ಯೋಗೀಶ್ ಮಲ್ಲಿಗೆಮಾಡು
ಒಂದು ಕಾಲಘಟ್ಟದ, ಒಂದು ಜನ ಸಮುದಾಯ ಒಂದು ಪ್ರದೇಶದಲ್ಲಿ ಒಂದೇ ರೀತಿಯ ಆಚರಣೆ, ಪದ್ಧತಿ, ನೇಮ, ನಿಷ್ಠೆಗಳನ್ನು ಪರಿಪಾಲಿಸುತ್ತ ಬದುಕುವದನ್ನು ಆಯಾಯ ಸಮುದಾಯದ ಇತಿಹಾಸದಲ್ಲಿ ಕಂಡುಕೊಳ್ಳಲು ಸಾಧ್ಯ. ಭಾರತದಲ್ಲಿ ಇಂತಹ ಅನೇಕ ಸಮುದಾಯಗಳ ಇತಿಹಾಸವನ್ನು ಈ ನಿಟ್ಟಿನಲ್ಲಿ ಸಂಕಲಿಸಲು ಸಾಧ್ಯವಿದೆ. ಜೊತೆಗೆ, ಈ ಎಲ್ಲಾ ಸಮುದಾಯಗಳ, ಇತಿಹಾಸವೂ ಒಂದಕ್ಕೊಂದು ಬೆಸೆದುಕೊಂಡಿರುವುದನ್ನೂ ಕಾಣುತ್ತೇವೆ. ಇದಕ್ಕೆ ಬಹಳ ಪ್ರಮುಖವಾದ ಕಾರಣವೆಂದರೆ ಅದು ಈ ನೆಲದ ಜನರು ನಿರಂತರ ಚಲನಶೀಲವಾಗಿದ್ದದ್ದು. ಭಾಷೆ ಭಾಷೆಗಳ ನಡುವೆ, ಸಮುದಾಯ ಸಮುದಾಯಗಳ ನಡುವೆ, ಪ್ರದೇಶ ಪ್ರದೇಶಗಳ ನಡುವೆ ಇದ್ದ ಕೊಡುಕೊಳ್ಳುವಿಕೆ ಇಂತಹ ವಿಶಿಷ್ಟ ಬೆಸುಗೆಗೆ ಕಾರಣವಾಗಿದೆ. ಆದುದರಿಂದಲೇ, ನಮ್ಮಲ್ಲಿ ಜನಪದೀಯವಾದುದು ಅತ್ಯಂತ ಶಿಷ್ಟವೂ ಹೌದೂ ಮತ್ತು ಅತ್ಯಂತ ಶಿಷ್ಟವಾದವುಗಳು ಜನಪದೀಯವಾಗಿಯೂ ಇರುವುದನ್ನು ಕಾಣಬಹುದಾಗಿದೆ. ಇದೆ ನಿಟ್ಟಿನಲ್ಲಿ "ರಾಮರಾಜ ಕ್ಷತ್ರಿಯ" ಸಮುದಾಯದ ಇತಿಹಾಸವನ್ನು ಅವಲೋಕಿಸುವಾಗಲೂ ನಾವು ಸಮಗ್ರ ಭಾರತದ ವಿವಿಧ ಪ್ರದೇಶಗಳ ಆಚರಣೆ, ನಂಬಿಕೆ, ಪದ್ಧತಿಗಳ ಜೊತೆಗೆ ನೋಡಬೇಕಾಗುತ್ತದೆ. ಈ ಸಮುದಾಯದ ಆಚರಣೆಗಳು ಶಿಷ್ಟವೂ ಹೌದು, ಜನಪದೀಯವೂ ಹೌದು.
