸೂರ್ಯನೂ 🌞ಸುಡು ಸುಡು ಎನ್ನದೆ ಸಹಜ ಶಾಂತನಾಗಿ ಹವೆಗೊಂದು ಆಪ್ಯಾಯತೆಯನ್ನೀಯುತ್ತಾನೆ.

ಮುಂಜಾವುಗಳೆಲ್ಲಾ 🌄ತಂಪಾಗಿ ಹೊದೆದ ಕಂಬಳಿಯನ್ನು ಮತ್ತಷ್ಟು ಹೊದ್ದು ಮಲಗುವುದೊಂದು ಸೊಗಸು. ಹೊರಗೆ ಬೆಳ್ಳಗೆ ಬಿಚ್ಚುವ ಬೆಳಕಿನಲ್ಲಿ 🌅ತಂಪಿಟ್ಟು ಬೀಸುವ ಗಾಳಿ. ಗಾನವೇ ಹೊಮ್ಮಿಸದ ಕೋಗಿಲೆಗಳ🐦 ಕಂಠದಲ್ಲಿ ಗಾಢ ಮೌನ. ಹಾಡಲು ದನಿ ಹೊರಡಿಸುವ ಕೋಗಿಲೆಗಳಿಗೂ ಹಲ್ಲುಗಳು ಕಟಕಟಿಸಿತೆ!!?

ಎಲೆಯುದುರಿದ 🍃ಮರಗಳ ಗೆಲ್ಲು ಗೆಲ್ಲುಗಳಲ್ಲೂ ವಿರಳ ಪತ್ರಗಳು 🌿. ಆ ವಿರಳವಾದ ಎಲೆಗಳೂ ಕೂಡ ಹಣ್ಣಾಗಿವೆ🍂 ಇಂದಲ್ಲ ನಾಳೆ ಈ ಮಾಘದಲ್ಲೇ ಬಿದ್ದು ಹೋಗುತ್ತವೆ ಅವು.  ಗೆಲ್ಲಿನ ಹೊಸ ಚಿಗುರುಗಳು🎋 ಬರುವ ವಸಂತನ ಕಾತರದಲ್ಲಿದೆ, ಕೋಗಿಲೆಯೂ🐦 ಕೂಡ! ಬೋಳು ಮರದ ತುಂಬಾ ಚೈತ್ರಾಗಮನದ ಶುಭ ನಿರೀಕ್ಷೆ.

ಬಾಗಿಲುಗಳನ್ನೊ 🚪, ಕಿಟಕಿಗಳನ್ನೊ 🖼ತೆರೆಯುತ್ತಿದ್ದಂತೆ ಜುಮ್ಮ್ ಎಂದು ಬೀಸಿ ಬರುವ ಚಳಿಗಾಳಿಗೆ ಮೈ ನಡುಗುತ್ತದೆ. ಚಳಿ ಹಾಗೆ ಮೈಯ ಚರ್ಮಗದೊಳಗಿನ ಎಲುಬಿಗೇ ತಾಕಿ ಮೈಯನ್ನೇ ಅದರಿಸಿ ಬಿಡುತ್ತದೆ. ಅಲ್ಲೆಲ್ಲೋ ಸಂಪಿಗೆಯ, ಪಾರಿಜಾತದ ಮರದ ಗೆಲ್ಲಿನ 🌳ಮೇಲಿಂದ ರೆಕ್ಕೆ ಬಡಿದು, ಸಿಳ್ಳು ಹೊಡೆದು ಹಾರಿ ಹೋಗುವ ಪಿಕಳಾರಗಳಿಗೆ🐤 ಈ ಚಳಿಯಲ್ಲೂ ಅದೆಂತಹುದೊ ಉತ್ಸಾಹ.

