Sunday, 11 February 2018

ತುಳುನಾಡಿನ ಸಿರಿ ಬದುಕು ಭಾಗ-1

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ-26

ಇಂದು ಕೆಡ್ಡಸವಾದುದರಿಂದ ತುಳುನಾಡಿನ ಬಗ್ಗೆ ಒಂದು ಸಂಕ್ಷಿಪ್ತ ಅಂಕಣ

ಕರ್ನಾಟಕ 🌼ಮತ್ತು ಕೇರಳದ🌴 ಕರಾವಳಿ 🌊 ಪ್ರದೇಶಗಳನ್ನೊಳಗೊಂಡ ಒಂದು ಭೂಭಾಗವೇ ತುಳುನಾಡು 🌍. ವಿಶೇಷವಾಗಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡುಗಳನ್ನು ತನ್ನ ಸೀಮೆಯಾಗಿ ಹೊಂದಿದೆ. "ತುಳು" ಭಾಷೆಯನ್ನಾಡುವ ಜನರಿರುವ ಪ್ರದೇಶವು ಸಹಜವಾಗಿಯೇ ತುಳುನಾಡು ಎಂದು ಕರೆಯಲ್ಪಟ್ಟಿದೆ.

ಮೂಲದ್ರಾವಿಡವು 🐾ತಮಿಳು  ನಾಡಿನಲ್ಲಿ ಉದಿಸಿತು, ತದನಂತರದಲ್ಲಿ ಕನ್ನಡದಂತೆ ತುಳು ಮೂಲ ದ್ರಾವಿಡ ಭಾಷೆಯಿಂದ ಕವಲೊಡೆದು ಸ್ವತಂತ್ರಗೊಂಡಿತು ಎಂದು ಭಾಷಾ ತಜ್ಞರು ಅಭಿಪ್ರಾಯಿಸುತ್ತಾರೆ. ತುಳು ಮತ್ತು ಹಳೆಗನ್ನಡದ ಹಲವು ಶಬ್ಧಗಳು ಸಾಮ್ಯತೆಯನ್ನು ಹೊಂದಿದ್ದು ತುಳು ತನ್ನ ಮೂಲಸ್ವರೂಪವನ್ನು ಇನ್ನೂ ಉಳಿಸಿಕೊಂಡು ಬಂದಿರುವುದಕ್ಕೆ ಸಾಕ್ಷಿ. (ಹಕ್ಕಿ-ಪಕ್ಕಿ, ಪಾಡು-ಪಾಡ್ದಾನ, ಹಲ್ಲಿ-ಪಲ್ಲಿ, ಅಪ್ಪೆ-ಅಮ್ಮ, ಅಮ್ಮೆ-ಅಪ್ಪ)

ತುಳುನಾಡಿನ ಜನ ಇಡೀ ಭಾರತದ 🇮🇳ಪರಿಕಲ್ಪನೆಯನ್ನು ತುಳುನಾಡ ಸೀಮೆಯಲ್ಲೇ ಕಂಡುಕೊಂಡರು. ತುಳುನಾಡಿನ ಸೀಮೆಯಲ್ಲಿರುವ ಘಟ್ಟಗಳನ್ನೇ ಕೈಲಾಸವೆಂದು ⛰ಪರಿಭಾವಿಸಿ, ಆ ಘಟ್ಟದ ಆ ಕಡೆಯಿಂದಲೇ ಶಿವನ ಗಣಗಳು 👺ಧರ್ಮ ನೆಲೆ ಮಾಡಲು ಇಲ್ಲಿಗೆ ಬಂದರು ಎಂದು ಇಲ್ಲಿನ ಬಹು ಪುರಾತನ ನಂಬಿಕೆ. ಅಂತೆಯೇ, ಇಂದಿಗೂ ಧರ್ಮದ ನೆಲೆಬೀಡಾಗಿರುವ ತುಳುನಾಡು ಬೇರೆ ಪ್ರದೇಶಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು ಸಭ್ಯ, ಶಿಸ್ತಿನ, ಶಿಕ್ಷಿತ, ಸಾಮಾಜಿಕ ಪ್ರಜ್ಞೆ, ಸತ್ಯ, ನ್ಯಾಯಗಳ ಪ್ರದೇಶವಾಗಿದೆ.
ಪರುಶುರಾಮನೇ ತನ್ನ ಕೊಡಲಿಯಿಂದ⛏ ಈ ಭೂಭಾಗವನ್ನು ಸೃಷ್ಟಿಸಿದ ಎಂಬ ನಂಬಿಕೆ ಪುರಾತನವಾದುದು. ಪರಶುರಾಮನ ಆಜ್ಞೆಗೆ ಕಡಲು🌊 ಹಿಂದೆ ಸರಿದು ಇಲ್ಲಿ ಜನವಸತಿಗೆ ಅನುವು ಮಾಡಿಕೊಟ್ಟಿತು ಎಂದು, ಉಪ್ಪಾದ ನೆಲಗಳನ್ನು ನಾಗಗಳು 🐍ಫಲವತ್ತಾಗಿಸಿತು ಎಂದು ಪ್ರತೀತಿ. ಇದನ್ನು ನೆನೆದು ನಾಗಗಳಿಗೆ ತನಿ ಎರೆದು ಸಂತೃಪ್ತಿ ಪಡಿಸುವ ಸಂಪ್ರದಾಯವು ತುಳುನಾಡಿನ ಒಂದು ವಿಶಿಷ್ಟ ಪದ್ಧತಿ.

