Sunday, 23 December 2018

ಕ್ರಿಸ್ಮಸ್ ರಾತ್ರಿ

ಡಿಸೆಂಬರ್ 25ರ ಕ್ರಿಸ್ಮಸ್ ನ ರಾತ್ರಿ. ಮೆಕ್ ಮತ್ತು ರೋಸ್ ದಂಪತಿಗಳು ನಿದ್ದೆ ಹೋಗಿದ್ದರು. ಮನೆಯೊಳಗೆ ಬೆಚ್ಚಗಿನ ವಾತಾವರಣವಿತ್ತು. ಹೊರಗೆ ಥಂಡಿ ಗಾಳಿ ಬೀಸುತ್ತಿತ್ತು. ಸುರಿಯುತ್ತಿದ್ದ ಮಂಜಿನ ನಡುವೆ ಕ್ರಿಸ್ಮಸ್ ಟ್ರೀಗೆ ಹಾಕಿದ್ದ ನಕ್ಷತ್ರ ಬಲ್ಬುಗಳು ಹೊಳೆಯುತ್ತಿತ್ತು.

ಬೆಚ್ಚಗಿದ್ದ ಮನೆಯೊಳಗೆ ತಣ್ಣನೆಯ ಗಾಳಿ ಆವರಿಸುತ್ತಿರುವ ಅನುಭವವಾಗಿ ರೋಸ್ ಎಚ್ಚೆತ್ತಳು. ಯಾಕಿಷ್ಟು ತಂಪಾಗುತ್ತಿದೆ ಎಂದೆಣಿಸುವಷ್ಟರಲ್ಲಿ ಕಿಟಕಿಯ ಬಾಗಿಲು ತಾನಾಗಿಯೇ ಅರ್ಧ ತೆರೆದುಕೊಂಡದ್ದು  ಗಮನಕ್ಕೆ ಬಂತು.

ಕಿಟಕಿಯನ್ನು ಹಾಕೋಣ ಎಂದು ಕಿಟಕಿಯ ಬಳಿ ಎದ್ದು ಬಂದವಳಿಗೆ ಗೋದಲಿಗೆ ಹಾಕಿದ್ದ ಮಿನುಕು ಬೆಳಕಿನ ಝಗಮಗದ ಪ್ರತಿಫಲನದಲ್ಲಿ ದೂರದಲ್ಲಿ ಅದ್ಯಾರೊ ಹೊದ್ದು ಕುಳಿತಂತೆ ಕಾಣಿಸಿತು. "ಸ್ನೋ ಬೀಳುತ್ತಿರುವ ಈ ಥಂಡೀ ಹೊತ್ತಲ್ಲಿ ಯಾರಿದು" ಎಂದು ತನಗೆ ತಾನೆ ಹೇಳಿಕೊಂಡು ಮೆಕ್ ಅನ್ನು ಕರೆದು ತಿಳಿಸಿದಳು.

ಮೆಕ್ ಬಾಗಿಲು ತೆರೆದು "ಹೇ, ಕಮ್ಮಿನ್. ಇಟ್ಸ್ ಕೋಲ್ಡ್ ಔಟ್ಸೈಡ್" ಎಂದು ಆತನನ್ನು ಒಳ ಕರೆದ. ಹೊದಿಕೆಯನ್ನು ಮತ್ತಷ್ಟು ಬಿಗಿಯಾಗಿ ಹೊದ್ದು ಮುದುಕ ಕೋಲೂರುತ್ತಾ ಮೆಕ್ ನ ಮನೆಯ ಬಾಗಿಲ ಮುಂದೆ ಬಂದು ನಿಂತುಕೊಂಡ.

"ಬನ್ನಿ ಒಳಗೆ. ಹೊರಗೆ ತುಂಬಾ ಥಂಡಿ ಇದೆ" ಎನ್ನುತ್ತಾ ಮೆಕ್ ಮುದುಕನನ್ನು ಒಳಗೆ ಕರೆದುಕೊಂಡು ಬಾಗಿಲು ಹಾಕಿದ. ಶೀತಲವಾಗಿದ್ದ ವಾತಾವರಣ ಒಮ್ಮೆಗೆ ಬೆಚ್ಚಗಾದ ಅನುಭವವಾಯಿತು. ಮುದುಕನ ಮುಖದಲ್ಲಿ ಒಂದು ಕಾಂತಿ, ಕಣ್ಣಲ್ಲಿ ತೇಜಸ್ಸನ್ನು ನೋಡಿದ ಮೆಕ್ ದಂಪತಿಗೆ ಆ ಮಂದ ಬೆಳಕಿನ  ಮನೆಯೊಳಗೆ ದಿವ್ಯ ಪ್ರಕಾಶವಾದ ಅನುಭವವಾಯಿತು.