ಇಂತಹ ಚಳಿಗಾಲದ⛄ ಮುಂಜಾವಿಗೇ🌄 ಅಲ್ಲವೆ ಹಬೆಯಾಡುವ ಬಿಸಿ ಬಿಸಿ ಚಹ ಕಾಫಿಗಳ☕ ಘಮ ಮತ್ತಷ್ಟು ಅಮೋಘವೆನಿಸುವುದು. ಗುಟುಕು ಗುಟುಕಾಗಿ ಚಹ ಹೀರುತ್ತಾ ತಾಜ ಸುದ್ದಿಗಳ ದಿನಪತ್ರಿಕೆಯ📃 ಪುಟ ತಿರುವುತ್ತಿರುವಾಗಲೇ ಅಲ್ಲಿ ಚಳಿಯನ್ನು ಬಿಚ್ಚುತ್ತಾ ಸೂರ್ಯ☀ ಮಲೆಯೇರುತ್ತಾನೆ.

ಬಿಸಿ ನೀರೇ ಥಂಡಿ ಎಂದಾದ ಮೇಲೆ ತಣ್ಣೀರು ಎಂದರೆ ಮಾರು ದೂರ🚿🛀🏻. ಅದೊಂದು ಬಲವಂತದ ಮಾಘ ಸ್ನಾನ!! ಮಾತನಾಡಲು ಬಾಯ್ದೆರೆದರೆ ಒಳಗಿನ ಶೀತ ಹೊಗೆಯಾಗಿ ಹೊಮ್ಮುತ್ತದೆ. ಹಲ್ಲು ಕಟಕಟಿಸುತ್ತದೆ. ಮೈ ನಡುಗಿ ಚಳಿ ದೇಹದೊಳಗಿನ ರಕ್ತ ಹೆಪ್ಪುಗಟ್ಟಿಸುತ್ತದೆ, ನರ ಬಿಗಿಯಾಗಿ ಎಲುಬುಗಳು ಜುಮ್ಮ್ ಎನ್ನುತ್ತವೆ.

ದಿನವಿಡೀ ಶೀತ ಶೀತದ ಗಾಳಿ ಮಂಜಿನೊಡನೆ ಸಂಜೆಗಳು ಮತ್ತೆ ಹಾಜರಾಗುತ್ತವೆ ಥಂಡೀ ರಾತ್ರಿಗಳ ಹೊತ್ತು 🎇🌌 ಸಹಜ ಸಂಜೆಗೆ ಬೇಸಗೆಯಂತೆ ಇಡ್ಲಿ ಬೇಯುವಂತಹ ಬಿಸಿ ಹಬೆಯ ಧಗೆಯಿಲ್ಲ. ಇಲ್ಲೇನಿದ್ದರೂ ಶೀತಕದ (Refrigerator) ಒಳಗಿಟ್ಟ ತಾಜಾ ಹಣ್ಣಿನಂತೆ ತಂಪು ತಂಪು ಕೂಲ್ ಕೂಲ್.

ಚಂದ್ರ 🌝ಸುರಿಸುವ ಹಾಲಿನಂತಹ ಬೆಳ್ದಿಂಗಳಲಿ ತಣ್ಣಗಿನ ರಾತ್ರಿಗಳು 🌠 ನೀರವ ರಾತ್ರಿಯ ಬೀದಿ ದೀಪಗಳ ಬೆಂಕಿ ಬೆಳಕಿನ ಹೊಳಪಿನಲ್ಲಿ ಹೊಗೆ ಮಬ್ಬು. ಹೊರಗಿನ ಚಳಿಗೆ ಮನೆಯೊಳಗಿನ ಕತ್ತಲ ಕೋಣೆಯಲ್ಲಿ ಬೆಚ್ಚಗಿನ ನಿದಿರೆ. ಹೊದ್ದ ಕಂಬಳಿಯ ಮತ್ತಷ್ಟು ಗಾಢವಾಗಿ ಸುತ್ತಿ ನಿದ್ರೆ ಹೋದರೆ ಮತ್ತೆ ಎಚ್ಚರಾಗುವಾಗ ಹೊರಗೆ ಮಂಜು ಮುಸುಕಿದ ಹಿಮ ಹಿಮದ ಮುಂಜಾವು.

