Thursday, 31 December 2020

ಕಾಲ

ಕಾಲ ಅಸೀಮವಾದುದು, ಅನಂತವಾದುದು, ಅಗಣಿತವಾದುದು.
ಗಣಿತಕ್ಕೆ ಸಿಕ್ಕಷ್ಟನ್ನೇ ಕಾಲದ ಪರಿಧಿಗೆ ತಂದು, ವಿಭಜಿಸಿ, ಅದಕ್ಕೊಂದಷ್ಟು ಗಂಟೆ, ನಿಮಿಷ, ಘಳಿಗೆಗಳನ್ನು ಆರೋಪಿಸಿ ಭೂಮಿಯ ಸುತ್ತನ್ನು ಅಳೆದು ತೂಗಿ ವರ್ಷಗಳ ಲೆಕ್ಕಾಚಾರದಲ್ಲಿ ಕಳೆಯುತ್ತಿರುವವರು ನಾವು.

ಪ್ರತಿ ದಿನವೂ ಹೊಸತೇ ಆದರೂ ಒಂದಷ್ಟು ದಿನಗಳನ್ನೆಲ್ಲ ಒಟ್ಟು ಮಾಡಿ ಒಂದು ತುದಿಯಿಂದ ಮತ್ತೊಂದು ಕೊನೆವರೆಗೂ ಸೇರಿಸಿ ಕಟ್ಟಿ ವರ್ಷವೆಂದರೆ ಇಲ್ಲಿಂದಿಲ್ಲಿಗೆ ಎಂದು ಚೌಕಟ್ಟನ್ನು ಹಾಕಿದ್ದೇವೆ. ಯುಗಾದಿಯೊ, ದೀಪಾವಳಿಯೊ, ಮೊಹರಮ್ಮೊ ಇನ್ನೊಂದು ಮತ್ತೊಂದೊ ಎಲ್ಲವೂ ಅಷ್ಟೇ, ಕಟ್ಟಿ ಹಾಕಲಾಗದ ಕಾಲವನ್ನು ಭ್ರಮಿಸಿ ಹಿಡಿದು ಲೆಕ್ಕ ಹಾಕಿದಂತಹುದು. ಗಾಳಿಯನ್ನು ಕೈಯಲ್ಲಿ ಹಿಡಿಯುವ ವ್ಯರ್ಥ ಪ್ರಯತ್ನ.ಆದರೂ,
ಪ್ರತಿ ದಿನವೂ ಹೊಸತಾದರೂ, ನಾಳೆ ವ್ಯವಹಾರದ ದೃಷ್ಟಿಯಿಂದ ಈ ಲೋಕಕ್ಕೆ ಹೊಸ ವರುಷದ ಆರಂಭ!!

ಕಾಲಾತೀತನಾದ ಕಾಲಪುರುಷನ ಜೋಳಿಗೆಯಲ್ಲಿ ಬರುವ ಕಾಲವೆಲ್ಲ ಸುಖದ ಅಕ್ಷತೆಯನ್ನೇ ಹನಿಸಲಿ. ಶುಭವಾಗಲಿ.

-ನಕ್ಷತ್ರಮೌನಿ

Saturday, 31 October 2020

ಕನ್ನಡ

ಜನಪದ, ಚಂಪೂ, ರಗಳೆ, ತ್ರಿಪದಿ, ವಚನ, ಕೀರ್ತನೆ, ನವ್ಯ, ಪ್ರಗತಿಶೀಲ, ನವೋದಯ, ದಲಿತ, ಬಂಡಾಯ ಮುಂತಾದ ಸಾಹಿತ್ಯದಿಂದ 📚

ಯಕ್ಷಗಾನ, ಕೋಲಾಟ, ಹಗಲುವೇಷ, ಡೊಳ್ಳುಕುಣಿತ, ಕಂಸಾಳೆ,
ಮುಂತಾದ ನ್ರತ್ಯ ಪ್ರಕಾರದಿಂದ 💃🏻🏃🏽

ಸೋಬಾನೆ ಹಾಡು, ಗೀಗಿಪದ, ಪಾಡ್ದಾನ, ಓಬೇಲೆ ಹಾಡು, ಭಾವಗೀತೆ ಮುಂತಾದ ಪದ್ಯ ಪ್ರಕಾದಿಂದ 🎤🎼

ಪಂಪ, ರನ್ನ, ಪೊನ್ನ, ಜನ್ನ, ಕುವೆಂಪು, ದ ರಾ ಬೇಂದ್ರೆ ಮೊದಲಾದ ಮಹಾಕವಿಗಳಿಂದ ✍🏼

ಮಲೆಗಳಲ್ಲಿ ಮದುಮಗಳು, ಕಾನೂರ ಹೆಗ್ಗಡತಿ, ದಾಟು, ಮೂಕಜ್ಜಿಯ ಕನಸುಗಳು, ಗ್ರಹಭಂಗ, ಸಂಸ್ಕಾರ ಮುಂತಾದ ಅದ್ಭುತ ಕಾದಂಬರಿಗಳಿಂದ 📚

