Monday, 15 October 2018

ಕಾಲರಾತ್ರಿ ನಮಸ್ತುಭ್ಯಂ

ನವರಾತ್ರಿಯ ಏಳನೇ 7ದಿನ ಪೂಜಿಸಲ್ಪಡುವವಳು *"ಕಾಲರಾತ್ರಿ"*

*"ಕಾಲಿ"* ಅಥವಾ *"ಕಾಳಿ"* ಎಂಬ ಶಬ್ಧವು*"ಕಾಲ"*  ಎಂಬ ಶಬ್ಧದಿಂದ ಉದಿಸಿದೆ. ಕಾಲ ಅಂದರೆ ಇಲ್ಲಿ *ಸಮಯ* ಅಥವಾ *ಮೃತ್ಯು* ಎಂದು ಪರಿಗಣಿಸಬಹುದು.
*ಕಾಲರಾತ್ರಿ ಎಂದರೆ ಕಾಲ ಅರ್ಥಾತ್ ಸಮಯ ಅಥವಾ ಸಾವಿಗೆ ಅಂತ್ಯವನ್ನು ಕರುಣಿಸುವವಳು ಎಂದು ಸಂಕೇತಿಸುತ್ತದೆ.
*ಕಾಲಿ ಎಂಬ ಶಬ್ಧಕ್ಕೆ ಕಪ್ಪು ಎಂಬ ಅರ್ಥವೂ ಇದೆ.* *ಕಪ್ಪು ಅತ್ಯಂತ ಗೂಢವೂ, ನಿಗೂಢವೂ ಆಗಿದೆ.* ಕಾಲರಾತ್ರಿಯು ಅಂತ್ಯಕ್ಕೆ ಅಂತ್ಯ ಕರುಣಿಸುವವಳಾಗಿ ಆಕೆ ಯಾರಿಗೂ ಅರ್ಥವಾಗದ ಗೂಢತೆಯೊಂದಿಗೆ ಕಪ್ಪು ಬಣ್ಣವನ್ನು ಸಮೀಕರಿಸಿರುವುದು ಸಮಂಜಸವೇ ಆಗಿದೆ.

ಶಬ್ಧಕಲ್ಪಧ್ರುಮದಲ್ಲಿ ಕಾಲಿಯನ್ನು *"ಕಾಲಃ ಶಿವಃ ತಸ್ಯ ಪತ್ನೇತಿ ಕಾಲಿ"* ಎಂದು ಉಲ್ಲೇಖಿಸಿದೆ. ಅರ್ಥಾತ್ ಕಾಲನಾದ ಶಿವನ ಪತ್ನಿ ಕಾಲಿ. *ಕಾಲನಿಗೂ ಕಾಲವಾದವಳು.*

ರಕ್ತಬೀಜಾಸುರ, ಎಲ್ಲಿ ತನ್ನ ರಕ್ತ ಬೀಳುತ್ತದೊ ಅಲ್ಲಿ ಮತ್ತೊಬ್ಬ ರಕ್ತಬೀಜಾಸುರ ಹುಟ್ಟುವಂತಹ ವರವನ್ನು ಪಡೆದಿದ್ದನು. ಆತನ ವಧೆ ದುಸ್ಸಾಧ್ಯವಾದಾಗ ಮಹಾಕಾಲಿ ತನ್ನ ನಾಲಿಗೆಯಿಂದ ಆತನ ದೇಹದಿಂದ ತೊಟ್ಟಿಕ್ಕುವ ರಕ್ತವನ್ನು ಹೀರುತ್ತಾ ವಧಿಸಿದಳು ಎಂಬ ಪ್ರತೀತಿ ಇದೆ.