ಪಶ್ಚಿಮ ಘಟ್ಟದಿಂದಾವೃತವಾದ 🏞 ಈ ಪ್ರದೇಶದಲ್ಲಿ ವಾಸಿಸುವ ಸಲುವಾಗಿ ನಮ್ಮ ಪೂರ್ವಜರು ಇಲ್ಲಿನ ಕಾಡುಗಳನ್ನು ಕೊಡಲಿಯಿಂದ ಕಡಿದು ಯೋಗ್ಯ ಭೂಮಿಗಳಾಗಿ ನಿರ್ಮಾಣ ಮಾಡಿದರು ಹಾಗಾಗಿ ಇದು ಪರಶುರಾಮ (ಕೊಡಲಿ) ಕ್ಷೇತ್ರ ಎಂದು ಬಣ್ಣಿಸಲಾಗುತ್ತದೆ. ಕಾಡಾದುದರಿಂದ ಹಾವುಗಳು🐍🐍 ಅಧಿಕವಾಗಿರುವುದು ಸಹಜ, ಆ ಹಾವುಗಳ ನೆಲೆಕೆಡವದಿರಲು ಹಾವುಗಳನ್ನು ನಾಗನಬನ, ನಾಗನ ಕೆರೆ ಎನ್ನುವ ಹೆಸರುಗಳಲ್ಲಿ ರಕ್ಷಿಸುವ ಸಲುವಾಗಿ ಪೂಜಿಸಿದರು. ನಾಗ ದರ್ಶನ, ನಾಗಮಂಡಲಗಳು ಇವುಗಳು ಇಲ್ಲಿಯ ಅನನ್ಯ ಆಚರಣೆಗಳಲ್ಲಿ ಒಂದು.

ಇಂತಹ ತುಳುನಾಡಿನ ಕಲೆ, ಸಂಪ್ರದಾಯಗಳು ಅದ್ಭುತವಾದುದು. ಅವುಗಳಲ್ಲಿ ಒಂದು ಕೆಡ್ಡಸ.
ತುಳು ಆಚರಣೆಗಳಲ್ಲಿ ಕೆಡ್ಡಸ ಅಥವಾ ಕೆಡ್ಡೊಸ ಅನ್ನುವುದು ಒಂದು ಸುಂದರ ಕಲ್ಪನೆಯ ಆಚರಣೆ. ಭೂಮಿ ತಾಯಿಯು🌏 ಋತುಮತಿ ಆಗುವ ನಂಬಿಕೆ ಇಲ್ಲಿದೆ. ಈ ಸಮಯದಲ್ಲಿ ಭೂಮಿಯನ್ನು ಆಯುಧಗಳಿಂದ ⛏🗡 ಅಗೆಯಬಾರದೆಂಬ ನಿಯಮವಿದೆ. ಚಳಿಗಾಲದ ಸಂದರ್ಭವಾದ ತುಳು ತಿಂಗಳಾದ ಪುಯಿಂತೆಲ್ (ಮಕರ) ಶಿಶಿರ ಋತುವಿನಲ್ಲಿ ಮರಗಿಡಗಳು ಎಲೆಯುದುರಿಸಿ 🍂 ಹೂಗಳಿಲ್ಲದೆ ಇರುವ ಹೊತ್ತಲ್ಲಿ ಭೂಮಿಯು ಮುಂದೆ ಸುಗ್ಗಿ (ಮೀನ) ಎಂಬ ವಸಂತ ಋತುವಿನಲಿ ಹೂ 🌼 ಹಣ್ಣು🍊 ಚಿಗುರು ಎಲೆಗಳಿಂದ🍃 ಕಂಗೊಳಿಸುವಂತೆ ಬರಲಿರುವ ವಸಂತ ಋತುವಿಗೆ ಮುನ್ನ ಮಾಡುವ ಈ ಆಚರಣೆ ಮದುಮಗಳಿಗೆ 🧚🏻‍♀ಮಾಡುವ ಶಾಸ್ತ್ರದ ಕಲ್ಪನೆಯೇ ಆಗಿದೆ.

