Thursday, 15 February 2018

ಕೊನೆಯ ಅಂಕಣ

ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣ- 30

ಸತತವಾಗಿ ಒಂದು ತಿಂಗಳ ನಿರಂತರ ಅಂಕಣವನ್ನು ದಿನಕ್ಕೊಂದರಂತೆ ನಿಮ್ಮ ಮುಂದೆ ಪ್ರಸ್ತುತಪಡಿಸಿ ಇವತ್ತಿಗೆ ಈ ಅಂಕಣದೊಂದಿಗೆ ದಿನಕ್ಕೊಂದು ವಾಟ್ಸ್ ಆ್ಯಪ್ ಅಂಕಣವನ್ನು ಸಮಾಪನಗೈಯುತ್ತಿದ್ದೇನೆ. ಪ್ರತಿ ರಾತ್ರಿ ಹನ್ನೆರಡು ಒಂದು ಗಂಟೆಯವರೆಗೆ ಕೂತು ಅಂಕಣ ಬರೆದಿದ್ದೇನೆ, ವಿಷಯ ಸಿಕ್ಕದಿದ್ದಾಗ ತಲೆ ಕೆರೆದಿದ್ದೇನೆ ಆದರೆ, ಏನೇ ಆದರೂ ಬೆಳಗ್ಗೆ 6:30-7:00 ಗಂಟೆಗೆ ನಿಮ್ಮ ವಾಟ್ಸ್ ಆ್ಯಪ್ ಅಂಗಳಕ್ಕೆ ನನ್ನ ಅಂಕಣವನ್ನು ತಲುಪಿಸಿದ್ದೇನೆ.

ನೆಚ್ಚಿ ಓದಿದವರಿಗೂ, ಓದಿ ಒಕ್ಕಣಿಸಿದವರಿಗೂ (ಕಮೆಂಟಿಸಿದವರಿಗೂ),  ಸಲಹೆಗಳನ್ನು ಕೊಟ್ಟವರಿಗೂ, ಈ ವಿಷಯದ ಬಗ್ಗೆ ಬರೆಯಿರಿ ಎಂದು ವಿಷಯವನ್ನು ಆಯ್ದು ಕಳುಹಿಸಿದವರಿಗೂ, ಮುಖಪುಟದಲ್ಲಿ ನನ್ನ ಅಂಕಣವನ್ನು ಹಂಚಿಕೊಂಡವರಿಗೂ, ಹೆಬ್ಬರಳ ಮೆಚ್ಚುಗೆಯ ಒತ್ತಿದವರಿಗೂ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಮೆಚ್ಚುಗೆಗೆ ಚಿರಋಣಿ. ಯಾರೋ ಅಪರಿಚಿತರೊಬ್ಬರು  ನನ್ನ ಹೆಸರು ಕೇಳಿದೊಡನೆ ನಿಮ್ಮ ಅಂಕಣಗಳನ್ನು ಓದಿದ್ದೇನೆ ಎಂದು ಹೇಳಿದ್ದು ಖುಷಿ ಕೊಟ್ಟಿದೆ. ಎಲ್ಲರಿಗೂ ಮನತುಂಬಿದ ಧನ್ಯವಾದಗಳು.

ಪ್ರತೀ ಹತ್ತನೇ ಅಂಕಣವನ್ನು ಸಾಹಿತಿಗೆ ಅರ್ಪಿಸುವ ಸಲುವಾಗಿ ಇಂದಿನ ಅಂಕಣ ಕನ್ನಡದ ಖ್ಯಾತ ಕವಯತ್ರಿ ತ್ರಿವೇಣಿಯವರ ಸ್ಮರಣೆಯಲ್ಲಿ.

ನಾಡು ಕಂಡ ಅನೇಕ ಮಹಿಳಾ ಲೇಖಕಿಯರಲ್ಲಿ ತ್ರಿವೇಣಿಯವರೂ ಒಬ್ಬರು. ತ್ರಿವೇಣಿ ಎಂಬುವುದು ಅವರ ಕಾವ್ಯ ನಾಮ. ಮೂಲ ಹೆಸರು ಅನಸೂಯ ಶಂಕರ್. 1 ಸೆಪ್ಟಂಬರ್ 1928 ರಂದು ಮಂಡ್ಯದಲ್ಲಿ ಜನಿಸಿದರು. ತಮ್ಮ ಬಿ.ಎ ವ್ಯಾಸಾಂಗದ ಅವಧಿಯಲ್ಲಿ ಮನಃಶಾಸ್ತ್ರ ವಿಷಯಕ್ಕೆ ಸಂಬಂಧಿಸಿ ಸ್ವರ್ಣ ಪದಕವನ್ನು ಪಡೆದುಕೊಂಡಿದ್ದರು.