''ರಾಮರಾಜ ಕ್ಷತ್ರಿಯ" ಸಮುದಾಯದ ಇತಿಹಾಸದ ಜಾಡನ್ನು ಒಂದು ಪ್ರದೇಶಕ್ಕೆ ಸೀಮಿತ ಮಾಡುವುದು ಸಾಧ್ಯವಿಲ್ಲ. ಏಕೆಂದರೆ, ಕೋಟೆಯ ರಕ್ಷಣೆಯ ಹೊಣೆ ಹೊತ್ತು ಸೈನ್ಯ ಸೇವೆ ನೀಡಿದ ಈ ಸಮುದಾಯದ ಹೆಜ್ಜೆ ಗುರುತುಗಳು ಈ ಭವ್ಯಭಾರತದ ಉದ್ದಗಲಕ್ಕೂ ಹರಡಿರಬಹುದು. ಎಲ್ಲೆಲ್ಲಿ ಯುದ್ಧಗಳು ನಡೆದವೊ, ಎಲ್ಲೆಲ್ಲಿ ಕೋಟೆ ಕೊತ್ತಲಗಳು ತಲೆಯೆತ್ತಿದವೂ, ಎಲ್ಲೆಲ್ಲಿ ಶಾಂತಿ ಸ್ಥಾಪನೆಯ ಅಗತ್ಯ ಬಂದಿತೊ ಅಲ್ಲೆಲ್ಲಾ ಈ ಸಮುದಾಯವನ್ನು ಕಳುಹಿಸಿ ಸ್ಥಿತಗೊಳಿಸಿದ್ದು ನಿರಂತರವಾಗಿ ನಡೆದು ಬಂದಿರುವಂತದ್ದು. ಹಾಗಿರುವಾಗ ಈ ಸಮುದಾಯವನ್ನು ಎಲ್ಲಿಯ ಪ್ರದೇಶಕ್ಕೆ ಸೀಮಿತಗೊಳಿಸಲು ಸಾಧ್ಯ?
ಲಭ್ಯ ದಾಖಲೆಗಳು, ರಾಜರ ಕಾಲಘಟ್ಟಗಳ ಆಧಾರದಲ್ಲಿ ಇಂದು ಮಹಾರಾಷ್ಟ್ರವೇ ನಮ್ಮ ಮೂಲವೆಂದು ಹೇಳಿದ ಸಂಶೋಧಕರಿದ್ದಾರೆ, ತಜ್ಞರಿದ್ದಾರೆ. ಅದು ನಿಜವೂ ಹೌದು. ಏಕೆಂದರೆ, ನಮ್ಮಲ್ಲಿ ಅದಕ್ಕಿಂತಲು ಮುಂಚಿನ ಇತಿಹಾಸದ ಕುರುಹುಗಳು ಸಿಗುವುದೇ ಅನುಮಾನ. ಆದರೆ, ಕುರುಹು ಸಿಗದ ಮಾತ್ರಕ್ಕೆ ಇತಿಹಾಸ ಇರಲಿಲ್ಲವೆಂದಲ್ಲವಲ್ಲ, ಜೊತೆಗೆ ಉಹೆಯೂ ಕೂಡ ಇತಿಹಾಸವನ್ನು ಕಟ್ಟಿಕೊಡಲಾಗದು. ಆದರೆ, ಊಹೆ ಇತಿಹಾಸದ ಶೋಧಕ್ಕೆ ಪೂರಕ ಎನ್ನುವಂತೆ ನಮ್ಮ ವ್ರತ ನಿಯಮ ಅನುಷ್ಠಾನಗಳ ಆಧಾರದಲ್ಲಿ ಆನೇಕ ವಿಚಾರಗಳನ್ನು ಹೀಗಿರಬೇಕು ಎಂದು ಶೋಧಿಸುವುದಕ್ಕೆ ಶಕ್ತ.
ಮೂಲತಃ ವೈದಿಕ ವಿಧಿಗಳನ್ನು ಅನುಷ್ಠಾನ ಮಾಡುವ ಈ ಸಮುದಾಯ ತನ್ನ ಅತಿ ಪ್ರಾಚೀನ ನೆಲೆಯನ್ನು ಸರಸ್ವತಿ ನದಿಯ ತೀರದಲ್ಲೆ ಗುರುತಿಸಬೇಕು. ವೈದಿಕ ವಿಧಿಗಳನ್ನು ಅನುಷ್ಠಾನಿಸುವ ಅನೇಕ ಸಮುದಾಯಗಳ ಜೊತೆ ಒಂದು ಕೊಡುಕೊಳ್ಳುವಿಕೆ ಆ ಕಾಲಘಟ್ಟದಲ್ಲಿ ಆರಂಭವಾಗಿರಬೇಕು. ಶೈವಾರಾಧಕರು ಎನ್ನುವುದು ಇದನ್ನು ಇನ್ನಷ್ಟು ಪುಷ್ಟಿಕರಿಸುತ್ತದೆ. ವಿವಿಧ ರಾಜರುಗಳ ಕಾಲಘಟ್ಟದಲ್ಲಿ ಈ ಸಮುದಾಯ ದೇಶದ ಬೇರೆ ಬೇರೆ ಪ್ರದೇಶದ ಕಡೆಗೆ ಸೈನ್ಯಸೇವೆ ನೀಡಿರಬಹುದು, ವಿಶೇಷವೆಂದರೆ, ಆ ಸಂದರ್ಭಗಳಲ್ಲಿ ಈ ಸಮುದಾಯ 'ರಾಮರಾಜಕ್ಷತ್ರಿಯ' ಅಥವಾ 'ಕೋಟೆ' ಅನ್ನುವ ಹೆಸರನ್ನು ಹೊಂದಿರುವುದು ಸಾಧ್ಯವಿಲ್ಲ. ಜೊತೆಗೆ 'ನಾಯಕ', 'ರಾಯ' 'ರಾವ್', 'ಅಯ್ಯ' ಇಂತಹ ಉಪನಾಮಗಳು ಆಗ ಇದ್ದಿರಲೂ ಸಾಧ್ಯವಿಲ್ಲ.ಏಕೆಂದರೆ, ಇದೆಲ್ಲವೂ ವಿಜಯನಗರ, ಇಕ್ಕೇರಿ ಆಡಳಿತದ ಸಂದರ್ಭದಲ್ಲಿ ದೊರೆತಂದದ್ದು. ಹಾಗಾಗಿ ಮಹಾರಾಷ್ಟ್ರ, ಆಂಧ್ರ, ಕರ್ನಾಟಕದ ಭಾಗಗಳಿಗೆ ಬರುವ ಮುನ್ನ ಇದ್ದ ಉಪನಾಮಗಳು ಬೇರೆಯದ್ದೇ ಆಗಿದ್ದವು. 'ವರ್ಮ' ಎನ್ನುವ ಪದವೇ ಆಗ ಕ್ಷತ್ರಿಯರಲ್ಲಿ ಬಳಕೆ ಇದ್ದದ್ದು. ವರ್ಮ ಎಂದರೆ 'ಕವಚ'ಎನ್ನುವ ಅರ್ಥ ಹೊಂದಿದೆ. 'ಕ್ಷತಾತ್ ತ್ರಾಯತೆ ಇತಿ ಕ್ಷತ್ರಿಯ' ಎನ್ನುವಲ್ಲಿಗೆ ಕ್ಷತ್ರಿಯರೆಂದರೆ ಗಾಯದಿಂದ ರಕ್ಷಿಸುವವರು ಎಂದು ಅರ್ಥೈಸುತ್ತದೆ. ಆ ನೆಲೆಯಲ್ಲಿ ವರ್ಮ ಎಂದರೆ ಗಾಯ, ನೋವುಗಳನ್ನು ಕವಚದಂತೆ ತಡೆಯುವ ಕ್ಷತ್ರಿಯರು ಎಂಬುವುದು ವಿಧಿತ. ಹಾಗಾಗಿ ರಾಮರಾಜ ಕ್ಷತ್ರಿಯ/ಕೋಟೆ ಅನ್ನುವ ಪದಗಳ ಜೊತೆಗಿನ ಇತಿಹಾಸದ ಹುಡುಕಾಟ ನಮ್ಮನ್ನು ಮಹಾರಾಷ್ಟ್ರದ ಗಡಿಗಳ ಹತ್ತಿರಕ್ಕೆ ತಂದು ನಿಲ್ಲಿಸುತ್ತವೆ. 'ತಾಳಿಕೋಟೆ ಯುದ್ಧ' ಈ ನೆಲೆಯಲ್ಲಿ ಪ್ರಮುಖವಾದುದು. ನಂತರದ ಸಮಯದಲ್ಲಿ ಹುದ್ದೆಗಳೇ ಉಪನಾಮವಾದುದು (ಉದಾ: ಹವಲ್ದಾರ್, ಪಟೇಲ್) ಮತ್ತೂ ನಂತರದಲ್ಲಿ ನೆಲೆಯಾದ ಸ್ಥಳವೇ ಉಪನಾಮವಾದುದು ಕಾಣಬಹುದಾಗಿದೆ (ಉದಾ: ಬೇಕಲ್, ಮಲ್ಲಿಗೆಮಾಡು).
