Tuesday, 16 October 2018

ಮಹಾಗೌರಿ ನಮಸ್ತುಭ್ಯಂ

ನವರಾತ್ರಿಯ ಎಂಟನೇ ದಿನ ಪೂಜಿಸಲ್ಪಡುವವಳು *"ಮಹಾಗೌರಿ"* :

*ಗೌರಿ* ಎಂದರೆ *ಬಿಳಿ* ಎನ್ನುವ ಅರ್ಥ. ಮಹಾಗೌರಿಯು ಬಿಳಿಯ ಮೈಬಣ್ಣ ಹೊಂದಿದ್ದು ಆಕೆಯನ್ನು *ಶ್ವೇತ ವಸನ* ಧಾರಿಯಾಗಿ  ಉಲ್ಲೇಖಿಸಿದೆ. ಅಚ್ಚ ಬಿಳುಪಿನ ಶುಭ್ರವರ್ಣವಾಗಿ ಕಂಡು ಬರುವ ಈಕೆಯ *ಶುಭ್ರತೆಯನ್ನು ಶಂಖ ಅಥವಾ ಚಂದ್ರನಿಗೆ ಸಮೀಕರಿಸಿದೆ.*

ಶಿವನಿಗಾಗಿ ತಪಸ್ಸನ್ನು ಮಾಡಿದ *ಬ್ರಹ್ಮಚಾರಿಣಿಯು* ಗಾಳಿ, ಮಳೆ, ಬಿಸಿಲಿಗೆ ಕಪ್ಪಗಾಗಿ  ಶಿವನೊಲಿದು ಆಕೆಯನ್ನು *ಕಾಲಿ* ಎಂದು ಛೇಡಿಸಿದ ಎಂಬ ವಿಚಾರವನ್ನು ಹಿಂದಿನ ರೂಪದಲ್ಲಿ ಕೇಳಿದ್ದೆವು. ಮುಂದುವರೆದು *ಶಿವನು ಆಕೆಯನ್ನು ಗಂಗಾ ನದಿಯಲ್ಲಿ  ಸ್ನಾನ ಮಾಡಿಸಿದಾಗ ಆಕೆಯ ಕಪ್ಪು ವರ್ಣ ತೊಳೆದು ಶುಭ್ರವಾದಳು  ಎಂಬ ಪ್ರತೀತಿ ಇದೆ.*
ಅರ್ಥಾತ್ *ಮನಸ್ಸಿನ  ಆಂತರ್ಯದಲ್ಲಿರುವ ಕೊಳೆ, ಕಲ್ಮಶಗಳನು ಜ್ಞಾನ ಗಂಗೆಯಿಂದ ತೊಳೆದಾಗ ಬದುಕು ಶುಭ್ರವಾಗುತ್ತದೆ.* ತಥಾ ಮಹಾಗೌರಿಯ ಸ್ಮರಣೆ ಬದುಕನ್ನು ಶುಭ್ರಗೊಳಿಸಿ ಬೆಳಗುತ್ತದೆ.

ಮಹಾಗೌರಿಯು *ನಂದಿ*ಯನ್ನು ವಾಹನವಾಗಿ ಹೊಂದಿದ್ದು. *ಚತುರ್ಭುಜ* ಹೊಂದಿದ್ದಾಳೆ. *ತ್ರಿಶೂಲ ಮತ್ತು ಢಮರು ಹಾಗೂ ಅಭಯಮುದ್ರೆಯನ್ನು  ಧರಿಸಿದ್ದಾಳೆ.*

ಈಕೆಯದು *ಸಾತ್ವಿಕ ರೂಪ.* ಶಾಂತಿ, ಪಾವಿತ್ರ್ಯ, ಪರಿಶುದ್ಧತೆ,  ಸಮೃದ್ಧಿಯನ್ನು ಈಕೆ ಕರುಣಿಸುತ್ತಾಳೆ. ಈಕೆಯನ್ನು *"ಶ್ವೇತಾಂಬರಧರಾ"* ಎಂದೂ ಕರೆಯುತ್ತಾರೆ.

*ಯೋಗದಲ್ಲಿ ಈಕೆ ಯಾವುದೇ ಚಕ್ರವನ್ನು ಪ್ರತಿನಿಧಿಸುವುದಿಲ್ಲ* ಅರ್ಥಾತ್ ಏಳು ಚಕ್ರಗಳು ಕಾಲರಾತ್ರಿ ಅವತಾರದೊಂದಿಗೆ ಸಮಾಪನವಾಗುತ್ತದೆ. ಅಂದರೆ ಯಾವಾಗ ಈ ಏಳೂ  ಚಕ್ರಗಳು ಮನುಷ್ಯನಲ್ಲಿ ಜಾಗೃತವಾಗುತ್ತದೊ ಆವಾಗ ಮನುಷ್ಯ ಪರಿಶುದ್ಧನಾಗುತ್ತಾನೆ. ಆಂತರಿಕವಾಗಿ ಕಲ್ಮಶಗಳು ಜ್ಞಾನಗಂಗೆಯಲಿ ತೊಳೆದು ಮಹಾಗೌರಿಯಂತ ಸಾತ್ವಿಕ ಶುಭ್ರರೂಪು ಧಾರಣೆಯಾಗುತ್ತದೆ. ತಥಾ ಮಹಾಗೌರಿಯ ಆರಾಧನೆ ಮುಖ್ಯವಾಗುತ್ತದೆ.