ದೈವಾರಾಧನೆ ಭೂತಕೋಲಗಳು ಇಲ್ಲಿಯ ಮೂಲ ದ್ರಾವಿಡ ಪದ್ಧತಿಗೆ ಹಿಡಿದ ಕೈಗನ್ನಡಿ. ತುಳುನಾಡಿನ ದೈವಾರಾಧನೆಯೂ ಇಂತಹ ಒಂದು ದ್ರಾವಿಡ ಪದ್ಧತಿಯಾಗಿದೆ. ಇಲ್ಲಿ ಗಂಟೆ, ಜಾಗಟೆ, ದೀಪಾರತಿ, ಪುಷ್ಪಾರ್ಚನೆಗಳು ಕಂಡು ಬರುವುದಿಲ್ಲ ಬದಲಾಗಿ ಮಣಿಗಂಟೆ, ಧೂಪ, ದೊಂದಿಗಳೇ ಪ್ರಾಮುಖ್ಯ ಪಡೆಯುತ್ತವೆ. ಮಂತ್ರಾರ್ಚನೆಗಳಿಲ್ಲದೆ ಪಾಡ್ದಾನಗಳೇ ಪ್ರಾಮುಖ್ಯತೆ ಪಡೆಯುತ್ತವೆ. ಬಣ್ಣ, ಹಾಡುಗಾರಿಕೆ, ವಾದ್ಯ, ವೇಷ ಭೂಷಣ, ನರ್ತನಗಳ ಅನನ್ಯ ಕಲೆಯೇ ಕೋಲ ನೇಮಗಳು. ತುಳುನಾಡ ವೀರರ ಕಥೆಗಳೇ ಇವುಗಳಿಗೆ ಸ್ಫೂರ್ತಿ. ಇದರೊಂದಿಗೆ ಆ ಕಾಲದ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲ್ಮಟ್ಟದವರೆಂದು ಕರೆಸಿಕೊಳ್ಳುವವರು ಕೆಳಮಟ್ಟದವರೆಂದು ಬಿಂಬಿಸಲಾದ ಜನಾಂಗದೆದುರು ಕೈ ಮುಗಿದು ನಿಲ್ಲುವುದು ಜಾತಿ ವ್ಯವಸ್ಥೆಯ ಆಚೆಗೆ ತುಳುನಾಡಿನ ನೋಟವನ್ನು ವಿಶದಪಡಿಸುತ್ತದೆ.

ದ್ರಾವಿಡ ಪದ್ಧತಿಯಂತೆ ಪ್ರಕೃತಿ  ಆರಾಧನೆಯೇ ಮುಖ್ಯವಾಗಿ ಇರುವುದರಿಂದ ನಾಗ ಬನ, ದೈವಸ್ಥಾನಗಳು ಗೂಡಿ ಗೋಪುರವಿಲ್ಲದ ಪ್ರಕೃತಿ ಸಹಜ ನೆಲೆಯಾಗಿದ್ದವು ಆದರೆ ಇಂದು ಇವೆಲ್ಲವೂ ಕಾಂಕ್ರೀಟ್ ನೆಲಹಾಸು, ಗೋಪುರ ಕಟ್ಟಡಗಳಾಗಿರುವುದು ವಿಷಾದನೀಯ.

ತುಳು ನಾಡಿನ ಮತ್ತೊಂದು ವಿಶಿಷ್ಟ ಪದ್ಧತಿಯೇ ಉಲೈ ಲೆಪ್ಪುನಿ. ಮರಣಾನಂತರ ವ್ಯಕ್ತಿಯನ್ನು ಮಣ್ಣು ಮಾಡುವ ಯಾ ಚಿತೆಯೇರಿಸುವ ಸಂಪ್ರದಾಯದ ನಡುವೆ ತುಳುನಾಡಿನ ಈ ಉಲೈ ಲೆಪ್ಪುನಿ ಪದ್ಧತಿಯು ಭಿನ್ನವಾದುದು ಮತ್ತು ಉದ್ಧಾತವಾದುದು. ಇಲ್ಲಿ ಸತ್ತ ವ್ಯಕ್ತಿಯ ಸಂಸ್ಕಾರಾನಂತರ ಮತ್ತೆ ಒಳಗೆ ಕರೆಸಿಕೊಳ್ಳುವ ಮತ್ತು ತನ್ಮೂಲಕ ಅವರು ನಮ್ಮೊಂದಿಗೆ ಸದಾ ನೆಲೆಗೊಳ್ಳುತ್ತಾರೆ ಅನ್ನುವ ಕಲ್ಪನೆ ಸಂಬಂಧಗಳು ಸಾವಿನಾಚೆಗೂ ಉಳಿಯುವಂತದ್ದು ಎಂಬ ಸಂದೇಶ ನೀಡುತ್ತದೆ.

ನಾಳಿನ ಅಂಕಣದಲ್ಲಿ ಇನ್ನೊಂದಿಷ್ಟು ತುಳುನಾಡಿನ ಬಗ್ಗೆ ವಿಶ್ಲೇಷಿಸೋಣ

ಯೋಗೀಶ್ ಮಲ್ಲಿಗೆಮಾಡು

No comments:

Post a Comment

Note: only a member of this blog may post a comment.