Sunday, 14 October 2018

ಕಾತ್ಯಾಯಿನಿ ನಮಸ್ತುಭ್ಯಂ

ನವರಾತ್ರಿಯ ಆರನೇ ದಿನ 6 ಪೂಜಿಸಲ್ಪಡುವವಳು  *"ಕಾತ್ಯಾಯಿನಿ"*

ಅಮರಕೋಶದಲ್ಲಿ ಕಾತ್ಯಾಯಿನಿ ಪಾರ್ವತಿಯ ಎರಡನೇ ಹೆಸರಾಗಿದೆ.

*ಮಹಾಕಾಲಿ ಪುರಾಣದಲ್ಲಿ* *ಕಾತ್ಯಾಯನ ಎಂಬ ಋಷಿಯು ಈಕೆಯನ್ನು ಮೊದಲಿಗೆ ಪೂಜಿಸಿದನಾದರಿಂದ ಈಕೆಗೆ ಕಾತ್ಯಾಯಿನಿ ಎಂದು ಹೆಸರು ಬಂತು ಎಂದು ಉಲ್ಲೇಖಿಸಿದೆ.*

ಹಲವಾರು ಪುರಾಣಗಳು (ದೇವಿ ಭಾಗವತ, ಮಾರ್ಕಾಂಡೇಯ, ಮಹಾಕಾಲಿ ಪುರಾಣ) ಈಕೆಯ ಬಗೆಗೆ ಪ್ರಸ್ತಾಪಿಸಿದೆ.

*ಮಹಿಷಾಸುರನ* ಸಂಹಾರಕ್ಕೆ ಅವತರಿಸಿದವಳು ಇವಳು ಎಂದು ತಿಳಿದುಬರುತ್ತದೆ. ಗಂಡಸರಿಂದ ಸಾವು ಬರದಂತೆ ವರ ಪಡೆದಿದ್ದ ಮಹಿಷಾಸುರ  *ಮಹಿಷಮಂಡಲವನ್ನು* ಆಳುತ್ತಿದ್ದ. ಆತ ಕಾತ್ಯಾಯಿನಿಯ ರೂಪಕ್ಕೆ ಮರುಳಾಗಿ ತನ್ನನ್ನು ವರಿಸುವಂತೆ ಕೇಳಿದನು. ಯುದ್ಧದಲ್ಲಿ ತನ್ನನ್ನು ಗೆದ್ದಲ್ಲಿ ತಾನು ಮಹಿಷಾಸುರನನ್ನು  ವರಿಸುವುದಾಗಿ ಹೇಳಿದ ಕಾತ್ಯಾಯಿನಿ ಅವನೊಂದಿಗೆ ಯುದ್ಧಕ್ಕೆ ಅಣಿಯಾದಳು. ಯುದ್ಧದಲ್ಲಿ ಮಹಿಷಾಸುರನನ್ನು ವಧಿಸಿದಳು. ತನ್ಮೂಲಕ *ಮಹಿಷಾಸುರಮರ್ಧಿನಿ* ಎಂಬ ಹೆಸರನ್ನು ಹೊಂದಿದಳು.

*ಮಹಿಷ* ಎಂದರೆ *ಕೋಣ*. *ಕೋಣ* *ಅಜ್ಞಾನವನ್ನು* ಸಂಕೇತಿಸುತ್ತದೆ. *ಲೌಕಿಕ ಜಗತ್ತಿನಲ್ಲಿ  ಕಾಮ , ಕ್ರೋಧ , ಮೋಹ , ಮಾಯೆ ಎಂಬ ಅಜ್ಞಾನಗಳು ನಮ್ಮನ್ನು ಆಗಾಗ ವರಿಸಲು ಬರುತ್ತವೆ* ಆ ಸಂದರ್ಭದಲ್ಲಿ *ಜ್ಞಾನ ಸ್ವರೂಪಿಣಿಯಾದ ತಾಯಿ ಕಾತ್ಯಾಯಿನಿಯ ಸ್ಮರಣೆ ಅಜ್ಞಾನ ನಾಶಕ್ಕೆ ಹಾಗೂ ಜ್ಞಾನ ಜ್ಯೋತಿ  ಬೆಳಗಲು ಕಾರಣಳಾಗುತ್ತಾಳೆ.*

ಭಾಗವತ ಪುರಾಣದಲ್ಲಿ ಕನ್ಯೆಯರು  ಅರ್ಥಾತ್ *ಮದುವೆಯಾಗದ ಗೋಪಿಕೆಯರು ಕೃಷ್ಣನೇ ಗಂಡನಾಗಿ ಸಿಗಲಿ ಎಂಬ ಉದ್ದೇಶದಿಂದ ಮಾರ್ಗಶೀರ್ಷ ಮಾಸದಲ್ಲಿ ಯಮುನಾ ನದಿಯ ತೀರದಲ್ಲಿ ಸ್ನಾನ ಮಾಡಿ ಒಂದು ತಿಂಗಳ ಕಾತ್ಯಾಯಿನಿ ವೃತ ಕೈಗೊಳ್ಳುತ್ತಿದ್ದರು ಎಂದು ಪ್ರಸ್ತಾಪಿಸುತ್ತದೆ.*

ಕನ್ಯಾ ಕುಮಾರಿ ದೇವಾಲಯದಲ್ಲಿರುವ  *ಕನ್ಯಾಕುಮಾರಿಯು* ಕಾತ್ಯಾಯಿನಿಯ ಸ್ವರೂಪ.

ನವರಾತ್ರಿಯು *ಅಜ್ಞಾನದ ಮೇಲೆ ಜ್ಞಾನದ ವಿಜಯದ ಸಂಕೇತ* ಎನ್ನುವುದನ್ನು ನಾವು ಈ ಹಿಂದೆಯೇ ತಿಳಿದುಕೊಂಡೆವು. ಬ್ರಹ್ಮಚಾರಿಣಿ ರೂಪವು *ಲೌಕಿಕ ಕಾಮನೆಗಳ ಮೇಲೆ ಅಲೌಕಿಕ ಸತ್ಯದ ಅರಿವನ್ನು ನೀಡುತ್ತದೆ.* ಅಂತೆಯೇ ಕಾತ್ಯಾಯಿನಿ ರೂಪವು  *ಅರಿಷಡ್ವರ್ಗಗಳ ಮೇಲಿನ ವಿಜಯವನ್ನೂ ಸಂಕೇತಿಸುತ್ತದೆ.*

ಪರ್ವತದ ತಪ್ಪಲಿನಲ್ಲಿಯ ಸಮೃದ್ಧಿಯನ್ನು ಶೈಲಪುತ್ರಿಗೆ ಆರೋಪಿಸಿ, ಕೃಷಿಯೇ ಮುಂತಾದ ಜ್ಞಾನದ ಬಲವನ್ನು ಬ್ರಹ್ಮಚಾರಿಣಿಯೆಂದು ಕರೆದು, ಕಷ್ಟಗಳನ್ನು ಎದುರಿಸುವ ಮನೋಸ್ಥೈರ್ಯವನ್ನೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳನ್ನು ಗೆದ್ದು ಜಗತ್ತನ್ನೇಧಾರಣೆ ಮಾಡಿದ ಶಿವ ಎಂಬ ಸಂತಸ ಪಡೆದು ಬೀರಿದ ಮಂದಹಾಸವೇ ಕೂಷ್ಮಾಂಡ ಎಂದು ಭಾವಿಸಿ, ತಮ್ಮ ಕುಲದ, ವಂಶದ, ಜಗತ್ತಿನ, ಸೃಷ್ಟಿಯ ಮುಂದೆ ಕೊಂಡೊಯ್ಯುವಲ್ಲಿ ತಾಯಿ ಮಗುವಿನ ಸೇತುವನ್ನೇ ಸ್ಕಂದ ಮಾತ ಎಂದ ಮಾನವ, ಎಲ್ಲಾ ಸಮೃದ್ಧಿಯ ಆಚೆಗೆ ಈ ಐಹಿಕ ಜಗದ ಮೋಹ ಪಾಶಕ್ಕೆ ಒಳಗಾಗದಂತೆ, ಈ ಪರ್ವತದ ತಪ್ಪಲಿನ ಬದುಕಿನಾಚೆಗಿನ ಪಾರಮಾರ್ಥಿಕವೇ ಸತ್ಯ ಎಂದು ಆ ಸತ್ಯವನ್ನು ಕಾತ್ಯಾಯಿನಿ ರೂಪದಲ್ಲಿ ಪರಿಭಾವಿಸಿಕೊಂಡನು 

*ಯೋಗದಲ್ಲಿ ಈಕೆ ಆಜ್ಙಾ ಚಕ್ರವನ್ನು ಪ್ರತಿನಿಧಿಸುತ್ತಾಳೆ 🐍....*

*ಕಾತ್ಯಾಯಿನಿ ಮಹಾಮಾಯೆ ಮಹಾಯೋಗಿನ್ಯಧೀಶ್ವರೀ| ನಂದ ಗೋಪ ಸುತಂ ದೇವಿಪತಿಂ ಮೇ ಕುರು ತೆ ನಮಃ ||*ಎಂದು ಸ್ತುತಿಸಿ ಫಲವನ್ನು ಪಡೆಯಬಹುದು...

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

No comments:

Post a Comment

Note: only a member of this blog may post a comment.