ಆಕೆ ಅಮೋಘವಾದ ನೃತ್ಯ ಮಾಡಿ ಹೊರಟು ಹೋಗಿದ್ದಳು.
ಚಪ್ಪಾಳೆಯ ಸದ್ದು ರಂಗ ಮಂದಿರದ ತುಂಬಾ ಇನ್ನೂ ಮೊಳಗುತ್ತಲೇ ಇದ್ದವು. ಆಕೆಯ ನೃತ್ಯಕ್ಕೆ ಆತ ಮನಸೋತಿದ್ದ. ಅವಳ ಕಾಲಗೆಜ್ಜೆ ಅಲ್ಲೇ ವೇದಿಕೆಯ ಮೇಲೆ ಜಾರಿ ಬಿದ್ದಿತ್ತು.
ಅವನು ಅದನ್ನು ಹೆಕ್ಕಿಕೊಂಡ!
ಆತ ಆಕೆಯ ಆಪ್ತ ಸಹಾಯಕನಾಗಿದ್ದರಿಂದ ಎಂದಿಗೂ ಅವಳೆದುರು ಪ್ರೇಮ ನಿವೇದನೆ ಮಾಡಿಕೊಳ್ಳುವ ಧೈರ್ಯವನ್ನು ಆತ ಮಾಡಲಿಲ್ಲ. ಆದರೆ ತನ್ನ ಪ್ರೇಮದ ಮಾತುಗಳನ್ನು ಆಕೆಗೆ ಅಪರಿಚಿತ ಅಭಿಮಾನಿಯಂತೆ ಪತ್ರ ಬರೆದು ತಿಳಿಸುತ್ತಿದ್ದ!
ಅವಳಾದರೂ ಆಪ್ತ ಸಹಾಯಕನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಅವಳ ಪ್ರತಿ ನೃತ್ಯವೂ ಅವನಿಗೇ ಅರ್ಪಣೆ ಎಂದು ಭಾವಿಸಿ ನರ್ತಿಸುತ್ತಿದ್ದಳು. ಆದರೆ ಅವನ ಸಮ್ಮುಖ ಎಂದೂ ತನ್ನ ಪ್ರೇಮವನ್ನು ನಿವೇದಿಸಲೇ ಇಲ್ಲ!!
ಹೀಗೆ ಇಬ್ಬರೂ ಇಬ್ಬರಿಗೂ ತಿಳಿಯದಂತೆ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು! ಆದರೆ ಇದು ಯಾರೊ ಅಪರಿಚಿತ ಅಭಿಮಾನಿ. ಪ್ರೀತಿ ಪ್ರೇಮವೆಂದು ಪತ್ರ ಬರೆಯುತ್ತಿದ್ದಾನೆ. ಈ ಅಪರಿಚಿತ ಅಭಿಮಾನಿಯ ಪತ್ರ ಆಕೆಗೆ ಇರುಸುಮುರುಸನ್ನು ಉಂಟು ಮಾಡಿತ್ತು. ತನ್ನ ಮತ್ತು ಆಪ್ತ ಸಹಾಯಕನ ನಡುವೆ ಈ ಅಪರಿಚಿತ ಅಭಿಮಾನಿಯು ತೊಡಕು ಎನ್ನಿಸುತ್ತಿದ್ದ. ಆತನ ಬಳಿ ತನ್ನ ಕಾಲ್ಗೆಜ್ಜೆ ಇದೆ ಎನ್ನುವುದು ಆಕೆಗೆ ಇನ್ನಷ್ಟು ಹಿಂಸೆ ಅನ್ನಿಸಿತ್ತು.
ಒಂದಿ ದಿನ ಆ ಅಪರಿಚಿತ ಅಭಿಮಾನಿಗೆ ಪ್ರತ್ಯುತ್ತರ ಬರೆದಳು. "ನಿನ್ನ ಪ್ರೀತಿ ನಿಜವಾದರೆ ನನಗಾಗಿ ನಿನ್ನ ಪ್ರಾಣ ಕೊಟ್ಟು ತೋರಿಸು, ಮೆಚ್ಚುವೆ ನಿನ್ನ ಪ್ರೀತಿಯನ್ನು!"
ಮರುದಿನ ಬೆಳಗ್ಗೆ ಆಕೆಗೆ ಸುದ್ದಿ ಬಂತು. ಆಪ್ತ ಸಹಾಯಕ ಆತ್ಮಹತ್ಯೆ ಮಾಡಿದ್ದಾನೆ. ಆಕೆ ಅತೀವಾ ದುಃಖದಿಂದ ಅವನ ಕೋಣೆಗೆ ಓಡಿ ಹೋಗಿ ನೋಡಿದಳು. ವಿಷದ ಬಾಟಲಿ ಮಂಚದ ಕೆಳಗೆ ಉರುಳಿ ಬಿದ್ದಿದೆ. ಅವಳ ಬರುವಿಕೆಗೇ ಕಾಯುವಂತೆ ತೆರೆದ ಕಣ್ಣಲ್ಲೇ ಸಾವನ್ನಪ್ಪಿದ್ದ.
ಆಕೆ ಒಂದು ಬಾರಿ ನಡುಗಿ ಹೋದಳು. ಛಿಟಾರನೆ ಚೀರಿದಳು. ಆತನ ಕೈಯಲ್ಲಿ ಕಾಲ್ಗೆಜ್ಜೆ ಇತ್ತು. ಉಸಿರು ನಿಂತ ಅವನ ನಿಶ್ಚಲ ದೇಹ ಹೇಳಿದ್ದು ಒಂದೆ, " ನಾನೇ ಆ ಅಪರಿಚಿತ ಅಭಿಮಾನಿ". ಕಾಲ ಸ್ತಂಭಿಸಿತು !!!
ಯೋಗೀಶ್ ಮಲ್ಲಿಗೆಮಾಡು
No comments:
Post a Comment
Note: only a member of this blog may post a comment.