ಹೀಗೆ ಸಿಂಧೂ ನಾಗರೀಕತೆಯಿಂದ ಬಂಗಾಳದ ಕಡೆಗೆ ಮತ್ತು ಅಲ್ಲಿಂದ ಆಂಧ್ರ, ಮಹಾರಾಷ್ಟ್ರದ ಕಡೆಗೆ ಈ ಸಮುದಾಯವು ಬಂದಿರುವುದನ್ನು ನಾವು ಗುರುತಿಸಬಹುದು. ಶಿವನ ಜೊತೆಗೆ ಶಕ್ತಿಯ ಆರಾಧನೆಗೆ ಒಳಪಟ್ಟಿದ್ದು ಬಹುಶಃ ಶಕ್ತಿಯನ್ನು ಪ್ರಮುಖವಾಗಿ ಆರಾಧಿಸುವ ಬಂಗಾಳದ ಕಡೆಯಿಂದಲೇ ಆಗಿರಬಹುದು, ವಿಜಯ ನಗರದ ಅವರ ಆಡಳಿತದಲ್ಲಿ ಆಂಧ್ರ ಮತ್ತು ಮಹಾರಾಷ್ಟ್ರದ ಕಡೆಗಳಲ್ಲಿ ಇದ್ದ ರಾಮಕ್ಷತ್ರಿಯ, ರಾಮರಾಜ ಕ್ಷತ್ರಿಯ, ಕೋಟೆಗಾರ್, ಕೋಟೆಯಾರ್, ಸೇರ್ವೆಗಾರ್, ಶೇರಿಗಾರ್, ಚೇರಕಾರ್ ಮುಂತಾದ ಹೆಸರುಗಳಿಂದ ಗುರುತಿಸಲ್ಪಡುವ ಈ ಸಮುದಾಯ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ. ಕಾಸರಗೋಡು, ಕಾಞಂಗಾಡು ಪ್ರದೇಶದ ಕರಾವಳಿಯ ಉದ್ದಗಲಕ್ಕೂ ವಿಸ್ತರಿಸಿಕೊಂಡಿದೆ.
ಸೈನ್ಯ, ಆಡಳಿತ, ರಕ್ಷಣೆ ವ್ಯವಸ್ಥೆಯಲ್ಲಿ ರಾಮಕ್ಷತ್ರಿಯರನ್ನು ನೇಮಿಸಿರುವುದು ತಿಳಿದಿರುವ ವಿಚಾರ, ರಾಜ್ಯ ರಕ್ಷಣೆಯ ಜೊತೆಗೆ ಕಡಲಿನ ಮೂಲಕ ನಡೆಯಬಹುದಾದ ದಾಳಿಗಳನ್ನು ತಪ್ಪಿಸಲು ವಿಶೇಷವಾಗಿ ಕರಾವಳಿಯ ಉದ್ದಗಲಕ್ಕೂ ಅಲ್ಲಲ್ಲಿ ಕೋಟೆಗಳನ್ನು ಕಟ್ಟಿ, ಕರಾವಳಿಯನ್ನು ದಾಳಿಕೋರರಿಂದ ರಕ್ಷಿಸಲು ಇಂದಿನ 'ತಟ ರಕ್ಷಣಾ ಪಡೆ' ರೀತಿಯಲ್ಲಿ ಆಗಿನ ಕಾಲದಲ್ಲಿ ರಾಮ ಕ್ಷತ್ರಿಯರು ವಿಶೇಷ ಪರಿಣತರು ಎಂದು ಊಹಿಸಬಹುದಾಗಿದೆ. ಹೀಗೆ ಕೋಟೆಗಳ ಕಾವಲು, ಆಡಳಿತ, ನಿರ್ವಹಣೆಯ ಹೊಣೆ ಹೊತ್ತ ರಾಮಕ್ಷತ್ರಿಯರು ಈ ಪ್ರದೇಶದ ಜನರ ಆಡುಭಾಷೆಯಲ್ಲಿ 'ಕೋಟೆಯವರು' ಎಂದು ಗುರುತಿಸಲ್ಪಟ್ಟರು. ರಾಮಕ್ಷತ್ರಿಯರ ಸಮುದಾಯದ ಆಚರಣೆ, ಭಾಷಾ ಶೈಲಿ ಹೆಚ್ಚಾಗಿ ಮಲೆನಾಡು ಹಾಗೂ ಉತ್ತರ ಕರ್ನಾಟಕದ ಬಯಲು ಸೀಮೆಗೆ ಹೋಲಿಕೆ ಕಂಡುಬರುತ್ತದೆ. ಶಿವಮೊಗ್ಗದ ಭಾಗಗಳಲ್ಲಿ, ತೀರ್ಥಹಳ್ಳಿ ಮೊದಲಾದ ಕಡೆಯ ಜನಸಮುದಾಯ ಇಂದಿಗೂ ಮಾತನಾಡುವ ಭಾಷಾ ಶೈಲಿ ಈ ಸಮುದಾಯದ ಜೊತೆ ಹೋಲಿಕೆಯಾಗುತ್ತದೆ. ಹಾಗಾಗಿ, ವಿಜಯ ನಗರದ ಅಳಿಯ ರಾಮರಾಯನ ಆಳ್ವಿಕೆಯ ಪರತನಾನಂತರ ಈ ಸಮುದಾಯವು ಅವರ ಸಾಮಾಂತರಾದ ಇಕ್ಕೇರಿ ವಂಶದ ರಾಜರ ಅಧೀನಕ್ಕೆ ಬಂದು ಅವರ ಸ್ವತಂತ್ರ ಆಳ್ವಿಕೆಯ ಸಂದರ್ಭ ಒಂದು ಭಾಗ ಇಕ್ಕೇರಿಯ ಕಡೆಯಲ್ಲಿ ನೆಲೆಗೊಂಡು ನಂತರ (1586-1629) ಇಕ್ಕೇರಿಯ ಅರಸ ಹಿರಿಯ ವೆಂಕಟಪ್ಪ ನಾಯಕ ಸೈನ್ಯವನ್ನು ವಿಸ್ತರಿಸಿ ಚಂದ್ರಗಿರಿ, ಬೇಕಲ ಮುಂತಾದ ಕಡೆ, ರಾಜ್ಯವಿಸ್ತರಣೆ ಮಾಡಿ ಈ ಸಮುದಾಯವನ್ನು ಇಲ್ಲಿ ನೆಲೆಗೊಳಿಸಿದ್ದು ಇಂದಿಗೆ ಇತಿಹಾಸ.