ಯಾರು ನೀವು? ಈ ವಿಂಟರ್ ರಾತ್ರಿಯಲ್ಲಿ ಎಲ್ಲಿಗೆ ಹೊರಟಿದ್ದೀರಿ ರೋಸ್ ಆಪ್ಯಾಯವಾಗಿ ಕೇಳಿದಳು. ಮುದುಕ ನಗುತ್ತಾ ಹೇಳಿದ "ನಾನು ಲವ್". "ಲವ್... ನಿಮ್ಮ ಹೆಸರೆ?" ಮೆಕ್ ಪ್ರಶ್ನಾರ್ಥಕವಾಗಿ ಕೇಳಿದ್ದ. "ಹೌದು, ಅನಾದಿ ಕಾಲದಿಂದಲೂ ನಾನಿಲ್ಲಿದ್ದೇನೆ. ಕ್ರಿಸ್ತನ ಸಂದೇಶ ನಾನೆ. ಆದರೆ ಇಂದು ಎಲ್ಲರ ಹೃದಯದಿಂದ ನನ್ನನ್ನು ಹೊರಗೆಸೆದಿದ್ದಾರೆ. ಹಾಗಾಗಿಯೇ ನಾನು ಥಂಡಿ ರಾತ್ರಿಯಲ್ಲಿ ಹೊರಗಡೆ ತಿರುಗಾಡುತ್ತಿದ್ದೇನೆ. ಯಾರು ನನ್ನನ್ನು ಒಳಗೆ ಕರೆದುಕೊಳ್ಳುತ್ತಾರೊ ಅವರ ಹೃದಯವನ್ನು ಭಾವವನ್ನು ಬೆಚ್ಚಗಿಡುತ್ತೇನೆ. ಎಲ್ಲಿ ನಾನಿಲ್ಲವೊ ಅಲ್ಲಿ ಶೀತಲ ಸಂಕಟ." ಪ್ರೀತಿ ತುಂಬಿ ಮುದುಕ ನುಡಿಯುತ್ತಿದ್ದ.

ಮೆಕ್ ಮತ್ತು ರೋಸ್ ಕಣ್ಣುಗಳು ತುಂಬಿಕೊಂಡಿದ್ದವು. ಕಣ್ಣೀರುಗಳು ತಣ್ಣಗಿಲ್ಲ, ಬೆಚ್ಚಗಿದೆ. ಏಕೆಂದರೆ ಅವುಗಳು ಪ್ರೀತಿಯಿಂದ ನಮ್ಮ ಬಗ್ಗೆ ಅಥವಾ ಇನ್ನೊಬ್ಬರ ಬಗ್ಗೆ ವ್ಯಥೆಯುಂಟಾದಾಗ ಬರುವಂತದ್ದು. ಬೆಚ್ಚಗಿನ ಭಾವ! ಕಣ್ಣೀರ ಒರೆಸಿ ನೋಡುವಾಗ ಮುದುಕ ಮಾಯವಾಗಿದ್ದ!! ಮೆಕ್ ದಂಪತಿಯ ಹೃದಯದಲ್ಲಿ ಪ್ರೀತಿ ತುಂಬಿತ್ತು!!! ಗೋದಲಿಯಲ್ಲಿದ್ದ ಕ್ರಿಸ್ತ ನಗುತ್ತಿದ್ದ.

ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Saturday, 22 December 2018

ಹೀ'ಗೇ'ಕೆ ?

ಮಗನ ಪ್ರೀತಿಯನ್ನು ಮನೆಯಲ್ಲಿ ತಿರಸ್ಕರಿಸಲಾಗಿತ್ತು. ಮನೆಯಲ್ಲಿ ನೀರವ ಮೌನ. ಆಕೆ ತನ್ನ ಕೈಯಲ್ಲಿರುವ ಡೈರಿಯಲ್ಲಿನ ಆ ಪುಟವನ್ನೇ ದಿಟ್ಟಿಸುತ್ತಾ ಕೂತಿದ್ದಾಳೆ. ಅದರಲ್ಲಿ ಹೀಗೆಂದು ಬರೆದಿತ್ತು. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."