ಚಾಳುಕ್ಯ, ಕದಂಬ, ಗಂಗ, ರಾಷ್ಟ್ರಕೂಟ, ಹೊಯ್ಸಳ, ವಿಜಯನಗರ ಮೊದಲಾದ ರಾಜಮನೆತನಗಳಿಂದ⚔🛡

ಬಸವಣ್ಣ, ದಾಸರು, ಷರೀಫರು, ಅಕ್ಕ ಮಹಾದೇವಿ ಮತ್ತು ಇತರೆ ವಚನಕಾರ್ತಿಯರು ಮೊದಲಾದ ಚಿಂತಕರಿಂದ 👳🏽👩🏾

ಕರಾವಳಿ, ಮಲೆನಾಡು, ಬಯಲುಸೀಮೆ, ಬೆಟ್ಟ, ಗುಡ್ಡ, ಬಂಡೆ, ಝರಿ ತೊರೆ ಸಮುದ್ರಗಳಿಂದ 🏔🏖

ಹಲ್ಮಡಿ, ಆತಕೂರು, ದೇಕಬ್ಬೆ ಮುಂತಾದ ಶಾಸನಗಳಿಂದ ⚠

ಹಲವು ಜನಾಂಗ, ಜಾತಿ, ಮತ, ಪಂಥ, ಧರ್ಮಗಳಿಂದ 👦🏻👲🏼🎅🏻
ಮಂದಿರ, ಮಸೀದಿ, ಇಗರ್ಜಿ, ಸ್ತೂಪ, ವಿಹಾರ, ಜಿನಾಲಯಗಳಿಂದ 🕋🕍⛪🕌

ಖಾದ್ಯ ವೈವಿಧ್ಯಗಳಿಂದ 🍲🍵☕

 
"ಕನ್ನಡ" ಎಂಬ ಶಬ್ಧಮಣಿ ಮೂಲಕ ಒಟ್ಟಾಗಿರುವ ಸಂಪದ್ಭರಿತ ಕರ್ನಾಟಕದ "ಕನ್ನಡ ರಾಜ್ಯೋತ್ಸವ" ಶುಭಾಶಯಗಳು

"ಯೋಗೀಶ್ ಮಲ್ಲಿಗೆಮಾಡು"🙏🏽🙏🏽

Saturday, 18 July 2020

ಮ(ಮೌ)ನದ ಹಾಡು

ಮುಗಿದಿತ್ತು ಈ ಸಂಜೆ
ಮಾತೇ ಇಲ್ಲದ ಹಾಗೆ
ಮತ್ತೆ ಮಳೆ ಬರುವಂತ
ಮೋಡದೊಳಗೆ

ಮೆಲುದನಿಯ ರಾಗದಲಿ
ಮಿಡಿವ ವೀಣೆಯು ಕೂಡ
ಮೂಕ ಮೌನದೊಳಿತ್ತು
ಮುಸುಕಿನೊಳಗೆ

ಮಲ್ಲಿಗೆಯು ಹಂಬಿತ್ತು
ಮನೆ ಮೇಲೆ ಮಾಡಿನಲಿ
ಮುಗುಳರಳಿ ಘಮಿಸಿತ್ತು
ಮನೆಯ ಒಳಗೆ

ಮಿನುಕು ಹುಳ ಮಿನುಗಿತ್ತು
ಮಾಮರದಿ ಹೂವಿತ್ತು
ಮುಸ್ಸಂಜೆ ಹೊತ್ತಲ್ಲಿ
ಮೌನವಿತ್ತು

ಮುಡಿಸಿರುವ ದೀಪದಲಿ
ಮಂದ ಬೆಳಕಿನ ಮೌನ
ಮತ್ತೆಂದು ಬರುವೆಯೊ
ಮರಳಿ ನೀನು

ಮನೆ ತುಂಬ ದೀಪವ
ಮುಡಿಸಿ ನಗುವೆನು ನಾನು
ಮರಳಿ ಬಾ ಹೊರಳಿ ಬಾ
ಮತ್ತೆ ನೀನು

ಯೋಗೀಶ್ ಮಲ್ಲಿಗೆಮಾಡು (ನಕ್ಷತ್ರಮೌನಿ)