ರಾಮರಾಜಕ್ಷತ್ರಿಯ ಕುಟಂಬಗಳು ಪಿತೃಪ್ರಧಾನ ವ್ಯವಸ್ಥೆಯಾಗಿದ್ದು, ಕುಲ, ಗೋತ್ರ ಪ್ರವರಗಳ ಚೌಕಟ್ಟಿನಲ್ಲಿ ಬೆಳೆದು ನಿಂತಿದೆ. ಗೋತ್ರಪ್ರವರ್ತಕರ ಗುರುಕುಲದಲ್ಲಿ ವಿದ್ಯಾದೀಕ್ಷತರಾದ ನಮ್ಮ ಪೂರ್ವರನ್ನು ಆನುಸರಿಸಿ ಆಯಾ ಗೋತ್ರದಲ್ಲಿ ಈ ಸಮುದಾಯದ ಕುಟುಂಬಗಳು ಮುಂದುವರೆದಿದೆ. ಕುಟಂಬ ದೇವರು ಮತ್ತೊಂದು ಪ್ರಮುಖ ವಿಷಯ, ಪ್ರತಿ ಕುಟುಂಬವು ತಮ್ಮ ಕುಟುಂಬಕ್ಕೆ ಪ್ರತ್ಯೇಕ ದೇವರುಗಳನ್ನು ಹೊಂದಿದ್ದು ತಮ್ಮ ಸೈನ್ಯ ಜಮಾವಣೆಯಾದ ಕಡೆಗೆಲ್ಲಾ ಕುಟುಂಬದ ದೇವರನ್ನು ಕೊಂಡೊಯ್ದು ನೇಮದಿಂದ ಪೂಜಿಸಿದ್ದಿದೆ.
ಶಿವ ಹಾಗೂ ಶಕ್ತಿಯ ಆರಾಧಕರಾದ ಕಾರಣ ಕುಟುಂಬ ದೇವರುಗಳು ಮೂಲತಃ ಶಿವ ಮತ್ತು ಶಕ್ತಿಯ ಹೆಸರಿನಿಂದಲೇ ಕಂಡು ಬರುತ್ತವೆ. ಕೆಲವೊಂದು ಕುಟುಂಬಗಳು ಮಾತ್ರ ವಿಷ್ಣುವಿನ ಆರಾಧನೆಯನ್ನು ಒಳಗೊಂಡಿದೆ. ಅದೂ ಕೂಡ ಜಿಜ್ಞಾಸೆಗೆ ಒಳಪಡುವಂತದ್ದಾಗಿದೆ. ಕುಲದೇವರ ಆರಾಧನೆಯನ್ನು ಕುಟುಂಬದ ಮುಖ್ಯ ವ್ಯಕ್ತಿ ಮತ್ತು ಮನೆಯಲ್ಲಿ ಆರಾಧನೆ ಮನೆಯ ಯಜಮಾನ ನಡೆಸುವುದು ಈ ಸಮುದಾಯದ ಕೌಟುಂಬಿಕ ವೈಶಿಷ್ಟ್ಯ. ಮದುವೆ ಮತ್ತು ಇತರ ಶುಭ ಸಮಾರಂಭವನ್ನು ಕುಲಪುರೋಹಿತರು ನಡೆಸಿಕೊಡುವುದು ಇರುವ ಕ್ರಮ. ಈ ನೆಲೆಯಲ್ಲಿ ಕರಾಹ್ಡ ಬ್ರಾಹ್ಮಣರು ನಮ್ಮ ಕುಲಪುರೋಹಿತರಾದದ್ದು ಈ ಸಮುದಾಯ ಮಹಾರಾಷ್ಟ್ರದ ಗಡಿಗಳಲ್ಲಿ ನೆಲೆ ನಿಂತ ಮೇಲೆಯ.