ಅವಳಿಗೆ ಅವಳ ಪ್ರೀತಿಯ ದಿನಗಳ ನೆನಪಾಯಿತು. ಮನೆಯಲ್ಲಿ ಧರ್ಮ ಜಾತಿಯ ಕಾರಣ ಅವಳ ಪ್ರೀತಿಯನ್ನು ಒಪ್ಪಲಿಲ್ಲ. ಅಪ್ಪ ಬೇರೆ ಹುಡುಗನನ್ನು ನೋಡುವ ತಯಾರಿಯಲ್ಲಿದ್ದರು. ಆಕೆ ಪ್ರೀತಿಸಿದವನೊಂದಿಗೆ ಓಡಿ ಹೋಗಿ ಬದುಕು ಕಟ್ಟಿಕೊಂಡಳು. ಆಗ ಆ ಡೈರಿಯ ಪುಟದಲ್ಲಿ ಹಾಗೆಂದು ಬರೆದಿದ್ದಳು. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."

ಪ್ರೀತಿಸುವವನೊಂದಿಗೆ ಬದುಕು ಕಟ್ಟಿಕೊಂಡ ಆಕೆಗೆ ಒಂದು ಗಂಡು ಮಗುವೂ ಆಯಿತು. ಸುಖಿ ಕುಟುಂಬ. ಕಾಲ ಓಡಿದ್ದೇ ತಿಳಿಯಲಿಲ್ಲ. ಮಗನಿಗೀಗ 25 ವರ್ಷ. ಆತ ಹೆತ್ತವರೆದುರು ಬಂದು ನಿಂತು ತನ್ನ ಪ್ರೀತಿಯ ಬಗ್ಗೆ ಹೇಳಿದ್ದಾನೆ. ಆತನಿಗೆ ತನ್ನ ಗೆಳೆಯನ ಮೇಲೆ ಪ್ರೇಮಾಂಕುರವಾಗಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು.

ಮನೆಯಲ್ಲಿ ಪ್ರೀತಿಯನ್ನು ನಿರಾಕರಿಸಲಾಯಿತು. ಕಾರಣ ಜಾತಿ ಬೇರೆ ಎನ್ನುವುದಲ್ಲ, ಧರ್ಮ ಬೇರೆ ಎನ್ನುವುದಲ್ಲ, ಲಿಂಗ ಒಂದೇ ಎನ್ನುವುದು!!

ದಿಟ್ಟಿಸುತ್ತಿದ್ದ ಪುಟವನ್ನು ಆಕೆ ಹರಿದು ಹಾಕಿದಳು. ಮಗ ಒಳಗೆ ಕೋಣೆಯಲ್ಲಿ ಕೂತು ಬರೆಯುತ್ತಿದ್ದಾನೆ. "ಪ್ರೀತಿಗೆ ಬೇಕಿರುವುದು ಎರಡು ಮನಸ್ಸುಗಳ ಒಪ್ಪಿಗೆ ಮಾತ್ರ. ಪ್ರೀತಿಗೆ ಯಾವ ಬಂಧನಗಳೂ ಇಲ್ಲ."

ಯೋಗೀಶ್ ಮಲ್ಲಿಗೆಮಾಡು

Thursday, 20 December 2018

ಅಪರಿಚಿತ ಅಭಿಮಾನಿ

ಆಕೆ ಅಮೋಘವಾದ ನೃತ್ಯ ಮಾಡಿ ಹೊರಟು ಹೋಗಿದ್ದಳು.
ಚಪ್ಪಾಳೆಯ ಸದ್ದು ರಂಗ ಮಂದಿರದ ತುಂಬಾ ಇನ್ನೂ ಮೊಳಗುತ್ತಲೇ ಇದ್ದವು. ಆಕೆಯ ನೃತ್ಯಕ್ಕೆ ಆತ ಮನಸೋತಿದ್ದ. ಅವಳ ಕಾಲಗೆಜ್ಜೆ ಅಲ್ಲೇ ವೇದಿಕೆಯ ಮೇಲೆ ಜಾರಿ ಬಿದ್ದಿತ್ತು.
ಅವನು ಅದನ್ನು ಹೆಕ್ಕಿಕೊಂಡ!

ಆತ ಆಕೆಯ ಆಪ್ತ ಸಹಾಯಕನಾಗಿದ್ದರಿಂದ ಎಂದಿಗೂ ಅವಳೆದುರು ಪ್ರೇಮ ನಿವೇದನೆ ಮಾಡಿಕೊಳ್ಳುವ ಧೈರ್ಯವನ್ನು ಆತ ಮಾಡಲಿಲ್ಲ. ಆದರೆ ತನ್ನ ಪ್ರೇಮದ ಮಾತುಗಳನ್ನು ಆಕೆಗೆ ಅಪರಿಚಿತ ಅಭಿಮಾನಿಯಂತೆ ಪತ್ರ ಬರೆದು ತಿಳಿಸುತ್ತಿದ್ದ!