*ಶೈಲಪುತ್ರಿಯು*  *ಬ್ರಹ್ಮಚಾರಿಣಿ*ಯಾಗಿ  ಶಿವನನ್ನು ಒಲಿಸಲು ಅನೇಕ ವರುಷ ಮಳೆ, ಚಳಿ, ಗಾಳಿ, ಬಿಸಿಲಲ್ಲಿ  ತಪಸ್ಸು ಮಾಡಿದ ಪರಿಣಾಮ ಆಕೆಯ ಮೈ ಬಣ್ಣ ಕಪ್ಪಾಯಿತು. ಶಿವನು ಆಕೆಯ ತಪಸ್ಸಿಗೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎನ್ನುವುದು ಇನ್ನೊಂದು ಪ್ರತೀತಿ...

ಕಾಲರಾತ್ರಿಯು ಕೆದರಿದ ಕೂದಲು,  ಹೊರಚಾಚಿದ ಕಣ್ಣಗುಡ್ಡೆ , ರಕ್ತಭರಿತವಾದ ನಾಲಿಗೆ , ಬೆಂಕಿ ಉಗುಳುವ  ಮೂಗಿನ ಹೊಳ್ಳೆ, ಕಪ್ಪು ಮೈ ಬಣ್ಣ,  ರುಂಡ ಮಾಲೆ,ಕೈಯಲ್ಲಿ ಖಡ್ಗ ಧಾರಣೆ ಮಾಡಿ, ಕತ್ತೆಯನ್ನು ವಾಹನವಾಗಿಸಿದ ಭೀಕರ ರೂಪ.

ನವದುರ್ಗೆಯರಲ್ಲಿ ಆಕೆಯದು ಭೀಕರ ಮತ್ತು ಭೀಭತ್ಸ ರೂಪ. *ಮಹಾಗೌರಿ ಎಷ್ಟು ಸುಂದರವೋ ಅಷ್ಟೇ ಭೀಕರತೆ ಕಾಲರಾತ್ರಿ.* ಅರ್ಥಾತ್ ಪ್ರಕೃತಿ ಎಷ್ಟು ಸುಂದರವೊ ಅಷ್ಟೇ ಪ್ರಳಯ ಭೀಕರ ಎಂದು ಈ ರೂಪ ಸೂಚಿಸುತ್ತದೆ. ಪ್ರಳಯಕಾಲದಲ್ಲಿ  *ಪ್ರಕೃತಿಯು ಕಾಲಿಯಷ್ಟೇ ಭೀಕರವಾಗಿ ಸರ್ವವನ್ನೂ ನಾಶಮಾಡುವ ಸಂದೇಶ ನೀಡುತ್ತದೆ.*

ಕೆಲವು ಚಿತ್ರಗಳು ಶಿವನು ನೆಲದ ಮೇಲೆ ಮಲಗಿರುವಂತೆ ಹಾಗೂ ಕಾಲಿ ಶಿವನ ಎದೆಯನ್ನು ಮೆಟ್ಟಿರುವಂತೆ  ಕಾಣಬಹುದು....
ಅರ್ಥಾತ್ ಶಿವ ಪುರುಷ ತತ್ವ ಮತ್ತು ಶಕ್ತಿ ಪ್ರಕೃತಿ ತತ್ವವನ್ನು ತಿಳಿಸುತ್ತದೆ.  ಪುರುಷನಿಗೆ ಪ್ರಕೃತಿ ಅಂದರೆ ಶಕ್ತಿ ಇಲ್ಲದಿದ್ದರೆ ವ್ಯರ್ಥ. *"ಶಕ್ತಿ ಇಲ್ಲದಿದ್ದರೆ ಶಿವನೂ ಶವದಂತೆ"* ಎನ್ನುವುದನ್ನು ಈ ಚಿತ್ರ ಉಲ್ಲೇಖಿಸುತ್ತದೆ....