ಇಂದಿನ ಪರಿಸ್ಥಿತಿ:
ಬಹು ಮುಖ್ಯವಾದ ನಮ್ಮ ಸಮುದಾಯದ ಸಮಸ್ಯೆಯೆಂದರೆ, ಅದು, ವಿಸ್ಮೃತಿ. ನಾವು ಅನೇಕ ವಿಷಯಗಳನ್ನು ಮರೆತದ್ದು ನಮ್ಮ ದೊಡ್ಡ ಹಿನ್ನಡೆ, ಕೆಲವನ್ನು ಕಾಲ ಮರೆಸಿತು, ಕೆಲವನ್ನು ನಾವು ಸ್ವತಃ ಮರೆಯುತ್ತಾ ಹೋದವು, ಮಕ್ಕಳಿಗೆ ಕೆಲವನ್ನು ಹೇಳಿಕೊಡಲು ಮರೆತೆವು, ಹಾಗಾಗಿ ಮುಂದಿನ ಜನಾಂಗ ಕೆಲವನ್ನು ಅರಿತುಕೊಳ್ಳುವಲ್ಲಿ ಸೋತಿತು.
ನಮ್ಮ ಭಾಷೆ ಶೈಲಿ ಕಾಸರಗೋಡನಿಂದ ಮಂಗಳೂರಿನ ಕಡೆಗೆ ಹೋಗುತ್ತಿದ್ದಂತೆ ಕೋಟೆ ಕನ್ನಡ ಮಂಗಳೂರು ಕನ್ನಡವಾಗಿ ಬದಲಾಯಿತು. ಹವ್ಯಕರು ಹವಿಗನ್ನಡವನ್ನು, ಗೌಡರು ಅರೆಭಾಷೆಯನ್ನು ಹೇಗೆ ಉಳಿಸಿದರೊ ಹಾಗೆ ನಾವು ಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಹೀಗಾಗಿ ಕೋಟೆ ಕನ್ನಡ ಅಳಿಯುವುದಕ್ಕೆ ಹೆಚ್ಚಿನ ಸಮಯ ಬೇಕಿಲ್ಲ.
ಎಲ್ಲಾ ಮನೆಯಲ್ಲೂ ನಮ್ಮ ಸಮುದಾಯದ ಕೆಲವು ಅತಿ ಪ್ರಮುಖ ಆಚರಣೆಗಳು ಕೈಯ್ದಾಗಿದೆ. ವಿಶೇಷವಾಗಿ ದೀಪಾವಳಿಯ ಆಚರಣೆ, ತುಳಸಿ ಹಬ್ಬದ ಆಚರಣೆ, ನಾಗರಪಂಚಮಿ, ವರ್ಷನೆಣೆ ಆಚರಣೆ ಮುಂತಾದವಲ್ಲಿ ಬಹುಮುಖ್ಯವಾದ ನಿಯಮಗಳನ್ನು ಕೈಬಿಡಲಾಗಿದೆ. ಮದುವೆಯ ಆಚರಣೆಯಲ್ಲೂ ಹೇರಳವಾಗಿ ಪ್ರಮುಖ ಆಚರಣೆಗಳನ್ನು ಕೈಬಿಡಲಾಗಿರುವುದು ವಿಷಾದನೀಯ.