ಮಹಾತ್ಮ ಗಾಂಧೀಜಿಯ ಅಸ್ತಿಯನ್ನು ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಿದ ಗೌರವಾರ್ಥ ಅನಸೂಯ ಶಂಕರ್ ತಮ್ಮ ಕಾವ್ಯನಾಮವನ್ನು ತ್ರಿವೇಣಿ ಎಂದು ಇಟ್ಟುಕೊಂಡಿದ್ದರು.

1953 ರಲ್ಲಿ ಅವರ ಮೊದಲ ಕಾದಂಬರಿ ಅಪಸ್ವರ ಪ್ರಕಟವಾಯಿತು. ತದನಂತರ 24 ಕಾದಂಬರಿ ಹಾಗೂ ಮೂರು ಕಥಾ ಸಂಕಲನವನ್ನು ಪ್ರಕಟಿಸಿದ್ದಾರೆ.

"ಬೆಳ್ಳಿ ಮೋಡ" ಕಾದಂಬರಿಯನ್ನು ಚಲನಚಿತ್ರವಾಗಿಸಿದ ಪುಟ್ಟಣ್ಣ ಕಣಗಾಲರಿಗೆ ಈ ಚಿತ್ರ ಭಾಗ್ಯವನ್ನೇ ತೆರೆಯಿತು. ಈ ಚಿತ್ರದ ಶೀರ್ಷಿಕೆ ಗೀತೆಯಲ್ಲಿ ಬರುವ "ಮಿನುಗು ತಾರೆ" ಎಂಬ ಪದ ಕಲ್ಪನಾ ಹೆಸರಿಗೆ ಬಿರುದಾಗಿ ಉಳಿಯಿತು. ತನ್ನ ಬೆಂಗಳೂರು ನಿವಾಸಕ್ಕೂ ಕಲ್ಪನ "ಬೆಳ್ಳಿ ಮೋಡ" ಎಂಬ ಹೆಸರಿಟ್ಟು ತನಗೆ ಹೆಸರು ತಂದುಕೊಟ್ಟ ಚಲನಚಿತ್ರಕ್ಕೆ ಗೌರವ ಸಲ್ಲಿಸಿದ್ದರು. ಈ ಚಿತ್ರ ಏಳು ರಾಜ್ಯ ಪ್ರಶಸ್ತಿಗಳನ್ನೂ ದಕ್ಕಿಸಿಕೊಂಡಿತ್ತು.

ಮೂಲತಃ ಅವರ ಹೆಚ್ಚಿನ ಕಾದಂಬರಿಗಳು ಮನೋಸಾಮಾಜಿಕ (PsychoSocial) ವಸ್ತುಗಳನ್ನೊಳಗೊಂಡಿದೆ. "ಶರಪಂಜರ" ಅಂತಹ ಒಂದು ಮನೋಸಾಮಾಜಿಕ ಕಾದಂಬರಿ. "ಕಾವೇರಿ" ಎಂಬ ಕಥಾ ನಾಯಕಿ ಮಾನಸಿಕ ಖಾಯಿಲೆಯಿಂದ ಗುಣಮುಖವಾದ ಮೇಲೂ ಸಮಾಜ ಆಕೆಯನ್ನು ನಡೆಸಿಕೊಳ್ಳುವ ರೀತಿಯನ್ನು ಈ ಕಾದಂಬರಿಯಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಪುಟ್ಟಣ್ಣ ಕಣಗಾಲರು ಈ ಕಾದಂಬರಿಯನ್ನು ಚಲನಚಿತ್ರವಾಗಿಸಿದರು. ಕಥಾನಾಯಕಿ ಪಾತ್ರದಲ್ಲಿ ಮಿನುಗು ತಾರೆ ಕಲ್ಪನ ನಟಿಸಿದ ಈ ಚಿತ್ರ ಕನ್ನಡದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎಂದು ವಿಶ್ಲೇಷಿಸಲಾಗಿದೆ. ಅತ್ಯುತ್ತಮ ಚಿತ್ರಕಥೆಯ ರಾಷ್ಟ್ರ ಹಾಗೂ ರಾಜ್ಯ ಪ್ರಶಸ್ತಿ ಗೆದ್ದುಕೊಂಡಿದೆ.