ಪರ್ವತದ ಸಮೃದ್ಧಿಯನ್ನು ಶೈಲಪುತ್ರಿ ಎಂದು, ಕೃಷಿ ಜ್ಞಾನವೇ ಬ್ರಹ್ಮಚಾರಿಣಿಯೆಂದು, ಬರುವ ಕಷ್ಟವೆದುರಿಸಿ ಶಿವ ಎಂಬ ಸಂತಸವನ್ನು ಪಡೆಯುವುದೇ ಚಂದ್ರಘಂಟಾ ಎಂದು, ಎಲ್ಲಾ ಸವಾಲುಗಳ ಆಚೆ ಯಶಸ್ಸಿನ ಮಂದಹಾಸವೇ ಕೂಷ್ಮಾಂಡವೆಂದು, ಜಗದ ಚಲನೆಗೆ ತಾಯಿ ಮಗುವಿನ ಸೇತುವೇ ಸ್ಕಂದ ಮಾತಾ ಎಂದು, ಎಲ್ಲಾ ಸಮೃದ್ಧಿ ಇದ್ದೂ ಅರಿಷಡ್ವರ್ಗಗಳ ಮೇಲಿನ ಹಿಡಿತವೇ ಕಾತ್ಯಾಯಿನಿ ಎಂದು, ಪ್ರಕೃತಿಯೇ ಸರ್ವವನ್ನು ಕರುಣಿಸುವ ಮತ್ತು ಸರ್ವವನ್ನು ಕಸಿದುಕೊಳ್ಳುವ ಶಕ್ತಿ  ಆ ಶಕ್ತಿಯನ್ನೇ "ಕಾಲರಾತ್ರಿ" ಎಂದು ಪರಿಭಾವಿಸಿದ ಮಾನವ ಶಾಂತ ಶುಭ್ರ ಪ್ರಕೃತಿಯನ್ನು ಮಾನಸಿಕ ಪರಿಶುದ್ಧತೆಯೊಂದಿಗೆ ಸಮೀಕರಿಸಿ ಗೌರಿ ಎಂದು ಕರೆದನು. ಆಕೆಯನ್ನು ಶೈಲಪುತ್ರಿಯ ಮತ್ತೊಂದು ರೂಪವಾಗಿ ಕಂಡುಕೊಂಡನು. ಪರ್ವತವು ಮಣ್ಣಿನಿಂದ ಕೂಡಿದುದಾಗಿ ಗೌರಿಗೆ ಈ ಮಣ್ಣನ್ನೇ ಆರೋಪಿಸಿ ಜನಪದರ ಮೂಲತತ್ವವಾದ ಗೌರಮ್ಮ ಮಣ್ಣಿಂದಲೇ ಮೈದೆಳೆದಳು.
ಪರ್ವತದ ಅಗಾಧತೆ, ನಿತ್ಯಹರಿದ್ವರ್ಣದ ವನರಾಶಿ, ಹರಿದು ಬರುವ ನದಿ ತೊರೆಗಳು ಎಲ್ಲವೂ ಸೇರಿ ಜನಪದರು ಆ ಗೌರಿಯನ್ನು ಸುಮಂಗಲಿಯಂತೆ ಸದಾ ಪೂಜಿಸಿದರು. ಪಾರ್ವತಿ ಎಂಬ ಶೈಲಪುತ್ರಿಯ ರೂಪವು ಗೌರಿಯೊಂದಿಗೆ ಬೆಸೆದುಕೊಂಡು ಗೌರಮ್ಮ ಮನೆಮನೆಯಲ್ಲಿ ಎಲ್ಲಾ ಶಾಸ್ತ್ರ ಸಂಪ್ರದಾಯಗಳಲ್ಲಿ ನಿಕಟವಾಗಿ ಬೆಸೆದುಕೊಂಡಳು.

*ಶ್ವೇತೆ ವೃಷೆ ಸಮಾರೂಢ ಶ್ವೇತಾಂಬರಧರ ಶುಚಿ| ಮಹಾಗೌರಿ ಶುಭಂ ದಧ್ಯಂತ್ರ ಮಹಾದೇವ ಪ್ರಮೋದಾದ||*
ಎಂದು ಪಠಿಸಿ ಫಲವನ್ನು ಪಡೆಯಬಹುದು

ಪರಿಕಲ್ಪನೆ:  "ಯೋಗೀಶ್ ಮಲ್ಲಿಗೆಮಾಡು"

No comments:

Post a Comment

Note: only a member of this blog may post a comment.