ಸಂಘಟನಾತ್ಮಕವಾಗಿ ಅನೇಕ ಸಂಘಗಳು ಕಾರ್ಯನಿರ್ವಹಿಸುತ್ತಿವೆ. ಜಾತಿ ಸಂಘಗಳು ತಮ್ಮ ಶಕ್ತಿಮೀರಿ ಶ್ರೇಯೋಭಿವೃದ್ಧಿಗಾಗಿ ತೊಡಗಿವೆ. ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಬೀರಂತಬೈಲು ಕಾಸರಗೋಡು ಈ ಸಂಘ 90ನೇ ವಾರ್ಷಿಕ ಸಂಭ್ರಮದಲ್ಲಿ ಇರುವುದೇ ಇದಕ್ಕೆ ಸಾಕ್ಷಿ. ಆದರೆ, ಹೆಚ್ಚಿನ ಸಂಘಗಳು ತಮ್ಮ ವ್ಯಾಪ್ತಿಯ ಯುವ ಸಮುದಾಯವನ್ನು ಸೆಳೆಯುವಲ್ಲಿ ಹೆಣಗಾಡುತ್ತಿವೆ. ಮಂಗಳೂರಿನ ಕಡೆ ಬಂಟರ, ಬಿರುವೆರ ಯುವ ಸಂಘಗಳ ಬಲಿಷ್ಠತೆಯನ್ನು ನೋಡುವಾಗ ನಮ್ಮ ಸಮುದಾಯದಲ್ಲಿ ಯುವ ಸಂಘ ಹಿಂದೆ ಬಿದ್ದದ್ದು ಕಾಣಿಸುತ್ತದೆ. ಯುವ ಸಮುದಾಯ, ನಮ್ಮ ಸಮಾಜದ ಅಧ್ಯಯನ, ಸಂಶೋಧನೆ, ಪರಂಪರೆಯ ಅನಾವರಣ, ಪದ್ಧತಿಗಳ ಅನುಷ್ಠಾನ ಮತ್ತು ರಾಜಕೀಯವಾದ ಸಬಲತೆಯ ಕಡೆಗೆ ಒತ್ತು ಕೊಡದಿರುವುದನ್ನು ನಾವು ಕಾಣಬಹುದಾಗಿದೆ.
ನಿರೀಕ್ಷೆ:
ನಮ್ಮ ಸಮುದಾಯದ ಮುಂದೆ ಅನೇಕ ನಿರೀಕ್ಷೆಗಳು ಇವೆ. ರಾಜಕೀಯಾಗಿ ಸಾಮುದಾಯಿಕ ಹಕ್ಕೊತ್ತಾಯವನ್ನು ಮಾಡಬೇಕಾದದ್ದು ಬಹಳ ಪ್ರಮುಖವಾದುದು. ಕಡಿಮೆ ಸಂಖ್ಯೆಯಿರುವ ಸಮುದಾಯಗಳೂ ಕೂಡ ತಮ್ಮ ಪ್ರಭಾವವನ್ನು ತೋರಿಸುತ್ತಿರುವುದನ್ನು ನೋಡುವಾಗ, ನಮ್ಮ ಸಮುದಾಯ ರಾಜಕೀಯದ ಪ್ರಭಾವಲಯದ ಪರಿಧಿಯಿಂದ ಕೊಂಚ ದೂರ ಉಳಿಯಿತುಎಂದು ಅನ್ನಿಸದಿರದು. ಈ ನಿಟ್ಟಿನಲ್ಲಿ ಪಡೆಯಬೇಕಾದ ಸೌಲಭ್ಯಗಳನ್ನು ಒಗಟ್ಟಿನಿಂದ ದಕ್ಕಿಸಿಕೊಳ್ಳುವ ಅಗತ್ಯವಿದೆ.
ಯುವ ಸಮುದಾಯವನ್ನು ಸಂಘಟನೆಯ ಕಡೆ ಕರೆತರುವ ಗುರುತರ ಜವಾಬ್ದಾರಿ ಇದೆ. ಇದು ಕೇವಲ ಭಜನಾ ಸಂಘಗಳಿಗೆ ಸೀಮಿತವಾಗದೆ ಇಂದಿನ ತುರ್ತುಗಳಾದ ವಿದ್ಯೆ, ಉದ್ಯೋಗ, ಕೌಶಲ್ಯ, ಸಾಮಾಜೀಕರಣ, ವಿವಾಹ ವೇದಿಕೆ ಮುಂತಾದವುಗಳನ್ನೂ ಒಳಗೊಂಡಿರಬೇಕು. ಯುವ ಸಮುದಾಯವು ಕೂಡ ತಮ್ಮ ಸ್ವ ಆಸಕ್ತಿಯಿಂದ ನಮ್ಮ ಸಮುದಾಯದ ನೆಲೆ, ಇತಿಹಾಸ, ಸ್ಥಿತಿಗತಿ, ಆಚರಣೆ, ಪದ್ಧತಿ, ಭಾಷಾ ವೈಶಿಷ್ಟ್ಯವೇ ಮೊದಲಾದವುಗಳ ಬಗ್ಗೆ ಸಂಶೋಧನೆ, ಅಧ್ಯಯನವನ್ನು ನಡೆಸಿ, ನಮ್ಮ ಸಮುದಾಯದ ತಜ್ಞರು, ವಿದ್ವಾಂಸರು, ಕವಿ, ಕಲಾವಿದರನ್ನು ಸಂದರ್ಶಿಸಿ ಅದರ ಹೂರಣವನ್ನು ಸಮುದಾಯದಲ್ಲಿ ದೊರಕುವಂತೆ ಮಾಡಬೇಕು.