Thursday, 18 June 2020

ಉತ್ತರವಿರದ ಪ್ರಶ್ನೆಗಳು

ಒಡೆದ ತುಟಿ, ಕೈಕಾಲುಗಳಿಗೆ ಇಲ್ಲಿದೆ
ವ್ಯಾಸಲಿನ್, ಕ್ರ್ಯಾಕ್ರೀಮುಗಳು
ಒಡೆದ ಸಂಬಂಧಗಳಿಗಿಲ್ಲಿ ಯಾವ ಲೇಪ....?

ಮುರಿದ ವಸ್ತುಗಳಿಗೆ ಫೆವಿಕಾಲ್, ಫೆವಿಕ್ವಿಕ್ಕುಗಳು
ಮುರಿದ ಮನಸುಗಳಿಗೆ ಇಲ್ಲಿ ಯಾವ ಅಂಟು ಮೇಣ...??

ಅನ್ನ ಹಳಸದೇ ಇರಲು ಇಲ್ಲಿ ರೆಫ್ರಿಜ್ಜರೇಟರುಗಳು
ಬಾಂಧವ್ಯ ಹಳಸದಿರಲು ಯಾವ ಪೆಟ್ಟಿಗೆ....???

ನಮ್ಮ ಸಂಭ್ರಮಗಳ ಹಂಚಿಕೊಳ್ಳಲು ಇಲ್ಲಿ ವಾಟ್ಸ್ ಆ್ಯಪ್, ಫೇಸ್ ಬುಕ್ಕುಗಳು
ಕುಳಿತು ದುಃಖವ ಕೇಳಲು ಯಾವ ಜಾಲತಾಣ....????

ದೂರದೂರದವರನು ಆಲಿಸಲು ಇಲ್ಲಿ ಕಾನ್ಫರೆನ್ಸ್, ಮೊಬೈಲು, ಸ್ಕೈಪುಗಳು
ಪಕ್ಕದ ಮನೆಯವರ ಕಷ್ಟ ಆಲಿಸಲು ಯಾವ ಕನೆಕ್ಷನ್...???

(ಯೋಗೀಶ್ ಮಲ್ಲಿಗೆಮಾಡು)

