ಅವರಿಬ್ಬರೂ ಬದುಕಿನ ಹಾದಿಯಲ್ಲಿ ಮುಖಾಮುಖಿಯಾಗಿದ್ದರು. ಇಬ್ಬರೂ ಬದುಕು ಕಟ್ಟುವ ಛಲದಲ್ಲಿದ್ದವರು. ಇಬ್ಬರ ಕಣ್ಣಲ್ಲೂ ಸಾವಿರ ಕನಸಿನ ಬಣ್ಣಗಳು.
ಅವನು ಅವನನ್ನು ಪರಿಚಯಿಸಿಕೊಂಡ. ನಾನು ಬೀಸುಗಾಳಿಗೆ ಮೈಯೊಡ್ಡಿರುವವನು. ಬಿರುಗಾಳಿಗೂ ಎದೆಯೊಡ್ಡಿ ಬದುಕು ಕಟ್ಟಬೇಕೆಂದಿರುವವನು.
ಅವಳೂ ಅವಳನ್ನು ಪರಿಚಯಿಸಿಕೊಂಡಳು. ನಾನು ನೋಡು ದೀಪ ಹಿಡಿದವಳು. ಈ ದೀಪದಿಂದಲೇ ಬದುಕು ಬೆಳಗಿಸಬೇಕೆಂದು ಹೊರಟಿರುವವಳು.
ಇಬ್ಬರೂ ಬದುಕು ಕಟ್ಟುವವರಾದ್ದರಿಂದ ಜೊತೆಗೆ ನಡೆಯೋಣ ಎಂದುಕೊಂಡರು. ಆದರೆ, ಅವನೊಡನೆ ಹೊರಟರೆ ಬೀಸುಗಾಳಿಗೆ ಎದುರಾಗಬೇಕು. ಅವಳ ಕೈಯ ದೀಪವಾರುತ್ತದೆ. ಅದು ಅವಳ ಸಿದ್ಧಾಂತವಲ್ಲ!
ಅವಳೊಂದಿಗೆ ಹೆಜ್ಜೆ ಹಾಕಬೇಕೆಂದರೆ ಗಾಳಿಗೆ ಬೆನ್ನಾಗಿ ನಡೆಯಬೇಕು. ಅದು ಅವನ ಸಿದ್ಧಾಂತವಲ್ಲ!!
ಬೇರೆ ಉಪಾಯ ತೋರದೆ ಇಬ್ಬರೂ ತಮ್ಮ ತಮ್ಮ ದಾರಿ ಕಂಡುಕೊಳ್ಳುವ ಸನ್ನಹದಲ್ಲಿದ್ದರು.
ದೂರವಾಗಲು ಅನುವಾದರು. ಆಗ ಅವನು ಕೇಳಿಕೊಂಡ.
"ನೀ ನನ್ನ ಬೆನ್ನಿಗೆ ನಿಂತುಕೊಳ್ಳುವೆಯಾ? ನೀ ಬೆನ್ನಿಗಿದ್ದರೆ ಎಂಥಾ ಬೀಸುಗಾಳಿಯನ್ನಾದರೂ ಬಂಡೆಯಂತೆ ಎದುರಿಸಬಲ್ಲೆ. ಬೆನ್ನ ಹಿಂದಿರುವ ನಿನ್ನ ಕೈಯ ಪುಟ್ಟ ದೀಪ ಆರದಂತೆ ತಡೆಯ ಬಲ್ಲೆ."
ಬದುಕು ಕಟ್ಟಿಕೊಂಡಿತು.
ರಚನೆ: ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)
No comments:
Post a Comment
Note: only a member of this blog may post a comment.