ಅವಳೊಬ್ಬ ಪ್ರಬುದ್ಧ ಜನಪ್ರಿಯ ಪತ್ರಕರ್ತೆ. ಅವಳು ಖ್ಯಾತ ಅಂಕಣದಿಂದ ಮನೆಮಾತಾಗಿದ್ದಳು. ಅವಳ ಅಂಕಣ ಪ್ರಕಟಗೊಂಡ ದಿನ ಪತ್ರಿಕೆ ಹೆಚ್ಚು ಮಾರಾಟವಾಗುತ್ತಿತ್ತು.
ಆ ದಿನ ಅವಳೊಂದು ಅಂತರಿಕ್ಷದ ಲೇಖನ ಬರೆದಿದ್ದಳು. ಚಂದಿರನಲ್ಲಿಗೆ ಕಾಲಿಟ್ಟು ಬಂದವನನ್ನು ತಾನು ವರಿಸಬೇಕೆಂಬುವುದು ಅವಳ ಕನಸಾಗಿತ್ತು ಎಂದು ಬರೆದುಕೊಂಡಿದ್ದಳು!
ಅವನು ಆ ಅಂಕಣವನ್ನು ಓದಿದ್ದ. ಆತ ಖ್ಯಾತ ವಿಜ್ಞಾನಿಯಾಗಿದ್ದ. ಅವಳ ಲೇಖನಗಳಿಂದ ಪ್ರಭಾವಿತನಾಗುತ್ತಿದ್ದ. ಚಂದಿರನಲ್ಲಿಗೆ ಹೋಗುವ ಛಲ ಹುಟ್ಟಿತು.
ಅವಿರತ ಪ್ರಯತ್ನದ ಫಲವಾಗಿ ರಾಕೇಟು ಆತನನ್ನು ಚಂದ್ರನಲ್ಲಿಗೆ ಹೊತ್ತೊಯ್ದಿತ್ತು!!
ವಾರಗಳ ಅಧ್ಯಯನದ ತರುವಾಯ ಆತ ಮರಳಿ ಬಂದಿದ್ದ. ಹಾಗೆ ಮರಳುವ ಹೊತ್ತಲ್ಲಿ ಅತ್ಯಮೂಲ್ಯ ವಸ್ತುವೊಂದನ್ನು ಅಲ್ಲೇ ಮರೆತು ಬಂದಿದ್ದ!
ಅದು ಹೇಗೊ ಸುದ್ದಿ ಸಂಸ್ಥೆಗೆ ಈ ವಿಚಾರ ತಿಳಿಯಿತು. ಆಕೆ ಒಂದು ಲೇಖನ ಪ್ರಕಟಿಸಿದಳು.
"ಅತ್ಯಮೂಲ್ಯ ವಸ್ತು ಮರೆತು ಬಂದ ಅಂತರಿಕ್ಷ ಯಾನಿ".
ಓದಿದ ಅವನು ಸಣ್ಣಗೆ ನಕ್ಕು ಅವಳಿಗೆ ಕರೆ ಮಾಡಿದ.
ಮರೆತದ್ದೇನೊ ಹೌದು ಆದರೆ ಅದೊಂದು ಪತ್ರವಾಗಿತ್ತು. ಹೇಳಿದನವನು.
"ಅಂತದ್ದೇನಿತ್ತು?"ಎಂಬ ಅವಳ ಪ್ರಶ್ನೆಗೆ
"ಚಂದ್ರನಲ್ಲಿ ಇಳಿದವನ ವರಿಸುವೆ ಎಂದಿರಿ. ಮದುವೆಯಾಗುವಿರಾ ಎಂಬ ಸಾಲುಗಳ ಪತ್ರ ಎಂದು ಉತ್ತರಿಸಿದ್ದ.
ಅವಳ ಕೆನ್ನೆಗೆ ಲಜ್ಜೆಯ ಕೆಂಪೇರಿತ್ತು. ಕಿಟಕಿಯೆಡೆಗೆ ನೋಡಿದಳು. ಆಗಸದಲ್ಲಿ ಅಂದು ಹುಣ್ಣಿಮೆಯ ಚಂದ್ರ. ಪತ್ರ ಓದಿದ ಚಂದ್ರ ನಕ್ಕಂತಿತ್ತು.
ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)