ಇಂದಿನ ಮಾಘಿಗೆ ಅಂತಹ ಚಳಿಯಿಲ್ಲದಿರಬಹುದು ಅದಕ್ಕೂ ಮಿಗಿಲಾಗಿ ಮಂಗಳೂರಿಗಂತು ಚಳಿಯ ಆಸ್ವಾದವೇ ವಿರಳವಾಗಿದೆ. ಜಾಗತಿಕ ತಾಪಮಾನ, ಕಾಡಿನ ನಾಶ, ಕಾಂಕ್ರೀಟ್ ರೋಡುಗಳು, ಗಾಜಿನ ಬಿಲ್ಡೀಂಗುಗಳು ಮುಂತಾದವು ಚಳಿಗಾಲವನ್ನು ಬೇಸಗೆ ಮಾಡಿದೆ. ಆದರೂ ಇರುವ ಸ್ವಲ್ಪ ಚಳಿಯ ಮಾಘ ಮಾಸದಲ್ಲಿ ಇದೆಲ್ಲವೂ ನೆನಪಾದವು, ನೀವು ಸಹ ಮಾಘ ಮಾಸದ ಘಳಿಗೆಯಲ್ಲಿ ಇರುವ ಕೊಂಚ ಚಳಿಯನ್ನಾದರೂ ಆಸ್ವಾದಿಸಿ.

ಯೋಗೀಶ್ ಮಲ್ಲಿಗೆಮಾಡು

Saturday, 27 January 2018

ನಾವಿಲ್ಲದೆ ಜೇನು ನೊಣ ಬದುಕಬಹುದು ಆದರೆ ಜೇನು ನೊಣವಿಲ್ಲದೆ ನಾವು?

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-11

ಯುಗಯುಗಾಂತರದಿಂದ🌍 ಮಾನವ ಪ್ರಕೃತಿಯ ☄ಮೇಲಿನ ಹಿಡಿತಕ್ಕಾಗಿ ಪ್ರಯತ್ನ ಪಡುತ್ತಲೇ ಇದ್ದಾನೆ. ಪ್ರಕೃತಿಯ ಗುಡುಗು, ಸಿಡಿಲು ⚡ ಮಳೆಯ ☔ವೈಚಿತ್ರ್ಯಕ್ಕೆ ಬೆಚ್ಚಿಬಿದ್ದ ಕಾಡುಮಾನವನಿಂದ ಹಿಡಿದು ಇಂದು ಬೇಕಾದಾಗ ಮಳೆ ಸುರಿಸುವ ಮೋಡಬಿತ್ತನೆ🌨 ತನಕ ಬೆಳೆದ ನವಯುಗದ ಮಾನವ ಸಾಮರ್ಥ್ಯವನ್ನು ಸಾಧಿಸಿದ್ದಾನೆ.

ನೂತನ ತಂತ್ರಜ್ಞಾನ 🔭, ಹೊಸ ಆವಿಷ್ಕಾರಗಳು 🖥ಮಾನವನ ಮನೋಬಲದ 🧠ಯಶೋಗಾಥೆ. ಆತನ ಸಮಬಲ 💪🏼ಯಾರಿಲ್ಲ ಎಂಬ ಮನೋಸ್ಥೈರ್ಯಗಳು ತಾನೇ ಸರ್ವ ಶ್ರೇಷ್ಠ ಎಂದು ಮಾಡಿದೆ. ಆದರೆ ನಮ್ಮ ಸಾಮರ್ಥ್ಯ ಈ ವಿಶ್ವದಲ್ಲಿ ಬೇರೆ ಜೀವಿಗಳಿಗಿಂತ ಎಷ್ಟು ಹೆಚ್ಚು?