ತಂತ್ರಜ್ಞಾನದ ಯುಗದಲ್ಲಿಯೂ ನಮ್ಮ ಸಮುದಾಯದ ಬಗ್ಗೆ ಆನ್ಲೈನ್ ಮಾಹಿತಿ ಹುಡುಕಿದರೂ ಹೆಚ್ಚೇನೂ ಮಾಹಿತಿ ಸಿಗುವುದೇ ಇಲ್ಲ. ಈ ನಿಟ್ಟಿನಲ್ಲಿ ಲೇಖನಗಳು, ಬಿಡಿ ಬರೆಹಗಳು, ಸಂವಾದಗಳು, ಸಂದರ್ಶನಗಳು ಜನಸಮುದಾಯವನ್ನು ತಲುಪುವಂತೆ ಮಾಡಬೇಕಿದೆ.
ಜೊತೆಗೆ ಈಗಾಗಲೇ ಸಮುದಾಯದಲ್ಲಿ ಗುರುತಿಸಲ್ಪಟ್ಟ ಹಿರಿಯರು ಯುವ ಸಮುದಾಯಕ್ಕೆ ಆಗಾಧ ಪ್ರೋತ್ಸಾಹ, ಜಾತಿ ಸಂಘಟನೆಗಳು ಆರ್ಥಿಕ, ಭಾವನಾತ್ಮಕ, ಮನೋಸಾಮಾಜಿಕ ನೆರವನ್ನು ಆನುಕೂಲವಿಲ್ಲದ ಮನೆಗಳನ್ನು ಗುರುತಿಸಿ ನೀಡಬೇಕು.
ಒಂದು ಪ್ರದೇಶದಲ್ಲಿ ನೆಲೆ ನಿಂತ ಒಂದು ಚೌಕಟ್ಟಿನಲ್ಲಿ ಬದುಕುವ ಜನಸಮುದಾಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ರಾಜಕೀಯವಾಗಿ ಗಟ್ಟಿಗೊಳ್ಳಬೇಕಾದರೆ ಅದು ತನ್ನ ಪೂರ್ವ ಇತಿಹಾಸವನ್ನೂ, ಇಂದಿನ ತುರ್ತನ್ನೂ, ಮು೦ದಿನ ಸವಾಲುಗಳನ್ನು ಒಟ್ಟಾಗಿ ಎದುರಿಸಲು ಸಿದ್ಧವಿರಬೇಕು. ಹೇಗೆ ಎದುರಿಸಬೇಕಾದರೆ ಅದಕ್ಕೆ ಪೂರಕವಾಗಿ ಸಮುದಾಯ ತನ್ನ ಒಟ್ಟು ಸ್ವಬಾಂಧವರನ್ನು ಜೊತೆಯಾಗಿ ಕರೆದುಕೊಂಡು ಮುಂದೆ ಹೋಗಬೇಕಾಗುತ್ತದೆ. ತನ್ನ ಮತ್ತು ಕೇವಲ ತನ್ನದ್ದಷ್ಟೆ ನೋಡುವ ಯಾವ ಸಮುದಾಯವು ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲು ಸಾಧ್ಯವಿಲ್ಲ. ತನ್ನವರನ್ನು ಜೊತೆಗೆ ಸೇರಿಸಿ ಮುಂದುವರೆಯುವ ಮತ್ತು ತನ್ನವರಲ್ಲಿ ಯಾರೇ ಹಿಂದೆ ಬಿದ್ದರೂ ಅವರನ್ನು ಕೈಹಿಡಿದು ಮೇಲೆತ್ತುವ, ಪ್ರೋತ್ಸಾಹಿಸುವ ಸಮುದಾಯವು ಬಹಳ ಬೇಗ ಸಮಾಜದಲ್ಲಿ ಅಭಿವೃದ್ಧಿಯನ್ನು ಹೊಂದುತ್ತವೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯವೂ ಕಾರ್ಯಪ್ರವ್ಯಕ್ರವಾಗಬೇಕಾದದ್ದು ಇಂದಿನ ತುರ್ತು.
(ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ (ರಿ) ಇದರ 90ನೇ ವಾರ್ಷಿಕ ಸಂಭ್ರಮ ಮಹಿಳಾ ಸಮಾವೇಶದಲ್ಲಿ ಮಂಡಿಸಿದ ವಿಷಯ)