Tuesday, 26 May 2020

ಕೆಂಪು ದಾಸವಾಳ

ತಂಪು ಸೆಲೆಯ ನೀರಿನಲೆಯ
ತೊರೆಯ ಮಂದ ನಾದವು
ಹರಿವ ನೀರ ಸುರಿವ ನೆನಪ
ಕುಳಿತು ಕಳೆವ ಒಲವೊಳು

ಕಮಲ ಪಾದ ನೀರೊಳಿಟ್ಟು
ಬೆಳ್ಳಿ ಗೆಜ್ಜೆ ಘಲು ಘಲು
ಕೆಂಪು ದಾಸವಾಳ ಬಿರಿದು
ಪಾದ ಸುತ್ತ ಸುತ್ತಲು

ಯಾವ ಸಂಜೆ ಯಾವ ಘಳಿಗೆ
ನೀನು ಎಂದು ಬರುವೆಯೊ
ಕಾದು ಕೂತು ಕಾಯುತಿರುವೆ
ತಂಪು ನೀರ ದಡದೊಳು

ಬಂದು ಬಿಡು ಬೇಗ ನೀನು
ಜೊತೆಗೆ ಸಂಜೆ ಕಳೆಯುವ
ಸರಿದು ಬಿಡಲಿ ಕಾಲ ಹೀಗೆ
ನೀರೊಳದ್ದಿ ಪಾದವ

ನೀರಿಗಿಟ್ಟ ಪಾದದಲ್ಲಿ
ಬೆಳ್ಳಿಗೆಜ್ಜೆ ಸುತ್ತಿದೆ
ಕಮಲ ಪಾದವನ್ನು ನೋಡು
ಕೆಂಪು ಹೂವು ಮುತ್ತಿದೆ

ಯೋಗೀಶ್ ಮಲ್ಲಿಗೆಮಾಡು

ಮೇಲೆ ಕೆಳಗೆ ಮಾಡಿಯೂ ಓದ ಬಹುದಾದ ಕವಿತೆ ಇದು

ಹರಿವ ನೀರ ಸುರಿವ ನೆನಪ
ಕುಳಿತು ಕಳೆವ ಒಲವೊಳು
ತಂಪು ಸೆಲೆಯ ನೀರಿನಲೆಯ
ತೊರೆಯ ಮಂದ ನಾದವು

ಕೆಂಪು ದಾಸವಾಳ ಬಿರಿದು
ಪಾದ ಸುತ್ತ ಸುತ್ತಲು
ಕಮಲ ಪಾದ ನೀರೊಳಿಟ್ಟು
ಬೆಳ್ಳಿ ಗೆಜ್ಜೆ ಘಲು ಘಲು

ಕಾದು ಕೂತು ಕಾಯುತಿರುವೆ
ತಂಪು ನೀರ ದಡದೊಳು
ಯಾವ ಸಂಜೆ ಯಾವ ಘಳಿಗೆ
ನೀನು ಎಂದು ಬರುವೆಯೊ

ಸರಿದು ಬಿಡಲಿ ಕಾಲ ಹೀಗೆ
ನೀರೊಳದ್ದಿ ಪಾದವ
ಬಂದು ಬಿಡು ಬೇಗ ನೀನು
ಜೊತೆಗೆ ಸಂಜೆ ಕಳೆಯುವ

ಕಮಲ ಪಾದವನ್ನು ನೋಡು
ಕೆಂಪು ಹೂವು ಮುತ್ತಿದೆ
ನೀರಿಗಿಟ್ಟ ಪಾದದಲ್ಲಿ
ಬೆಳ್ಳಿಗೆಜ್ಜೆ ಸುತ್ತಿದೆ.

ಯೋಗೀಶ್ ಮಲ್ಲಿಗೆಮಾಡು

Thursday, 23 January 2020

ಕ್ವಿಲ್ಟಡ್ ಮಲ್ಟಿವರ್ಸ್ ಥಿಯರಿ

ಬಹುಬ್ರಹ್ಮಾಂಡ ತತ್ವದ ಆಧಾರದ ಮೇಲೆ ಒಂದು ಸಿದ್ಧಾಂತ ಪ್ರತಿಪಾದಿಸಲಾಗಿತ್ತು. ಕ್ವಿಲ್ಟಡ್ ಮಲ್ಟಿವರ್ಸ್ ಥಿಯರಿ ಎಂಬುವುದು ಆ ಸಿದ್ಧಾಂತ. ಆ ಸಿದ್ಧಾಂತದ ಪ್ರಕಾರ ಅದೆಷ್ಟೊ ಜ್ಯೋತಿರ್ವರ್ಷಗಳ ಆಚೆ ಇನ್ನೊಂದು ಭೂಮಿ ಇದೆ. ಇಲ್ಲಿ ನಡೆಯುವ ಘಟನೆಗಳೇ ಅಲ್ಲೂ ನಡೆಯುತ್ತಿದೆ, ಇಲ್ಲಿರುವ ವ್ಯಕ್ತಿಗಳೇ ಅಲ್ಲೂ ಇದ್ದಾರೆ ಅನ್ನುವುದು ಆ ಸಿದ್ಧಾಂತ.

ಇಸ್ರೊ ಆಕಾಶಯಾನಕ್ಕೆ ಮುಂದಾಯಿತು. ಅತ್ಯಾಧುನಿಕ, ಸಜ್ಜಿತ ಆಕಾಶ ಕ್ಷಿಪಣಿ ಸಿದ್ಧವಾಯಿತು. ಸಾವಿರಾರು ಜ್ಯೋತಿರ್ವರ್ಷವನ್ನು ಒಂದು ಘಳಿಗೆಯಲ್ಲಿ ಹಾದು ಹೋಗ ಬಲ್ಲ ಮನೋವೇಗದ ಬಾಣಬಿರುಸಿನ ರಾಕೇಟು.

ಖ್ಯಾತ ಗಗನಯಾನಿ ಸುಮಿತ್ರ ಕಶ್ಯಪ್ ಈ ಯಾನಕ್ಕೆ ಆಯ್ಕೆಯಾಗಿದ್ದರು. ನೆಲದಿಂದ ಚಿಮ್ಮಿದ ರಾಕೇಟು ಮನೋವೇಗದಲ್ಲಿ ಜ್ಯೋತಿರ್ವರ್ಷಗಳನ್ನು ಹಿಂದಿಕ್ಕಿ ಸಾಗಿತ್ತು. ಭೂಕಕ್ಷೆ, ವಾಯುಮಂಡಲ, ಸೂರ್ಯ ಪರಿಧಿಯನ್ನು ದಾಟಿ ಕಾಲ, ಗುರುತ್ವ, ಪರಿಧಿಗಳ ಎಲ್ಲಾ ಸಿದ್ಧಾಂತ ದಾಟಿ ಮುನ್ನುಗಿತ್ತು.