ಇಡೀ ಜೀವಸಂಕುಲ ಬದುಕುಳಿಯುವ ಕ್ರಿಯೆಯಲ್ಲಿ ಜೇನು ನೊಣಗಳ 🐝ಪಾತ್ರ ಹಿರಿದು. ಆದರೆ ಆಗಸವನ್ನೇ ಭೇದಿಸಿದ, ಕಡಲನ್ನೇ ಸೀಳಿದ ಮಾನವನ ಎದುರು ಆ ಪುಟ್ಟ ಜೀವಿ ಯಾವ ಲೆಕ್ಕ ? ಆದರೂ ನಾವಿಲ್ಲದೆ ಆ ಜೀವಿ 🐝ಸೊಗಸಾಗಿ ಬದುಕಬಹುದು ಆದರೆ ಜೇನು ನೊಣಗಳು🐝 ಇಲ್ಲದೇ ನಾವು ಬದುಕಲು ಸಾಧ್ಯವೆ?

ಐನ್ ಸ್ಟೀನ್ ಎಂಬ ಮಹಾವಿಜ್ಞಾನಿ ಹೇಳಿರುವಂತೆ " ಒಂದು ವೇಳೆ ಈ ಜೇನುನೊಣಗಳು🐝 ಈ ಭೂಮಿಯಿಂದ ಮಾಯವಾದರೆ ಮಾನವರು🚶🏽‍♀🚶🏻‍♂ ಬರೀ ನಾಲ್ಕುವರ್ಷದಲ್ಲಿ ನಾಶ ಹೊಂದುತ್ತಾರೆ ಎಂದು.

ಪರಾಗ ಸ್ಪರ್ಶ 🐝🌸ಎಂಬ ಕ್ರಿಯೆಯನ್ನು ಮಾಡಿ ಹೂ ಕಾಯಿ ಕಟ್ಟುವಂತೆ ಮಾಡಿ ನಿರಂತರ ಹೊಸ ಬೀಜಗಳ ಸೃಷ್ಟಿಗೆ ಕಾರಣವಾಗುವ ಆ ಮೂಲಕ ಪ್ರಕೃತಿಯ ಮುಂದುವರಿಕೆಗೆ ಸಹಕರಿಸುವ ಜೇನು ನೊಣಗಳ ಬದುಕು ಸೋಜಿಗ. ಹೀಗೆ ಈ ಪ್ರಕೃತಿಯಲ್ಲಿ ಮನುಷ್ಯನನ್ನು ಬಿಟ್ಟು ಬೇರೆಲ್ಲಾ ಜೀವಿಯೂ ಮತ್ತೊಂದು ಜೀವಿಯ ಆಧಾರವಾಗಿದೆ ಆದರೆ ಮನುಷ್ಯನೊಬ್ಬನೆ ಇಲ್ಲಿ ಬೇರಾವ ಜೀವಿಗೂ ಆಧಾರವಲ್ಲ. ಹಾಗಾಗಿ ಈ ಭೂಮಿಯಿಂದ 🌏ಮಾನವ ಹೋದರೆ ಬೇರಾವ ಜೀವಿಗೂ ವ್ಯತ್ಯಾಸವಾಗಲಾರದು. ಆದರೆ ನಮ್ಮ ಆಧಾರವಾಗಿರುವ ಇರುವೆ 🐜, ಚಿಟ್ಟೆ 🦋, ಜೇನು🐝, ಮೀನು 🐠ಹಾವು 🐍 ದನ 🐄ಗಿಡ 🌱 ಮರ 🌳 ಇವೆ ಮುಂತಾದ ಹಲವು ಪ್ರಾಣಿ ಪಕ್ಷಿ, ಸಸ್ಯ ವರ್ಗಗಳು ಮಾಯವಾದರೆ ನಮಗೆ ಬದುಕುವುದೇ ಕಷ್ಟ.