*ಕಾಲಿದಾಸ ಮಾತಾ ಕಾಲಿಯ ಕೃಪೆಯಿಂದ ಕವಿಯಾದ ಎಂಬ ಪ್ರತೀತಿ ಇದೆ.* ಆತ ಕಾಲಿಯ ಮೇಲೆ ಬರೆದ ಶ್ಯಾಮಲ ದಂಡಕಂ ಈ ಕೆಳಗೆ ಅರ್ಥಸಹಿತ ನೀಡಿದ್ದೇನೆ

********  *ಶ್ಯಾಮಲ ದಂಡಕಂ* *******

ಏನೂ ಅರಿಯದ ಮುಗ್ಧನೊಬ್ಬ *ಮಹಾಕಾಳಿಯ* ಕೃಪೆಯಿಂದ ಸಾಮರ್ಥ್ಯವನ್ನುಗಳಿಸಿ ಲೋಕವಿಖ್ಯಾತಿ ಹೊಂದಿದ. ಕಾಳಿಯ ಕೃಪೆಯಿಂದಾಗಿ ಆತ *ಕಾಳಿದಾಸ* ಎಂದು ಜನಜನಿತನಾದ. ಕಾಳಿಯನ್ನು ಶ್ಯಾಮಲ ರೂಪದಲ್ಲಿ ಕಂಡ ಆತ ಆಕೆಯನ್ನು *ಅಕ್ಷರ ದೇವತೆಯಾಗಿ* ಕಂಡು ಆಕೆಯನ್ನು ಸ್ತುತಿಸಿದ್ದೆ *ಶ್ಯಾಮಲ ದಂಡಕಂ.*

*ಶ್ಯಾಮಲೆಯನ್ನು ದಂಡಕ* ಎಂಬ ಹಾಡಿನ ಶೈಲಿಯಲ್ಲಿ ಸ್ತುತಿಸಿದ್ದೆ ಶ್ಯಾಮಲ ದಂಡಕಂ ಎಂದು ಪ್ರಸಿದ್ಧವಾಯಿತು.
*ಡಾ. ರಾಜ್ ಕುಮಾರ* ನಟಿಸಿದ *ಕವಿರತ್ನ ಕಾಳಿದಾಸ* ಚಲನಚಿತ್ರದಲ್ಲಿ ರಾಜ್ ಕುಮಾರರ ಕಂಠ ಸಿರಿಯಲ್ಲಿ ಅದ್ಭುತವಾಗಿ ಮೂಡಿ ಬಂದ ಈ ಹಾಡು ಜನಜನಿತವಾಗಿದೆ.

ಶ್ಲೋಕ ಮತ್ತು ಅದರ ಅರ್ಥವನ್ನು ಈ ಕೆಳಗೆ ನೀಡಿದೆ.
ನವರಾತ್ರಿಯ ಈ ದಿನ ಮಹಾಕಾಳಿಯು ಪ್ರತಿನಿಧಿಸುತ್ತಿದ್ದು ಈ ಶ್ಲೋಕಗಳನ್ನು ಪಠಿಸಿ ಅಮೋಘ ಫಲ ಸಿದ್ಧಿಗಳಿಸಬಹುದು. ಸದಾ ಈ ಶ್ಲೋಕವನ್ನು ಸ್ತುತಿಸುವುದರಿಂದ ಸಕಲ ಶುಭಫಲಗಳು ಸಕಾರಾತ್ಮಕವಾಗಿ ಹರಿದುಬರುತ್ತವೆ ಎಂಬ ಪ್ರತೀತಿ ಇದೆ.