ಅಲ್ಲೊಂದು ಭೂಮಿ ಇರುವುದು ಹೌದಾ ಅನ್ನುವುದೇ ಎಲ್ಲರ ಕುತೂಹಲ. ಇದ್ದದ್ದೇ ಹೌದಾದರೆ ಅದು ಇಲ್ಲಿಯಂತೆಯೇ ಘಟನೆ, ವ್ಯಕ್ತಿ, ಪರಿಸ್ಥಿಗಳನ್ನು ಹೊಂದಿರಲು ಸಾಧ್ಯವೇ ಅನ್ನುವ ಪ್ರಶ್ನೆ. ಮಾಧ್ಯಮ, ಶಾಲೆ, ಮನೆ, ಊರು ಕೇರಿ ತುಂಬಾ ಇದೇ ಚರ್ಚೆ.

ದುರಾದೃಷ್ಟ, ರಾಕೇಟು ಆ ಭೂವಲಯವನ್ನು ಶೋಧಿಸುವ ಮುನ್ನವೇ ಸಂಪರ್ಕ ಕಡಿತಗೊಂಡಿತು. ರಾಕೇಟು ಅಲ್ಲಿ ತಲುಪಿತೊ ಇಲ್ಲವೊ ನಿಗೂಢವಾಗಿ ಉಳಿಯಿತು. ಕೆಲ ದಿನಗಳು ಕಳೆದು ಎಲ್ಲವೂ ಕೈಚೆಲ್ಲುವ ಹೊತ್ತಲ್ಲಿ ಒಂದು ಕ್ಷಿಪಣಿ ಇಲ್ಲಿಯ ಭೂವಲಯದ ಕಡೆ ಬರುವ ಸಂಪರ್ಕ ಸಿಕ್ಕಿತು. ನೋಡಿದರೆ ಅದು ಇಲ್ಲಿಂದ ಕಳುಹಿಸಿದ ಕ್ಷಿಪಣಿಯೇ.

ಎಲ್ಲರಿಗೂ ಆಶ್ಚರ್ಯ ! ಕಳುಹಿಸಿದ ಕ್ಷಿಪಣಿ ಹಿಂದಿರುಗಿದೆ!! ಅದರಲ್ಲಿದ್ದ ಗಗನಯಾನಿ ಸುಮಿತ್ರ ಕಶ್ಯಪ್ ಕೆಳಗಿಳಿದು ಕೈಕುಲುಕಿದರು. ಯಾನ ರೋಮಾಂಚನವಾಗಿತ್ತು ಆದರೆ ಭೂವಲಯ ಶೋಧಿಸಲಾಗದ್ದು ಬೇಸರ ತಂದಿದೆ ಎಂದು ಹೇಳಿಕೆ ನೀಡಿದರು.

ಶೋಧವೇನೊ ಅಲ್ಲಿಗೇ ಮುಗಿಯಿತು. ಆದರೆ, ಕ್ವಿಲ್ಟಡ್ ಮಲ್ಟಿವರ್ಸ್ ಥಿಯರಿ ಆಧಾರದಲ್ಲಿ ಇಲ್ಲಿ ಬಂದ ಕ್ಷಿಪಣಿ ಅಲ್ಲಿಯದೆಂದು, ಅದರಲ್ಲಿರುವ ಸುಮಿತ್ರಾ ಕಶ್ಯಪ್ ಅಲ್ಲಿಯವರೆಂದು ಯಾರಿಗೂ ತಿಳಿಯದ್ದು ವಿಪರ್ಯಾಸ!!

ಇಲ್ಲಿಯ ಸುಮಿತ್ರಾ ಅಲ್ಲಿಯ ಭೂಮಿ ಸೇರಿಕೊಂಡರು. ಇವರಲ್ಲಿಯವರು, ಅವರಿಲ್ಲಿಯವರು ಎಂದು ಸಂಶೋಧಿಸುವುದೆಂತು ???

ರಚನೆ: ಯೋಗೀಶ್ ಮಲ್ಲಿಗೆಮಾಡು