ಅವಳಾದರೂ ಆಪ್ತ ಸಹಾಯಕನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅವಳ ಪ್ರತಿ ನೃತ್ಯವೂ ಅವನಿಗೇ ಅರ್ಪಣೆ ಎಂದು ಭಾವಿಸಿ ನರ್ತಿಸುತ್ತಿದ್ದಳು. ಆದರೆ ಅವನ ಸಮ್ಮುಖ ಎಂದೂ ತನ್ನ ಪ್ರೇಮವನ್ನು ನಿವೇದಿಸಲೇ ಇಲ್ಲ!!

ಹೀಗೆ ಇಬ್ಬರೂ ಇಬ್ಬರಿಗೂ ತಿಳಿಯದಂತೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು! ಆದರೆ ಇದು ಯಾರೊ ಅಪರಿಚಿತ ಅಭಿಮಾನಿ. ಪ್ರೀತಿ ಪ್ರೇಮವೆಂದು ಪತ್ರ ಬರೆಯುತ್ತಿದ್ದಾನೆ. ಈ ಅಪರಿಚಿತ ಅಭಿಮಾನಿಯ ಪತ್ರ ಆಕೆಗೆ ಇರುಸುಮುರುಸನ್ನು ಉಂಟು ಮಾಡಿತ್ತು. ತನ್ನ ಮತ್ತು ಆಪ್ತ ಸಹಾಯಕನ ನಡುವೆ ಈ ಅಪರಿಚಿತ ಅಭಿಮಾನಿಯು ತೊಡಕು ಎನ್ನಿಸುತ್ತಿದ್ದ. ಆತನ ಬಳಿ ತನ್ನ ಕಾಲ್ಗೆಜ್ಜೆ ಇದೆ ಎನ್ನುವುದು ಆಕೆಗೆ ಇನ್ನಷ್ಟು ಹಿಂಸೆ ಅನ್ನಿಸಿತ್ತು.

ಒಂದಿ ದಿನ ಆ ಅಪರಿಚಿತ ಅಭಿಮಾನಿಗೆ ಪ್ರತ್ಯುತ್ತರ ಬರೆದಳು. "ನಿನ್ನ ಪ್ರೀತಿ ನಿಜವಾದರೆ ನನಗಾಗಿ ನಿನ್ನ ಪ್ರಾಣ ಕೊಟ್ಟು ತೋರಿಸು, ಮೆಚ್ಚುವೆ ನಿನ್ನ ಪ್ರೀತಿಯನ್ನು!"

ಮರುದಿನ ಬೆಳಗ್ಗೆ ಆಕೆಗೆ ಸುದ್ದಿ ಬಂತು. ಆಪ್ತ ಸಹಾಯಕ ಆತ್ಮಹತ್ಯೆ ಮಾಡಿದ್ದಾನೆ. ಆಕೆ ಅತೀವಾ ದುಃಖದಿಂದ ಅವನ ಕೋಣೆಗೆ ಓಡಿ ಹೋಗಿ ನೋಡಿದಳು. ವಿಷದ ಬಾಟಲಿ ಮಂಚದ ಕೆಳಗೆ ಉರುಳಿ ಬಿದ್ದಿದೆ. ಅವಳ ಬರುವಿಕೆಗೇ ಕಾಯುವಂತೆ ತೆರೆದ ಕಣ್ಣಲ್ಲೇ ಸಾವನ್ನಪ್ಪಿದ್ದ.

ಆಕೆ ಒಂದು ಬಾರಿ ನಡುಗಿ ಹೋದಳು. ಛಿಟಾರನೆ ಚೀರಿದಳು. ಆತನ ಕೈಯಲ್ಲಿ ಕಾಲ್ಗೆಜ್ಜೆ ಇತ್ತು. ಉಸಿರು ನಿಂತ ಅವನ ನಿಶ್ಚಲ ದೇಹ ಹೇಳಿದ್ದು ಒಂದೆ, " ನಾನೇ ಆ ಅಪರಿಚಿತ ಅಭಿಮಾನಿ". ಕಾಲ ಸ್ತಂಭಿಸಿತು !!!

