Monday, 21 March 2022

ತೇರು

ಊರ ಬೀದಿಯ ಕೊನೆಗೆ 
ತೇರೊಂದು ನಿಂತಿಹುದು
ತೇರಿನಲಿ ನಗುತಿಹಳು
ಊರ ತಾಯಿ

ಸೋತು ಬಂದಿಹ ಮಂದಿ
ತಾಯ ಮಡಿಲಿಗೆ ಬಂದು
ಕೈ ಮುಗಿದು ಬೇಡುವರು
ನೀನೆ ಕಾಯಿ

ಉಟ್ಟ ಹಸಿರಿನ ಸೀರೆ
ಹಣೆಯ ಕೆಂಪನೆ ಬೊಟ್ಟು
ತಾಳೆಂದು ಕೈದೋರಿ
ಅಭಯ ಮುದ್ರೆ

ತಾಯ ಸಾನಿಧ್ಯದಲಿ
ಅವಳ ಸಾಮಿಪ್ಯದಲಿ
ಧೈರ್ಯ ತುಂಬುತಲಿಹಳು
ಲೋಕಭದ್ರೆ

ತೇರನೆಳೆವರು ಮಂದಿ
ಗುಡಿಯ ಸುತ್ತಲು ಒಮ್ಮೆ
ಬದುಕು ಎಂದರು ಕೂಡ 
ಇಷ್ಟೆ ತಾನೆ?

ನಮ್ಮ ಬದುಕನು ನಾವೆ
ಎಳೆದು ನಡೆಸಲು ಬೇಕು
ಚಲನೆ ಎಂಬುವುದಿಲ್ಲಿ
ಬದುಕು ತಾನೆ?

ದೇಹವೇ ತೇರಾಗಿ
ನಿಂತಿಹುದು ಬಯಲಲ್ಲಿ
ಎದೆಗುಡಿಯ ಒಳಗಿಹಳು
ಲೋಕಶಕ್ತಿ

ಕಷ್ಟಕೋಟಲೆಯಿರಲಿ
ದುಃಖ ಸಂಕಟ ಬರಲಿ
ಬದುಕ ತೇರಿಗೆ ಇರಲಿ
ಅಮಿತಶಕ್ತಿ

ಯೋಗೀಶ್ ಮಲ್ಲಿಗೆಮಾಡು


No comments:

Post a Comment

Note: only a member of this blog may post a comment.