Sunday, 22 September 2019

ಅಂತರಿಕ್ಷ ಪ್ರೀತಿ

ಅವಳೊಬ್ಬ ಪ್ರಬುದ್ಧ ಜನಪ್ರಿಯ ಪತ್ರಕರ್ತೆ. ಅವಳು ಖ್ಯಾತ ಅಂಕಣದಿಂದ ಮನೆಮಾತಾಗಿದ್ದಳು. ಅವಳ ಅಂಕಣ ಪ್ರಕಟಗೊಂಡ ದಿನ ಪತ್ರಿಕೆ ಹೆಚ್ಚು ಮಾರಾಟವಾಗುತ್ತಿತ್ತು.

ಆ ದಿನ ಅವಳೊಂದು ಅಂತರಿಕ್ಷದ ಲೇಖನ ಬರೆದಿದ್ದಳು. ಚಂದಿರನಲ್ಲಿಗೆ ಕಾಲಿಟ್ಟು ಬಂದವನನ್ನು ತಾನು ವರಿಸಬೇಕೆಂಬುವುದು ಅವಳ ಕನಸಾಗಿತ್ತು ಎಂದು ಬರೆದುಕೊಂಡಿದ್ದಳು!

ಅವನು ಆ ಅಂಕಣವನ್ನು ಓದಿದ್ದ. ಆತ ಖ್ಯಾತ ವಿಜ್ಞಾನಿಯಾಗಿದ್ದ. ಅವಳ ಲೇಖನಗಳಿಂದ ಪ್ರಭಾವಿತನಾಗುತ್ತಿದ್ದ. ಚಂದಿರನಲ್ಲಿಗೆ ಹೋಗುವ ಛಲ ಹುಟ್ಟಿತು.

ಅವಿರತ ಪ್ರಯತ್ನದ ಫಲವಾಗಿ ರಾಕೇಟು ಆತನನ್ನು ಚಂದ್ರನಲ್ಲಿಗೆ ಹೊತ್ತೊಯ್ದಿತ್ತು!!

ವಾರಗಳ ಅಧ್ಯಯನದ ತರುವಾಯ ಆತ ಮರಳಿ ಬಂದಿದ್ದ. ಹಾಗೆ ಮರಳುವ ಹೊತ್ತಲ್ಲಿ ಅತ್ಯಮೂಲ್ಯ ವಸ್ತುವೊಂದನ್ನು ಅಲ್ಲೇ ಮರೆತು ಬಂದಿದ್ದ!

ಅದು ಹೇಗೊ ಸುದ್ದಿ ಸಂಸ್ಥೆಗೆ ಈ ವಿಚಾರ ತಿಳಿಯಿತು. ಆಕೆ ಒಂದು ಲೇಖನ ಪ್ರಕಟಿಸಿದಳು.
"ಅತ್ಯಮೂಲ್ಯ ವಸ್ತು ಮರೆತು ಬಂದ ಅಂತರಿಕ್ಷ ಯಾನಿ".

ಓದಿದ ಅವನು ಸಣ್ಣಗೆ ನಕ್ಕು ಅವಳಿಗೆ ಕರೆ ಮಾಡಿದ.

ಮರೆತದ್ದೇನೊ ಹೌದು ಆದರೆ ಅದೊಂದು ಪತ್ರವಾಗಿತ್ತು. ಹೇಳಿದನವನು.

"ಅಂತದ್ದೇನಿತ್ತು?"ಎಂಬ ಅವಳ ಪ್ರಶ್ನೆಗೆ
"ಚಂದ್ರನಲ್ಲಿ ಇಳಿದವನ ವರಿಸುವೆ ಎಂದಿರಿ. ಮದುವೆಯಾಗುವಿರಾ ಎಂಬ ಸಾಲುಗಳ ಪತ್ರ ಎಂದು ಉತ್ತರಿಸಿದ್ದ.

ಅವಳ ಕೆನ್ನೆಗೆ ಲಜ್ಜೆಯ ಕೆಂಪೇರಿತ್ತು. ಕಿಟಕಿಯೆಡೆಗೆ ನೋಡಿದಳು. ಆಗಸದಲ್ಲಿ ಅಂದು ಹುಣ್ಣಿಮೆಯ ಚಂದ್ರ. ಪತ್ರ ಓದಿದ ಚಂದ್ರ ನಕ್ಕಂತಿತ್ತು.

ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Saturday, 21 September 2019

ಬೀಸುಗಾಳಿ ಮತ್ತು ದೀಪ

ಅವರಿಬ್ಬರೂ ಬದುಕಿನ ಹಾದಿಯಲ್ಲಿ ಮುಖಾಮುಖಿಯಾಗಿದ್ದರು. ಇಬ್ಬರೂ ಬದುಕು ಕಟ್ಟುವ ಛಲದಲ್ಲಿದ್ದವರು. ಇಬ್ಬರ ಕಣ್ಣಲ್ಲೂ ಸಾವಿರ ಕನಸಿನ ಬಣ್ಣಗಳು.

ಅವನು ಅವನನ್ನು ಪರಿಚಯಿಸಿಕೊಂಡ. ನಾನು ಬೀಸುಗಾಳಿಗೆ ಮೈಯೊಡ್ಡಿರುವವನು. ಬಿರುಗಾಳಿಗೂ ಎದೆಯೊಡ್ಡಿ ಬದುಕು ಕಟ್ಟಬೇಕೆಂದಿರುವವನು.

ಅವಳೂ ಅವಳನ್ನು ಪರಿಚಯಿಸಿಕೊಂಡಳು. ನಾನು ನೋಡು ದೀಪ ಹಿಡಿದವಳು. ಈ ದೀಪದಿಂದಲೇ ಬದುಕು ಬೆಳಗಿಸಬೇಕೆಂದು ಹೊರಟಿರುವವಳು.

ಇಬ್ಬರೂ ಬದುಕು ಕಟ್ಟುವವರಾದ್ದರಿಂದ ಜೊತೆಗೆ ನಡೆಯೋಣ ಎಂದುಕೊಂಡರು. ಆದರೆ, ಅವನೊಡನೆ ಹೊರಟರೆ ಬೀಸುಗಾಳಿಗೆ ಎದುರಾಗಬೇಕು. ಅವಳ ಕೈಯ ದೀಪವಾರುತ್ತದೆ. ಅದು ಅವಳ ಸಿದ್ಧಾಂತವಲ್ಲ!

ಅವಳೊಂದಿಗೆ ಹೆಜ್ಜೆ ಹಾಕಬೇಕೆಂದರೆ ಗಾಳಿಗೆ ಬೆನ್ನಾಗಿ ನಡೆಯಬೇಕು. ಅದು ಅವನ ಸಿದ್ಧಾಂತವಲ್ಲ!!

ಬೇರೆ ಉಪಾಯ ತೋರದೆ ಇಬ್ಬರೂ ತಮ್ಮ ತಮ್ಮ ದಾರಿ ಕಂಡುಕೊಳ್ಳುವ ಸನ್ನಹದಲ್ಲಿದ್ದರು.

ದೂರವಾಗಲು ಅನುವಾದರು. ಆಗ ಅವನು ಕೇಳಿಕೊಂಡ.

"ನೀ ನನ್ನ ಬೆನ್ನಿಗೆ ನಿಂತುಕೊಳ್ಳುವೆಯಾ? ನೀ ಬೆನ್ನಿಗಿದ್ದರೆ ಎಂಥಾ ಬೀಸುಗಾಳಿಯನ್ನಾದರೂ ಬಂಡೆಯಂತೆ ಎದುರಿಸಬಲ್ಲೆ. ಬೆನ್ನ ಹಿಂದಿರುವ ನಿನ್ನ ಕೈಯ ಪುಟ್ಟ ದೀಪ ಆರದಂತೆ ತಡೆಯ ಬಲ್ಲೆ."

ಬದುಕು ಕಟ್ಟಿಕೊಂಡಿತು.

ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Friday, 20 September 2019

ಗೆಜ್ಜೆಪಾದದ ಹುಡುಗಿ

ಆವತ್ತು ಅವನು ಆ ಪಾದ ಮತ್ತು ಗೆಜ್ಜೆಯನ್ನು ಮೂರನೆ ಬಾರಿಗೆ ನೋಡಿದ್ದ. ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಮೇಲೇಳುವಾಗ ಆಕೆ ಹಾಗೆ ನಡೆದು ಹೋಗಿದ್ದಳು. ಈ ಹಿಂದೆಯೂ ಕಂಡಿದ್ದು ಅದೇ ಪಾದ, ಅದೇ ಗೆಜ್ಜೆ. ಆದರೆ ಅವಳ್ಯಾರು ಎಂದು ನೋಡುವಷ್ಟರಲ್ಲಿ ಮರೆಯಾಗಿದ್ದಳು.

ಮೇಲೆದ್ದು ದೇವರ ಮೂರ್ತಿಯ ಮುಂದೆ ಬಿನ್ನವಿಸಿಕೊಂಡಿದ್ದ "ಮದುವೆ ಎಂಬುವುದಾದರೆ ಅವಳನ್ನೇ ಆಗುವಂತೆ ಅನುಗ್ರಹಿಸು ದೇವಾ" ಎಂದು. ಪಾದ ಮತ್ತು ಗೆಜ್ಜೆಯನ್ನಷ್ಟೇ ನೋಡಿ ಪ್ರೀತಿಸಿದವನು ಈ ಜಗದಲ್ಲಿ ಅವನೊಬ್ಬನೇ ಇರಬೇಕು! ದೇವರು ನಕ್ಕಂತಾಯಿತು.

ದಿನ ಕಳೆಯಿತು. ಮನೆಯವರು ಹೆಣ್ಣು ನೋಡುವ ಶಾಸ್ತ್ರದಂತೆ ಅವನನ್ನು ಹೊರಡಿಸಿದ್ದರು. ಮನದಲ್ಲಿ ಮಾತ್ರ ಅವಳ ಗೆಜ್ಜೆ ಪಾದವೇ ಕದಲುತ್ತಿತ್ತು. "ಭಗವಂತಾ... ಬೇಡಿದ್ದನ್ನು ಕರುಣಿಸದೇ ಹೋದೆಯ" ನಿಡುಸುಯ್ದು ಒಲ್ಲದ ಮನಸ್ಸಿನಿಂದ ಹುಡುಗಿಯನ್ನು ನೋಡಲು ಹೊರಟ.

ತಲೆತಗ್ಗಿಸಿ ಕುಳಿತಿದ್ದ. ಹುಡುಗಿಯ ಕಾತರವಲ್ಲ, ಗೆಜ್ಜೆಪಾದದ ಹುಡುಗಿಯನ್ನು ಮರೆಯುವುದಂತು ಎಂಬ ಚಿಂತೆ. ಅಲ್ಲೆಲ್ಲೊ ಹುಡುಗಿ ಚಹ ಕಪ್ಪುಗಳನ್ನು ಹಿಡಿದು ತರುತ್ತಿದ್ದಳು. ಗೆಜ್ಜೆ ಸದ್ದಿಟ್ಟಿತು. ತಲೆಯೆತ್ತಿ ಪಾದಗಳನ್ನು ನೋಡಿದ್ದ. ಅದೇ ಪಾದ ಅದೇ ಗೆಜ್ಜೆ!

ಹುಡುಗಿಯ ಕಡೆಗೆ ಬಿಡುಗಣ್ಣಾಗಿ ನೋಡಿದ. ಹೂನಗುವಿನ ಹುಡುಗಿ ಚಹದ ಲೋಟವನ್ನು ಮುಂದಿಟ್ಟಳು. "ಎಲ್ಲಿ ಕಳೆದು ಹೋಗುತ್ತಿದ್ದಿಯೇ ಗೆಜ್ಜೆಪಾದದ ಹುಡುಗಿ" ಅವನು ಮನದಲ್ಲೇ ಅಂದುಕೊಂಡ. ಅಲ್ಲೆಲ್ಲೊ ಗುಡಿಯಲ್ಲಿ ದೇವರು ಮತ್ತೆ ನಕ್ಕ! ಗೆಜ್ಜೆ ಘಲ್ ಎಂದಿತು !!

ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)