ಮಾಣಿಕ್ಯ ವೀಣಾಂ ಉಪಲಾಲಯಂತೀಂ,
ಮದಾಲಸಾಂ ಮಂಜುಲ ವಾಗ್ ವಿಲಾಸಂ,
ಮಾಹೇಂದ್ರ ನೀಲ ದ್ಯುತಿ ಕೋಮಲಾಂಗಿಂ,
ಮಾತಂಗ ಕನ್ಯಾಂ ಮನಸಾ ಸ್ಮರಾಮಿ
*(ಮಾಣಿಕ್ಯದಿಂದ ಕೂಡಿದ ವೀಣೆಯನ್ನು ನುಡಿಸುತ್ತಿರುವವಳೇ, ಆಲಸ್ಯ ತರುವಷ್ಟು ವಿಜ್ರಂಭಿತವಾಗಿ ಶೋಭಿಸುತ್ತಿರುವವಳೇ, ಮಂಜುಲವಾದ ಮಾತನಾಡುವವಳೇ,ನವರತ್ನಗಳಲ್ಲಿ ಒಂದಾದ ನೀಲದಂತೆ ಕೋಮಲವಾಗಿರುವವಳೇ, ಮಾತಂಗನ ಮಗಳಾದ ತಾಯಿಯನ್ನು ಮನಸಾರೆ ಸ್ಮರಿಸುತ್ತೇನೆ)*

ಚತುರ್ಭುಜೆ ಚಂದ್ರಕಳಾ ವತಂಸೆ
ಕುಚೋನ್ನತೆ ಕುಂಕುಮ ರಾಗ ಶೋಣೆ
ಪುಂಡ್ರೇಕ್ಷು ಪಾಶಾಂಕುಶ ಪುಷ್ಪ ಬಾಣ ಹಸ್ತೇ
ನಮಸ್ತೇ ಜಗದೇಕ ಮಾತಃ
*(ಚತುರ್ಭುಜವನ್ನು ಹೊಂದಿ ಚಂದ್ರನನ್ನು ಧಾರಣೆ ಮಾಡಿರುವವಳೇ, ಉನ್ನತ ಕುಚಗಳನ್ನು ಹೊಂದಿ ಕುಂಕುಮವರ್ಣದಿಂದ ಶೋಭಿಸುವವಳೇ, ಸಿಹಿ ಕಬ್ಬು, ಪಾಶ, ಅಂಕುಶ, ಪುಷ್ಪಬಾಣಗಳನ್ನು ಕೈಯಲ್ಲಿ ಧರಿಸಿರುವವಳೇ, ಜಗತ್ತಿನ ಏಕೈಕ ಮಾತೇ ನಿನಗೆ ನಮನಗಳು)*

ಮಾತಾ ಮರಕತ ಶ್ಯಾಮ
ಮಾತಂಗೀ ಮಧು ಶಾಲಿನಿ
ಕುರ್ಯಾತ್ಕಟಾಕ್ಷಂ ಕಲ್ಯಾಣಿ
ಕದಂಬ ವನವಾಸಿನಿ
*(ನವರತ್ನಗಳಲ್ಲಿ ಮರಕತ ಎಂಬ ಮಣಿಯಂತೆ ಶ್ಯಾಮಲವಾಗಿರುವ ಮಾತೇ, ಮಾತಂಗನ ಮಗಳಾದ ಮಾತಂಗೀ ಸುಮಧುರವಾಗಿರುವವಳೇ, ಶುಭಫಲವನ್ನು ನೀಡು, ಕದಂಬವನದಲ್ಲಿ ವಾಸವಾದವಳೆ.)*

ಜಯ ಮಾತಂಗ ತನಯೇ, ಜಯ ನೀಲೋತ್ಪಲ ಧ್ಯುತೆ,
ಜಯ ಸಂಗೀತ ರಸಿಕೆ,
ಜಯ ಲೀಲಾ ಶುಕ ಪ್ರಿಯೆ
*(ಮಾತಂಗನ ಮಗಳಿಗೆ ಜಯವಾಗಲಿ, ನೈದಿಲೆಯನ್ನು ಪ್ರತಿನಿಧಿಸುವವಳಿಗೆ ಜಯವಾಗಲಿ, ಸಂಗೀತವನ್ನು ಆಸ್ವಾದಿಸುವವಳಿಗೆ ಜಯವಾಗಲಿ, ಲೀಲೆಯೆಂಬ ಗಿಳಿಯನ್ನು ಮೆಚ್ಚಿರುವವಳಿಗೆ ಜಯವಾಗಲಿ)*