ಕಲ್ಪನಾ ನಿರ್ವಹಿಸಿದ ಕಾವೇರಿಯ ಪಾತ್ರ ಒಂದು  ಅಮೋಘ ಅಭಿನಯ. ಚಿತ್ರದ ಮುಕ್ತಾಯದ ಭಾಗದಲ್ಲಿ ಕಲ್ಪನ ನಟನೆ ಮುಗಿದ ನಂತರವೂ ಚೀರಾಡುತ್ತಿದ್ದದ್ದು ಅಭಿನಯದ ಪರಾಕಾಷ್ಠೆಯನ್ನು ತಲುಪಿದ್ದರು ಎನ್ನುವುದಕ್ಕೆ ಸಾಕ್ಷಿ. ಅವರಿಗೆ ಈ ಚಲನಚಿತ್ರ ಅತ್ಯುತ್ತಮ ನಾಯಕ ನಟಿ ಪ್ರಶಸ್ತಿಯನ್ನೂ ತಂದು ಕೊಟ್ಟಿತು.

ತ್ರಿವೇಣಿಯವರ ಐದು ಕಾದಂಬರಿಗಳು ಚಲನಚಿತ್ರಗಳಾಗಿವೆ. "ಶರಪಂಜರ", "ಬೆಳ್ಳಿಮೋಡ", "ಹಣ್ಣೆಲೆ ಚಿಗುರಿದಾಗ", "ಮುಕ್ತಿ", "ಹೂವು ಹಣ್ಣು".

24 ಕಾದಂಬರಿಗಳನ್ನು ಬರೆದಿದ್ದ ತ್ರಿವೇಣಿ 25ನೇ ಕಾದಂಬರಿ "ಅವಳ ಮಗಳು" ಮುಗಿಸುವ ಮುನ್ನ ನಿಧನರಾದರು. ಮುಂದೆ ಈ ಕಾದಂಬರಿಯನ್ನು ಎಂ.ಸಿ.ಪದ್ಮ ಇವರು ಪೂರ್ಣಗೊಳಿಸಿದರು.

"ಬೆಕ್ಕಿನ ಕಣ್ಣು" ಕಾದಂಬರಿಯನ್ನು ಪುಟ್ಟಣ್ಣ ಕಣಗಾಲರು ಮಲಯಾಳಂನಲ್ಲಿ "ಪೂಚಕಣ್ಣಿ" ಎಂಬ ಹೆಸರಿನಲ್ಲಿ ನಿರ್ದೇಶಿಸಿದ್ದರು. ಇದೂ ಕೂಡ ಒಂದು ಮನೊಸಾಮಾಜಿಕ (PsychoSocial) ಕಾದಂಬರಿ ಮಲಯಾಳಂನಲ್ಲಿ ಈ ಚಿತ್ರ ಬಹಳ ಯಶಸ್ವಿಯಾಯಿತು.

29 ಜುಲೈ 1963 ರಲ್ಲಿ ಅವರು ನಿಧನರಾದರು. ತಮ್ಮ ಮಗಳಿಗೆ ಜನ್ಮ ನೀಡಿದ ಹತ್ತನೆ ದಿನಕ್ಕೆ ಮರಣ ಹೊಂದಿದ ಅವರಿಗೆ ಆಗ ವಯಸ್ಸು ಕೇವಲ 34 ವರುಷ. ಅವರ ಮೊದಲ ಕಾದಂಬರಿ 1953 ರಲ್ಲಿ ಪ್ರಕಟವಾಯಿತು. 1963 ಅವರು ನಿಧನರಾದರು. ಸಾಹಿತ್ಯ ಲೋಕದಲ್ಲಿ ಕೇವಲ ಹತ್ತು ವರುಷದ ಅವಧಿಯಲ್ಲಿ ಮಿಂಚಿ ಮರೆಯಾದ ಅವರು ಇಂದಿಗೂ ಸಾರಸ್ವತ ಲೋಕದಲ್ಲಿ ಅಚ್ಚಳಿಯದೆ ಉಳಿದಿದ್ದಾರೆ ಎಂದರೆ ಅವರು ಆಯ್ದು ಕೊಂಡ ವಸ್ತು, ಬರೆದ ಶೈಲಿ ಮತ್ತು ಸೂಕ್ಷ್ಮತೆಗಳೇ ಕಾರಣ.

ತಾವರೆ ಕೊಳ ಮತ್ತು ಅವಳ ಮಗಳು ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ

ಇಂತಹ ಶ್ರೇಷ್ಠ ಸಾಹಿತಿಯ ಕಾದಂಬರಿಗಳನ್ನು ಓದುವುದು ತ್ರಿವೇಣಿಯವರಿಗೆ ಅಂತೆಯೇ ಕನ್ನಡ ಸಾರಸ್ವತ ಲೋಕಕ್ಕೆ ನಾವು ಸಲ್ಲಿಸುವ ಗೌರವ.

ಯೋಗೀಶ್ ಮಲ್ಲಿಗೆಮಾಡು.

No comments:

Post a Comment

Note: only a member of this blog may post a comment.