ಯೋಗೀಶ್ ಮಲ್ಲಿಗೆಮಾಡು

Sunday, 16 December 2018

ಕೊಟ್ಟ ಮಾತು

"ನಾನು ಸತ್ತರೂ ನಿನ್ನೊಂದಿಗೆ ಇರುತ್ತೇನೆ" ಎಂದು ಅವನು ಅವಳಿಗೆ ಮಾತು ಕೊಟ್ಟಿದ್ದ...
ಪ್ರೀತಿಯಲ್ಲಿ ಮೋಸ ಮಾಡಿದ ಆಕೆ ಅವನಿಗೆ ಕೈಕೊಟ್ಟಳು...
ಅವಳ ನೆನಪಲ್ಲಿ ಅವನು ಪ್ರಾಣ ಕಳೆದುಕೊಂಡ...
ಇನ್ನೊಬ್ಬನ ಮದುವೆಯಾದ ಆಕೆ ಬದುಕು ಕಂಡುಕೊಂಡಳು...
ಅದೆಷ್ಟೋ ವರುಷಗಳ ಮೇಲೆ ಹೊಸ ಮನೆಯ ಕಟ್ಟಿಸಿ ಗಂಡನೊಂದಿಗೆ ಮನೆ ತುಂಬಾ ಸಂಭ್ರಮಿಸಿದಳು ಅವಳು...
ಮನೆಯ ಅಡಿಪಾಯದ ಕೆಳಗೆಲ್ಲೋ ಅವನು ಗೋರಿಯಲ್ಲಿ ಮಗ್ಗುಲು ಬದಲಿಸಿ ಮಲಗಿದ್ದ...
"ನಾನು ಸತ್ತರೂ ನಿನ್ನೊಂದಿಗೆ ಇರುತ್ತೇನೆ" ಎಂದು ಅವನು ಕೊಟ್ಟ ಮಾತು ಈಡೇರಿಸಿದ್ದ...
ಆದರೆ ಅವಳಿಗದು ಗೊತ್ತೇ ಆಗಲಿಲ್ಲ...
         ಯೋಗೀಶ್ ಮಲ್ಲಿಗೆಮಾಡು

Wednesday, 5 December 2018

ನನ್ನ ಅಮ್ಮ

ಮನೆಯ ಬೇಲಿ ಸಾಲಿನ ಬಳ್ಳಿಗಿಡಗಳ
ಸರಿ ಮಾಡಿದವಳು ನನ್ನಮ್ಮ.

ಅಂಗಳಕ್ಕೆ ಸೆಗಣಿ ಸಾರಿ
ಚೆಂದದ ರಂಗೋಲಿ ಇಟ್ಟವಳು ನನ್ನಮ್ಮ.

ಹೊಸ್ತಿಲಂಚಿಗೆ ಹೂವು, ಮನೆಯ ತೋರಣಕೆ
ಹಸಿರೆಲೆ ಕಟ್ಟಿದವಳು ನನ್ನಮ್ಮ.

ದೀಪ ಮುಡಿಸಿ ಮನೆಯ ಬೆಳಗಿಸಿ
ಮನೆಯಾಗಿಸಿದವಳು ನನ್ನಮ್ಮ.

ಅನ್ನ ಬಸಿದು, ಚಟ್ನಿ ನುರಿದು,
ತುತ್ತು ಉಣಿಸಿದವಳು ನನ್ನಮ್ಮ.

ಮಾಡಿದಷ್ಟೂ ಕೆಲಸ, ಮುಗಿಯಿತೆಂದು
ಉಸ್ ಎನ್ನದವಳು ನನ್ನಮ್ಮ.

ಮನೆಯೆಲ್ಲಾ ಮಲಗಿದರೂ
ಅಡುಗೆ ಮನೆಯ ಪಾತ್ರೆ ಸದ್ದಾಗಿಸುವವಳು ನನ್ನಮ್ಮ.

ಸರಿರಾತ್ರಿವರೆಗೂ ಬೀಡಿ ಸೂಪನಿಟ್ಟು
ಬೀಡಿ ತಿರುಗಿಸಿದವಳು ನನ್ನಮ್ಮ.

ಇಂದು ಮನೆಯಲ್ಲಿ ಅಮ್ಮನ ಕೈಬಳೆಯ ಸದ್ದಿಲ್ಲ,
ಎದೆಯಲ್ಲಿ ಅಮ್ಮ ಹಚ್ಚಿದ ಹಣತೆ ಮಾತ್ರ ಇನ್ನೂ ಬೆಳಗಿದೆ!!

ಯೋಗೀಶ್ ಮಲ್ಲಿಗೆಮಾಡು