ಸುಧಾಸಮುದ್ರಾಂತಹ್ರುಧ್ಯನ್ಮಣೀ ದ್ವೀಪ ಸಮ್ರೂಢ ಬಿಲ್ವಾಟವೀ ಮಧ್ಯ ಕಲ್ಪಧ್ರುಮಾ ಕಲ್ಪ ಕಾದಂಬ ವಾಸ ಪ್ರಿಯೆ
ಕೃತ್ತಿ ವಾಸ ಪ್ರಿಯೆ
ಸರ್ವಲೋಕ ಪ್ರಿಯೆ
*(ಜೇನಿನಂತಹ ಕಡಲಿನ ನಡುವೆ ಇರುವ ನವರತ್ನದಂತಹ ದ್ವೀಪದಲ್ಲಿ ಆರೂಢವಾದ, ಬಿಲ್ವದ ಕಾಡಿನ ಮಧ್ಯೆ ಕದಂಬವನದಲ್ಲಿ ವಾಸವಾಗಿ ಕಲ್ಪವ್ರಕ್ಷದಂತೆ ಬಯಸಿದ್ದನ್ನು ನೀಡುವ, ಸದಾಶಿವನ ಪ್ರಿಯೆಯಾದ, ಸರ್ವಲೋಕ ಪ್ರಿಯೆಯಾದವಳಿಗೆ ಜಯವಾಗಲಿ)*

ಕಾಲರಾತ್ರಿ ನಂಬಿದವರನ್ನು ಸಲಹುತ್ತಾಳೆ  ಆಕೆ ಮಾತಾ ಸ್ವರೂಪಿಣಿ. ಇಡೀ ಬ್ರಹ್ಮಾಂಡ ಏನೂ ಇರದಾಗ ಕತ್ತಲಿನಿಂದ ಕೂಡಿತ್ತು ಮತ್ತು ಅದೇ *ಕತ್ತಲನ್ನು ಕಾಲಿಯ ಕಪ್ಪು ಬಣ್ಣದೊಂದಿಗೆ ಸಮೀಕರಿಸಿ ಆಕೆಯಿಂದಲೇ ಸಕಲ ಚರಾಚರದ ಉಗಮ ಮತ್ತು ಅಂತ್ಯ ಎಂದು ಸೂಚಿಸುತ್ತದೆ.*

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು ಪರಿಭಾವಿಸಿದ ಮಾನವ ಪರ್ವತದ ತಪ್ಪಲಿನ ಪ್ರಕೃತಿಯ ಪ್ರಳಯ ಭೀಕರ ಆಟಾಟೋಪಗಳನ್ನು ಕಂಡು ಭೀತಗೊಂಡು ಎಲ್ಲಕ್ಕಿಂತ ಮಿಗಿಲಾದ ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ ಎನ್ನುವುದನ್ನು ಮನಗಂಡು ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಸ್ತುತಿಸಿದ.

*ಯೋಗದಲ್ಲಿ ಈಕೆ ಸಹಸ್ರಾರ ಚಕ್ರವನ್ನು ಪ್ರತಿನಿಧಿಸುತ್ತಾಳೆ.*

ಕಾಲಿ, ಮಹಾಕಾಲಿ, ಕಾಲಿಕೆ, ಪರಮೇಶ್ವರಿ||
ಸರ್ವಾನಂದಕರಿ ದೇವಿ ನಾರಾಯಣಿ ನಮೋಸ್ತುತೆ||

ತಾಯಿ ಸಕಲರಿಗೂ ಶುಭ ಕರುಣಿಸಲಿ.

ಪರಿಕಲ್ಪನೆ: "ಯೋಗೀಶ್ ಮಲ್ಲಿಗೆಮಾಡು"

No comments:

Post a Comment

Note: only a member of this blog may post a comment.