ಮಾನವ ಅದೆಂತಹುದೇ ಸಾಧನೆಗಳನ್ನು ಮಾಡಿದರೂ ಅನ್ಯ ಜೀವಿಗಳ ಆಧಾರವಿಲ್ಲದೆ ಬದುಕು ಅಸಾಧ್ಯ ಎಂದ ಮೇಲೆ ನಮ್ಮ ಬೀಗುವಿಕೆ, ದರ್ಪಗಳಿಗೆ ಯಾವ ಅರ್ಥವೂ ಇಲ್ಲ. ನಾವು ಇಲ್ಲಿ ಯಾವ ಜೀವಿಯನ್ನೂ ಆಳಲು ಬಂದವರಲ್ಲ ಬದಲಾಗಿ ಅವುಗಳೊಂದಿಗೆ ಸಹಬಾಳ್ವೆ ಮಾಡುವುದಕ್ಕಾಗಿ ಬಂದಿದ್ದೇವೆ.

ಪ್ರೀತಿಯ 💞ಬಗ್ಗೆ ಪುಟಗಟ್ಟಲೆ ವ್ಯಾಖ್ಯಾನ ಕೊಡುವ, ಚಲನಚಿತ್ರಗಳನ್ನು ಮಾಡುವ ಮಾನವ ತಿಳಿಯದೇ ಉಳಿದದ್ದು ಏನಂದರೆ ಪ್ರೀತಿಯೆಂದರೆ ಪಡೆದುಕೊಳ್ಳುವುದಲ್ಲ, ಅಗಾಧವಾಗಿ ಮತ್ತೊಬ್ಬರಿಗೆ ಅಪೇಕ್ಷೆಯಿಲ್ಲದೆ ಕೊಡುವಂತದ್ದು. ಪ್ರಕೃತಿಯ ಎಲ್ಲಾ ಜೀವಿಗಳು ಸದ್ದಿಲ್ಲದೆ ನಿರಂತರವಾಗಿ ಇದನ್ನು ಮಾಡುತ್ತಿದೆ. ನಾವು??

ದೂರ ಬಾನ ಅಂಚಿನಿಂದ
ಮಳೆಯ ಮೋಡ ತೇಲಿ ಬಂದು
ಊರ ತುಂಬ ಹನಿದು ಸುರಿಯೆ
ಅದುವೆ ಪ್ರೀತಿಯು

ಸುರಿದ ಮಳೆಯ ಹನಿಯ ಹೀರಿ
ಭುವಿಯ ಒಡಲ ಬೀಜ ತಾನು
ಒಡೆದು ಮೇಲೆ ಬಂದು ನಗಲು
ಅದುವೆ ಪ್ರೀತಿಯು

ಬಳ್ಳಿಯಾಗಿ ಹಂಬಿ ಹಬ್ಬಿ
ಬೇರು ಆಳಕಿಳಿಸಿಕೊಂಡು
ಮಣ್ಣ ಸತುವ ಹೀರಿ ಬೆಳೆದು
ಅದುವೆ ಪ್ರೀತಿಯು

ಸಾವಿರಾರು ಮೈಲಿನಿಂದ
ಹರಿದು ಬರುವ ರವಿಯ ಕಿರಣ
ಎಲೆಯ ಹಸಿರು ಮಾಡಿಯಾಡಿ
ಅದುವೆ ಪ್ರೀತಿಯು

ಹೂವು ಅರಳಿ ಚಿಟ್ಟೆ ಬರಲು
ಮಧುವ ಹೀರಿ ರಮಿಸುತಿರಲು
ಪರಾಗವಾಗಿ ಕಾಯಿಬಿಡಲು
ಅದುವೆ ಪ್ರೀತಿಯು

ಕಾಯಿ ಬಲಿತು ಬೆಳೆದು ನಿಲ್ಲಲು
ಮನುಜ ಕಿತ್ತು ತಿನ್ನಲು ಅದನು
ಎಸೆದ ಬೀಜ ಮತ್ತೆ
ಭುವಿಯ ಮಣ್ಣ ಸೇರಿತು

ತಾನು ತನ್ನದು ಎನುವ ಮನುಜ
ತನ್ನದಷ್ಟೆ ನೋಡೊ ಮನುಜ
ತನ್ನ ತಾನೆ ಕೇಳ ಬೇಕು
ಪ್ರೀತಿ ಯಾವುದು?

             ಯೋಗೀಶ್ ಮಲ್ಲಿಗೆಮಾಡು